Vande Bharat Express ರಕ್ಷಣೆಗೆ ಹೊಸ ತಂತ್ರ, ಇಲ್ಲಿದೆ ಮಾಹಿತಿ
ದೇಶದ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಪದೇ ಪದೇ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರೈಲ್ವೆ ಇಲಾಖೆ ಕೊನೆಗೂ ಉಪಾಯ ಹುಡುಕಿದೆ.
ನವದೆಹಲಿ, ಜನವರಿ 27: ದೇಶದ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಪದೇ ಪದೇ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರೈಲ್ವೆ ಇಲಾಖೆ ಕೊನೆಗೂ ಉಪಾಯ ಹುಡುಕಿದೆ.
ವಂದೇ ಭಾರತ್ ಓಡಾಡುವ ಟ್ರಾಕ್ ಮೇಲೆ ಜಾನುವಾರುಗಳು ಓಡಾಟವನ್ನು ತಪ್ಪಿಸಲು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) 620 ಕಿಮೀ ಉದ್ದದ ಮುಂಬೈ- ಅಹಮದಾಬಾದ್ ಮಾರ್ಗದಲ್ಲಿ ಲೋಹದ ತಂತಿಗಳನ್ನು ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಿದೆ. ಗುಜರಾತ್ನ ವಡೋದರಾ ರೈಲ್ವೆ ವಿಭಾಗದ ವತಿಯಿಂದ ಅಂಕಲೇಶ್ವರ-ಭರೂಚ್ ವಿಭಾಗದಲ್ಲಿ ಜನನಿಬಿಡ ಮಾರ್ಗದಲ್ಲಿ ಮೆಟಲ್ ಬೀಮ್ ಫೆನ್ಸಿಂಗ್ ಅನ್ನು ಹಾಕುವ ಕೆಲಸ ಪ್ರಾರಂಭವಾಗಿದ್ದು, ಅದು ಭರದಿಂದ ಸಾಗುತ್ತಿದೆ ಎಂದು ಡಬ್ಲ್ಯುಆರ್ನ ಮುಖ್ಯ ವಕ್ತಾರ ಸುಮಿತ್ ಠಾಕೂರ್ ತಿಳಿಸಿದ್ದಾರೆ.
Vande Bharat Express: ಸ್ಲೀಪರ್ ಕೋಚ್ ರೈಲುಗಳ ವೇಗ, ವಿನ್ಯಾಸ- ಮಾಹಿತಿ, ವಿವರಗಳು ಇಲ್ಲಿವೆ
ಕಳೆದ ವರ್ಷ ಸೆಪ್ಟೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈ ಮತ್ತು ಗಾಂಧಿನಗರ ನಡುವಿನ ಪ್ರತಿಷ್ಠಿತ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಉದ್ಘಾಟಿಸಿದ್ದರು. ಇದು ಉದ್ಘಾಟನೆಗೊಂಡ ಎರಡನೇ ದಿನದಿಂದ ಅನೇಕ ಜಾನುವಾರು ರೈಲಿಗೆ ಸಿಲುಕಿ ಡಿಕ್ಕಿ ಹೊಡೆದಿದ್ದವು. ಪ್ರಾಣಿಗಳು ಹಳಿಗಳ ಮೇಲೆ ದಾಟುವುದನ್ನು ತಪ್ಪಿಸಲು ಮಾರ್ಗದ ಉದ್ದಕ್ಕೂ ಲೋಹದ ತಂತಿ ಬೇಲಿಗಳನ್ನು ಸ್ಥಾಪಿಸಲು ಪಶ್ಚಿಮ ರೈಲ್ವೆ ವಿಭಾಗ ನಿರ್ಧರಿಸಿತ್ತು.
ಮೆಟಲ್ ಫೆನ್ಸಿಂಗ್ 622 ಕಿ.ಮೀ ಉದ್ದವನ್ನು ಆವರಿಸಲಿದ್ದು, ಸಂಪೂರ್ಣ ಯೋಜನೆಗೆ ₹ 245.26 ಕೋಟಿ ವೆಚ್ಚವಾಗಲಿದೆ. ಎಲ್ಲಾ ಎಂಟು ಟೆಂಡರ್ಗಳಲ್ಲಿ ಟೆಂಡರ್ಗಳನ್ನು ನೀಡಲಾಗಿದೆ. ಬೇಲಿ ಹಾಕುವ ಕೆಲಸವು ಭರದಿಂದ ಸಾಗುತ್ತಿದೆ. ಮುಂದಿನ 4 ರಿಂದ 5 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಡಬ್ಲ್ಯುಆರ್ ಮುಖ್ಯ ವಕ್ತಾರ ಠಾಕೂರ್ ಹೇಳಿದರು.
Vande Bharat Express : ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ, 5 ಗಂಟೆ ಪ್ರಯಾಣ!
ಉಕ್ಕಿನಿಂದ ಮಾಡಿದ ಗಾರ್ಡರೈಲ್ ಬಳಕೆ
ಈ ಯೋಜನೆಯು ಪೂರ್ಣಗೊಂಡ ನಂತರ, ಜಾನುವಾರುಗಳು ರೈಲು ಸಂಚಾರ ಸಂದರ್ಭ ಓಡಿಹೋಗುವ ಘಟನೆಗಳನ್ನು ತಡೆಗಟ್ಟಲು ಮತ್ತು ರೈಲುಗಳ ಸುಗಮ ಸಂಚಾರವನ್ನು ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಮುಂಬೈನ ಪ್ರಧಾನ ಕಚೇರಿಯ ಪ್ರಕಾರ, ಫೆನ್ಸಿಂಗ್ ಕೆಲಸಕ್ಕೆ ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸುವ ಬದಲು ಉಕ್ಕಿನಿಂದ ಮಾಡಿದ ಗಾರ್ಡರೈಲ್ಗಳನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದೆ.
ಅಗಲವಾದ ಫ್ಲೇಂಜ್ಗಳೊಂದಿಗೆ ದಪ್ಪನಾದ ಬೀಮ್
ಫೆನ್ಸಿಂಗ್ ತುಂಬಾ ದೃಢವಾಗಿದೆ. ಏಕೆಂದರೆ ಇದು ಎರಡು ಬೀಮ್ಗಳನ್ನು ಒಳಗೊಂಡಿದೆ. ಅದು ಅಗಲವಾದ ಫ್ಲೇಂಜ್ಗಳೊಂದಿಗೆ ದಪ್ಪವಾಗಿರುತ್ತದೆ, ಇದು ಬೆಂಡ್ ಒತ್ತಡವನ್ನು ಪ್ರತಿರೋಧಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ. ಅಂತಹ ಫೆನ್ಸಿಂಗ್ ಅನ್ನು ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳ ಜೊತೆಗೆ ವಿಶೇಷವಾಗಿ ಅಪಘಾತ ಪೀಡಿತ ಪ್ರದೇಶಗಳಲ್ಲಿ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ರಕ್ಷಣೆ ನೀಡಲು ಬಳಸಲಾಗುತ್ತದೆ ಎಂದು ರೈಲ್ವೆ ಆಡಳಿತವು ತಿಳಿಸಿದೆ.
ರೈಲ್ವೆ ಆಸ್ತಿಗೆ ನಷ್ಟ: ಇಲಾಖೆ
ರೈಲ್ವೆ ಟ್ರ್ಯಾಕ್ ಮೇಲೆ ಓಡುವ ಜಾನುವಾರುಗಳು ರೈಲು ಕಾರ್ಯಾಚರಣೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ ಅಪಘಾತಗಳ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ರೈಲ್ವೆ ಆಸ್ತಿಗೆ ನಷ್ಟವನ್ನು ಉಂಟುಮಾಡುತ್ತವೆ. ಇಂತಹ ಘಟನೆಗಳು ಜಾನುವಾರುಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತವೆ ಮತ್ತು ಅವುಗಳ ಮಾಲೀಕರಿಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತವೆ ಎಂದು ಡಬ್ಲ್ಯುಆರ್ ಹೇಳಿದೆ.
ಸ್ಥಳೀಯರಿಗೆ ಜಾಗೃತಿ ಅಭಿಯಾನ
ಈ ಮಧ್ಯೆ ಮುಂಬೈ ವಿಭಾಗದ ಅಡಿಯಲ್ಲಿ ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ದುರ್ಬಲ ಸ್ಥಳಗಳನ್ನು ಗುರುತಿಸಿದ್ದಾರೆ. ಜಾನುವಾರು ದಾಳಿಯ ಘಟನೆಗಳನ್ನು ತಡೆಯಲು ಆಗಾಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಇದಲ್ಲದೆ, ರೈಲ್ವೇ ಹಳಿಗಳ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಸರಪಂಚ್ಗಳೊಂದಿಗೆ ಆರ್ಪಿಎಫ್ ಸಭೆಗಳನ್ನು ನಡೆಸಿದೆ. ತಮ್ಮ ಸಾಕುಪ್ರಾಣಿಗಳನ್ನು ರೈಲ್ವೆ ಹಳಿಗಳ ಬಳಿ ಬರಲು ಬಿಡಬೇಡಿ ಎಂದು ಪಶ್ಚಿಮ ರೈಲ್ವೆ ಜಾನುವಾರು ಮಾಲೀಕರು ಮತ್ತು ಮೇಯಿಸುವವರಿಗೆ ಮನವಿ ಮಾಡಿದೆ ಎಂದು ಠಾಕೂರ್ ಹೇಳಿದರು.