ಯಾಸ್ ಚಂಡಮಾರುತ: ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರದಲ್ಲಿ ಎನ್ಡಿಆರ್ಎಫ್ ಪಡೆ ಸಜ್ಜು
ನವದೆಹಲಿ, ಮೇ 24: ಯಾಸ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ತನ್ನ ಅಬ್ಬರವನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ವಹಿಸಿಕೊಳ್ಳಲಾಗಿದ್ದು ಅಪಾಯಕಾರಿ ಪ್ರದೇಶಗಳಿಗೆ ಎಚ್ಚರಿಕೆಯನ್ನು ರವಾನಿಸಲಾಗಿದೆ. ಈ ಮಧ್ಯೆ ಇಂದು ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ಕಳುಹಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ 35 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಚಂಡಮಾರುತದ ಪ್ರಭಾವ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿಯೂ ಹೆಚ್ಚಾಗುವ ನಿರೀಕ್ಷೆಯಿದ್ದು ಎನ್ಡಿಆರ್ಎಫ್ ಪಡೆ ಸನ್ನಧವಾಗಿದೆ.
ಜೆಮ್ಶೆಡ್ಪುರ ಹಾಗೂ ರಾಂಚಿ ನಗರಗಳಲ್ಲಿಯೂ ಚಂಡಮಾರುತದ ಪ್ರಭಾವವಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೆಲ ತಂಡಗಳನ್ನು ಈ ಭಾಗದಲ್ಲಿಯೂ ನಿಯೋಜಿಸಲಾಗಿದೆ ಎಂದು ಎನ್ಡಿಆರ್ಎಫ್ನ ಡಿಜಿಎಸ್ಎನ್ ಪ್ರಧಾನ್ ಮಾಹಿತಿ ನೀಡಿದ್ದಾರೆ.
ಇನ್ನು ಭಾರತೀಯ ಹವಾಮಾನ ಇಲಾಖೆ ಬಿಹಾರದಲ್ಲಿಯೂ ಚಂಡಮಾರುತದ ಪ್ರಭಾವ ಇರುವ ಕಾರಣದಿಂದಾಗಿ ಬ್ಲೂ ಅಲರ್ಟ್ ಘೋಷಿಸಿದೆ. ಮತ್ತೊಂದೆಡೆ ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಯಾಸ್ ಚಂಡಮಾರುತದಿಂದ ಉಂಟಾಗಬಹುದಾದ ನಷ್ಟವನ್ನು ತಪ್ಪಿಸಲು ಎಲ್ಲಾ ಹಡಗುಗಳನ್ನು ಡಾಕ್ಗೆ(ಹಡಗು ನಿಲ್ಲುವ ಸ್ಥಳ) ಸ್ಥಳಾಂತರಿಸಲಾಗಿದೆ.