ನವರಾತ್ರಿ 2022: ಗುಜರಾತ್ನಾದ್ಯಂತ ಗರ್ಬಾ ಸ್ಥಳಗಳಲ್ಲಿ ಹೊಡೆದಾಟ, ಘರ್ಷಣೆ, ಬಂಧನದ ವರದಿ
ನವರಾತ್ರಿಯ ಸಮಯದಲ್ಲಿ ಗುಜರಾತ್ನಾದ್ಯಂತ ಗರ್ಬಾ ಸ್ಥಳಗಳಲ್ಲಿ ಹೊಡೆದಾಟಗಳು, ಘರ್ಷಣೆಗಳು ಮತ್ತು ಕಲ್ಲು ತೂರಾಟಗಳು ವರದಿಯಾಗಿವೆ. ಅವುಗಳಲ್ಲಿ ಪ್ರಮುಖವಾದವು ವಡೋದರಾ, ಸೂರತ್ ಮತ್ತು ಖೇಡಾದಿಂದ ವರದಿಯಾಗಿವೆ. ಈ ಘಟನೆಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಹಿಂಸಾತ್ಮಕವಾಗಿ ಘರ್ಷಣೆ ನಡೆಸಿವೆ.
ಈ ಬಾರಿ ನವರಾತ್ರಿ ಆಚರಣೆಗೆ ಹಿಂದೂಗಳನ್ನು ಹೊರತುಪಡಿಸಿ ಹಿಂದೂಯೇತರರು ಗರ್ಬಾ ನೃತ್ಯದಲ್ಲಿ ಭಾಗವಹಿಸುತ್ತಿಲ್ಲ ಮತ್ತು ಗರ್ಬಾ ತರಗತಿಗಳಿಗೆ ಹಿಂದೂಯೇತರರನ್ನು ಸೇರಿಸಿಕೊಳ್ಳಬಾರದು ಎಂದು ನಿರ್ಬಂಧ ವಿಧಿಸಲಾಗಿದೆ. ಇತ್ತೀಚೆಗೆ ಗುಜರಾತ್ನಲ್ಲಿ ಲವ್ ಜಿಹಾದ್ ಸಾಕಷ್ಟು ಸದ್ದು ಮಾಡಿತ್ತು. ಇದೀಗ ನವರಾತ್ರಿ ಹಬ್ಬದ ಆಚರಣೆ ಹಾಗೂ ಗರ್ಬಾ ತರಗತಿಗಳ ಸಂಘಟಕರಿಗೆ ಕೆಲವು ಹಿಂದೂ ಸಂಘಟನೆಗಳು ಮತ್ತು ಸೂರತ್ನ ಬಿಜೆಪಿ ಕೌನ್ಸಿಲರ್ಗಳು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಸೂರತ್ನ ಪ್ರತಿಷ್ಠಿತ ಖೋಡಲ್ಧಾಮ್ ಸಂಸ್ಥೆ ಕೂಡ ಗರ್ಬಾ ತರಗತಿಗಳಿಗೆ ಹಿಂದೂಯೇತರರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಗರ್ಬಾ ಆಡುವವರ ಗುರುತಿನ ಚೀಟಿ ಪರಿಶೀಲಿಸಲಾಗುವುದು. ಅಲ್ಲದೇ, ನವರಾತ್ರಿ ಸಂದರ್ಭದಲ್ಲಿ ಹಿಂದೂ ಯುವತಿಯರು ಬೇರೆ ಯಾವುದೇ ಧರ್ಮದ ಯುವಕರನ್ನು ಭೇಟಿ ಆಗುವುದನ್ನು ತಡೆಯಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಧಾರ್ಮಿಕ್ ಮಾಳವೀಯ ತಿಳಿಸಿದ್ದಾರೆ. ಇದರ ಹೊರತಾಗಿಯೂ ದಾಂಡಿಯಾ ವೇಳೆ ಕೆಲ ಹಿಂದೂಯೇತರರು ಪೆಂಡಾಲ್ಗಳಿಗೆ ಪ್ರವೇಶಿಸುವ ಮೂಲಕ ಗಲಭೆ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.
ಸೂರತ್ನಲ್ಲಿ ಗರ್ಬಾ ಸ್ಥಳದಲ್ಲಿ ಮುಸ್ಲಿಂ ಬೌನ್ಸರ್ಗಳ ನಿಯೋಜನೆ, ಘರ್ಷಣೆ
ಸೂರತ್ನಲ್ಲಿ ಗರ್ಬಾ ಸ್ಥಳದಲ್ಲಿ ಮುಸ್ಲಿಂ ಬೌನ್ಸರ್ಗಳನ್ನು ನಿಯೋಜಿಸಿದ್ದು ಘರ್ಷಣೆಗೆ ಕಾರಣವಾಯಿತು. ಸುಮಾರು 60 ಮುಸ್ಲಿಂ ಬೌನ್ಸರ್ಗಳು ಗರ್ಬಾ ಸ್ಥಳದಲ್ಲಿ ನಿಂತಿದ್ದರು ಮತ್ತು ಗಲಾಟೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಈ ಘಟನೆಯ ಪೊಲೀಸ್ ವರದಿ ಬಂದಿಲ್ಲ.
ಗರ್ಬಾ ಆಡುವ ನೆಪದಲ್ಲಿ ಬಜರಂಗದಳದ ಕಾರ್ಯಕರ್ತರು ಸೂರತ್ನ ವೇಸು ಪ್ರದೇಶದ ಠಾಕೂರ್ ಜಿ ವಾಡಿ ಗರ್ಬಾ ಪಂಡಲ್ಗೆ ತೆರಳಿದ್ದಾರೆ. ಸ್ಥಳದಲ್ಲಿ ಮುಸ್ಲಿಂ ಪುರುಷರನ್ನು ಬೌನ್ಸರ್ಗಳಾಗಿ ನಿಯೋಜಿಸಲಾಗಿದೆಯೇ ಎಂದು ಪರಿಶೀಲಿಸಲು ಅವರು ಬಯಸಿದ್ದರು. ಅವರ ಮಾಹಿತಿಯನ್ನು ಪರಿಶೀಲಿಸಿದ ನಂತರ ಗುಂಪಿನ ಕಾರ್ಯಕರ್ತರು ಸಂಘಟಕರನ್ನು ಮುಸ್ಲಿಂ ಪುರುಷರನ್ನು ನೇಮಿಸಿಕೊಳ್ಳದಂತೆ ವಿನಂತಿಸಿದರು. ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೂ ಸೂರತ್ನಲ್ಲಿ ಗರ್ಬಾ ಸ್ಥಳದಲ್ಲಿ ಮುಸ್ಲಿಂ ಬೌನ್ಸರ್ಗಳನ್ನು ನಿಯೋಜಿಸಿದ್ದು ಘರ್ಷಣೆಗೆ ಕಾರಣವಾಗಿದೆ. ಸೋಮವಾರ ರಾತ್ರಿ, ಮುಸ್ಲಿಂ ಬೌನ್ಸರ್ಗಳು ಗರ್ಬಾ ಸಂಘಟಕರಾಗಿರುವುದು ಕಂಡುಬಂದಿದೆ. ಆಕ್ರೋಶಗೊಂಡ ಬಜರಂಗದಳದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದು ಬೌನ್ಸರ್ಗಳ ಹೆಸರು ಕೇಳಲು ಆರಂಭಿಸಿದರು. ಈ ವೇಳೆ ಗಲಾಟೆ ನಡೆದಿದೆ.
ವಡೋದರಾದಲ್ಲಿ 40 ಜನರ ಬಂಧನ
ಇನ್ನೂ ವಡೋದರಾದಲ್ಲಿ ಎರಡು ಗುಂಪುಗಳ ನಡುವಿನ ಕೋಮು ಘರ್ಷಣೆ ನಡೆದಿದ್ದು ಸೋಮವಾರ 40 ಜನರನ್ನು ಬಂಧಿಸಲಾಗಿದೆ. ವಡೋದರಾ ಗ್ರಾಮಾಂತರ ಪೊಲೀಸ್ ಪಿಆರ್ ಪಟೇಲ್ ಪ್ರಕಾರ ಘಟನೆ, "ಧಮೀಜಿ ಕಾ ಡೇರಾ ಪ್ರದೇಶದ ವಿದ್ಯುತ್ ಕಂಬದ ಮೇಲೆ ಒಂದು ಸಮುದಾಯದ ಧ್ವಜದ ಪಕ್ಕದಲ್ಲಿ ಮತ್ತೊಂದು ಸಮುದಾಯದ ಸದಸ್ಯರು ತಮ್ಮ ಧಾರ್ಮಿಕ ಧ್ವಜವನ್ನು ಹಾಕಲು ಪ್ರಯತ್ನಿಸುತ್ತಿರುವುದನ್ನು ಜನರ ಗುಂಪೊಂದು ವಿರೋಧಿಸಿದ ನಂತರ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ' ಎಂದಿದ್ದಾರೆ. ಕಲ್ಲು ತೂರಾಟದಿಂದ ಈ ಪ್ರದೇಶದಲ್ಲಿ ಹಲವು ವಾಹನಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖೇಡಾದ ಆರು ಜನರಿಗೆ ಗಾಯ
ಮಾತ್ರವಲ್ಲದೆ ಖೇಡಾದಲ್ಲಿ ಗರ್ಬಾ ಕಾರ್ಯಕ್ರಮವೊಂದರಲ್ಲಿ ಕಲ್ಲು ತೂರಾಟದಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ದೇವಸ್ಥಾನ ಮತ್ತು ಮಸೀದಿ ಇರುವ ಗ್ರಾಮ ಕೇಂದ್ರದಲ್ಲಿ ಗ್ರಾಮದ ಮುಖ್ಯಸ್ಥರು ಗರ್ಬಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬೇರೆ ಧರ್ಮದ ಗುಂಪು ಸ್ಥಳಕ್ಕೆ ಆಗಮಿಸಿ ಅದನ್ನು ನಿಲ್ಲಿಸುವಂತೆ ಕೇಳಿದೆ. ನಂತರ ನಡೆದ ಕಲ್ಲು ತೂರಾಟದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಘರ್ಷಣೆಗೆ ಸಂಬಂಧಿಸಿದಂತೆ ಆರು ಜನರನ್ನು ಸಹ ಬಂಧಿಸಲಾಗಿದೆ.
ಸಿದ್ಧಿದಾತ್ರಿ ಪೂಜೆಯ ಸಂಭ್ರಮದಲ್ಲಿ ಸೂರತ್
ಗುಜರಾತ್ನ ಸೂರತ್ನಲ್ಲಿರುವ ಈಜುಕೊಳದಲ್ಲಿ ಜನರ ಗುಂಪೊಂದು ದಾಂಡಿಯಾ ಆಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ನಿಜಕ್ಕೂ ವಿಶಿಷ್ಟವಾಗಿದೆ. ಏಕೆಂದರೆ ನಾವು ಈಗಿನಂತೆ ಜನರು ವೇದಿಕೆಯಲ್ಲಿ ಅಥವಾ ತೆರೆದ ಮೈದಾನದಲ್ಲಿ ಹಬ್ಬವನ್ನು ಆನಂದಿಸುವುದನ್ನು ನೋಡಿದ್ದೇವೆ. ಆದರೆ ಈಗ ಅದು ಸಾಂಪ್ರದಾಯಿಕ ವಿಧಾನವನ್ನು ಮುರಿದು ಈಜುಕೊಳವನ್ನು ಪ್ರವೇಶಿಸಿತು. ಸಿದ್ಧಿದಾತ್ರಿಯ ಪೂಜೆಯ ಸಂಭ್ರಮದಲ್ಲಿ ಸೂರತ್ ಇಂದು ಇದ್ದು, ಭಕ್ತರು ದುರ್ಗಾ ಮಾತೆ ಮಾ ಸಿದ್ಧಿದಾತ್ರಿ ಒಂಬತ್ತನೇ ರೂಪವನ್ನು ಪೂಜಿಸುವ ಆರಾಧಿಸುವ ಉತ್ಸಾಹದಲ್ಲಿದ್ದಾರೆ. ದುರ್ಗಾ ದೇವಿಯು ಈ ದಿನದಂದು ರಾಕ್ಷಸ ಮಹಿಷಾಸುರನನ್ನು ಕೊಂದಳು ಎಂದು ಹೇಳಲಾಗುತ್ತದೆ. ಆದ್ದರಿಂದ ಅವಳನ್ನು ಮಹಿಷಾಸುರ ಮರ್ದಿನಿ ಎಂದೂ ಕರೆಯುತ್ತಾರೆ. ಸಿದ್ಧಿದಾತ್ರಿ ದೇವಿಯು ತನ್ನ ಎರಡು ಕೈಗಳಲ್ಲಿ ಗದಾ ಮತ್ತು ಚಕ್ರವನ್ನು ಹೊಂದಿದ್ದಾಳೆ ಮತ್ತು ಇನ್ನೆರಡು ಕೈಗಳಲ್ಲಿ ಕಮಲ ಮತ್ತು ಶಂಕು ಹಿಡಿದಿದ್ದಾಳೆ.