ನರೋಡಾ ಪಾಟಿಯಾ ಹತ್ಯಾಕಾಂಡ, ಮೂವರಿಗೆ 10 ವರ್ಷ ಕಠಿಣ ಸಜೆ
ಅಹಮದಾಬಾದ್, ಜೂನ್ 25: ಗೋದ್ರೋತ್ತರ ಗಲಭೆ ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಇಂದು ಗುಜರಾತ್ ಹೈಕೋರ್ಟ್ ಮೂವರಿಗೆ 10 ವರ್ಷ ಕಠಿಣ ಸಜೆ ವಿಧಿಸಿದೆ.
2002ರ ನರೋಡಾ ಪಾಟಿಯಾ ಹತ್ಯಾಕಾಂಡದ 16 ಅಪರಾಧಿಗಳಲ್ಲಿ ಗುಜರಾತ್ ಹೈಕೋರ್ಟ್ ಏಪ್ರಿಲ್ 20ರಂದೇ 13 ಜನರಿಗೆ ಶಿಕ್ಷೆ ಘೋಷಣೆ ಮಾಡಿತ್ತು. ಆದರೆ ಮೂವರಿಗೆ ಮಾತ್ರ ಶಿಕ್ಷೆ ನೀಡಿರಲಿಲ್ಲ. ಇವರಿಗೆ ನೀಡಬೇಕಾದ ಶಿಕ್ಷೆಯ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ಕೋರ್ಟ್ ಮುಂದಾಗಿತ್ತು.
ಇದೀಗ ಅಪರಾಧಿಗಳಾದ ಪಿ.ಎಸ್.ರಜಪೂತ್, ರಾಜ್ಕುಮಾರ್ ಚೌಮಾಲ್ ಮತ್ತು ಉಮೇಶ್ ಭರ್ವಾಡ್ ಅವರಿಗೆ ಹರ್ಷ ದಿವಾನಿ ಮತ್ತು ಎ.ಎಸ್. ಸುಪೇಹಿಯಾ ಅವರಿದ್ದ ವಿಭಾಗಿಯ ಪೀಠ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಈ ಆದೇಶದೊಂದಿಗೆ ಪೊಲೀಸರ ಮುಂದೆ ಶರಣಾಗಲು ಅಪರಾಧಿಗಳಿಗೆ 6 ವಾರಗಳ ಕಾಲವಕಾಶವನ್ನೂ ನ್ಯಾಯಾಲಯ ನೀಡಿದೆ.
ಗೋಧ್ರಾ ಹತ್ಯಾಕಾಂಡದ ಒಂದು ದಿನದ ನಂತರ ಅಂದರೆ ಫೆಬ್ರವರಿ 28, 2002ರಂದು ನರೋಡಾ ಪಾಟಿಯಾ ಹತ್ಯಾಕಾಂಡ ನಡೆದಿತ್ತು. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 97 ಮಂದಿ ಮೃತಪಟ್ಟಿದ್ದರು.
ಈ ಸಂಬಂಧ ಏಪ್ರಿಲ್ 20ರಂದು ಬಿಜೆಪಿ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಿದ್ದ ಗುಜರಾತ್ ಹೈಕೋರ್ಟ್, ಬಜರಂಗದಳದ ಮುಖಂಡ ಬಾಬು ಬಜರಂಗಿಯ ಅಪರಾಧವನ್ನು ಮಾತ್ರ ಎತ್ತಿ ಹಿಡಿದಿತ್ತು.