ಸರಕಾರಿ ಬಂಗ್ಲೇನೂ ಬೇಡ; ಕಾರು ಬೇಡ: ಕೇಜ್ರಿವಾಲ್

ನಿನ್ನೆ ಪೊಲೀಸ್ ಭದ್ರತೆ ಬೇಡವೆಂದಿದ್ದ ದೆಹಲಿಯ ಭಾವಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾರು ಇಂದು ಮುಖ್ಯಮಂತ್ರಿಗೆ ನೀಡಲಾಗುವ ಸರಕಾರಿ ಬಂಗಲೆ ಸಹ ಬೇಡವೆಂದು ಹೇಳಿದ್ದಾರೆ. (ಇವರೇ ದಿಲ್ಲಿ ನೂತನ ಮುಖ್ಯಮಂತ್ರಿ ಕೇಜ್ರಿವಾಲ್!)
ಸರಕಾರದ ವತಿಯಿಂದ ಅತಿ ಗಣ್ಯ ವ್ಯಕ್ತಿಗಳಿಗೆ ನೀಡಲಾಗುವ ಭಾರಿ ಭದ್ರತೆಯ ಬಂಗಲೆ ಬೇಡವೆಂದು ಕೇಜ್ರಿವಾಲ್ ಅವರು ಅಧಿಕೃತವಾಗಿ ಸರಕಾರಕ್ಕೆ ತಿಳಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಕುರಿತು ಹಾಗೂ ಸಚಿವ ಸಂಪುಟ ಸೇರುವ ಶಾಸಕರ ಕುರಿತು ಮಾಹಿತಿ ಪಡೆದುಕೊಳ್ಳಲು ಇಂದು ತಮ್ಮನ್ನು ಭೇಟಿಯಾಗಿದ್ದ ದೆಹಲಿ ಮುಖ್ಯ ಕಾರ್ಯದರ್ಶಿಗೆ ಕೇಜ್ರಿವಾಲ್ ಅವರು ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿ ಕೇಜ್ರಿವಾಲ್ ಅವರು 1989ನೇ ಬ್ಯಾಚಿನ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಅವರನ್ನು ತಮ್ಮ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದಾರೆ. ರಾಜೇಂದ್ರ ಕುಮಾರ್ ಅವರು ಖರಗಪುರ ಐಐಟಿ ಪದವೀಧರ.
ಕಾಂಗ್ರೆಸ್ಸಿನ 8 ಶಾಸಕರ ಬಾಹ್ಯ ಬೆಂಬಲದಿಂದ ಆಮ್ ಆದ್ಮಿ ಪಕ್ಷವು (ಎಎಪಿ) ಅಲ್ಪಸಂಖ್ಯಾತ ಸರಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ. ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಡಿ.26 ರಂದು ಪ್ರಮಾಣ ವಚನ ಸ್ವೀಕಾರ ಮಾಡುವುದು ಖಾತ್ರಿಯಾಗಿದೆ.
ಈ ಮಧ್ಯೆ, ಕೇಜ್ರಿವಾಲ್ ಸಂಪುಟದಲ್ಲಿ ಯಾರು ಯಾರು ಸ್ಥಾನ ಪಡೆಯಲಿದ್ದಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 11 ಶಾಸಕರು ಸಚಿವ ಸ್ಥಾನ ಪಡೆಯಲು ಅವಕಾಶವಿರುತ್ತದೆ. ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷದ 28 ಜನ ಶಾಸಕರಾಗಿ ಆಯ್ಕೆಯಾಗಿರುವುದರಿಂದ ಈ ಪೈಕಿ ಆ 11 ಜನ ಯಾರೆಲ್ಲಾ ಸಚಿವರಾಗುತ್ತಾರೆ ಎಂಬುದು ಈಗ ಚರ್ಚೆಯ ವಿಚಾರವಾಗಿದೆ.
ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನ?:
ಸದ್ಯ ಪಕ್ಷದಲ್ಲಿ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದರೆ ಉಳಿದಂತೆ 10 ಶಾಸಕರಿಗೆ ಸಂಪುಟದಲ್ಲಿ ಅವಕಾಶವಿರುತ್ತದೆ. ಸದ್ಯಕ್ಕೆ, ಪಕ್ಷದಲ್ಲಿ ದೆಹಲಿಯ ಪ್ರತಾಪ್ ಗಂಜ್ ವಿಧಾನಸಭಾ ಕ್ಷೇತ್ರದ ಶಾಸಕ ಮಾನಿಷ್ ಸಿಸೋಡಿಯಾ (ಮಾಜಿ ಪತ್ರಕರ್ತರು), ಮಾಳವೀಯ ನಗರ ಕ್ಷೇತ್ರದ ಶಾಸಕ ಸೋಮನಾಥ್ ಭಾರತಿ, ಮಂಗೋಲ್ಪುರಿ ಕ್ಷೇತ್ರದ ರಾಖಿ ಬಿರ್ಲಾ (ಮಾಜಿ ಪತ್ರಕರ್ತೆ), ಮಾಡೆಲ್ ಟೌನ್ ಪ್ರದೇಶದ ಅಖಿಲೇಶ್ ತ್ರಿಪಾಠಿ, ಗ್ರೇಟರ್ ಕೈಲಾಶ್ ಕ್ಷೇತ್ರದ ಸೌರಭ್ ಭಾರದ್ವಾಜ್ ಹಾಗೂ ಮಾಜಿ ಕಾಂಗ್ರೆಸ್ಸಿಗ ಲಕ್ಷ್ಮೀನಗರ ಕ್ಷೇತ್ರದ ವಿನೋದ್ ಕುಮಾರ್ ಖಿನ್ನಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಉಳಿದ ನಾಲ್ವರು ಯಾರಾಗಬಹುದು ಎಂಬುದು ಖಾತ್ರಿಯಾಗಿಲ್ಲವಾದರೂ, ಈ ಆರೂ ಹೆಸರುಗಳು ಮಾತ್ರ ಮುಂಚೂಣಿಯಲ್ಲಿವೆ.
ಅರುಣ್ ಜೇಟ್ಲಿ ಕಿಡಿ ಕಿಡಿ :
AAPಯಂತಹ ಪಕ್ಷಕ್ಕೆ ಸಹಾಯಕನಾಗಿ ಕೆಲಸ ಮಾಡಲು ಒಪ್ಪಿರುವ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕ ಅರುಣ್ ಜೇಟ್ಲಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಸವಾಲನ್ನು ಮೆಟ್ಟಿ ನಿಲ್ಲುವ ಏಕೈಕ ಉದ್ದೇಶದಿಂದ AAP ಪಕ್ಷವು ಕಾಂಗ್ರೆಸ್ ಪಕ್ಷದ ಜತೆ ಕೈಜೋಡಿಸಿರುವುದ ವಿಪರ್ಯಾಸವೇ ಸರಿ ಎಂದು ಕಿಡಿಕಾರಿದ್ದಾರೆ.












Click it and Unblock the Notifications