Get Updates
Get notified of breaking news, exclusive insights, and must-see stories!

ಎನ್‌ಡಿಎ ಹೆಣ್ಣುಮಕ್ಕಳ ಘನತೆ ಎತ್ತಿಹಿಡಿದಿದೆ : ನರೇಂದ್ರ ಮೋದಿ

ನವದೆಹಲಿ, ಮೇ. 28 : ದೆಹಲಿಯಲ್ಲಿ ಒಂದು ವರ್ಷ ಪೂರೈಸಿರುವ ಸಂದರ್ಭದಲ್ಲಿ, ಗುರುವಾರ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಒಂದು ವರ್ಷದ ಸಾಧನೆ, ವಿರೋಧ ಪಕ್ಷಗಳ ಟೀಕೆ, ಸ್ವಚ್ಛ ಭಾರತ ಅಭಿಯಾನ, ಜಿಎಸ್‌ಟಿ ಮಸೂದೆ, ಸಾಕಷ್ಟು ಚರ್ಚೆಗೊಳಗಾಗಿರುವ ಅವರ ವಿದೇಶಿ ಯಾತ್ರೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಪ್ರಧಾನಿಯಾಗಿ 1 ವರ್ಷದ ಅನುಭವ

ನಾನು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ನಾಗರಿಕ ಸೇವೆ ಸಂಪೂರ್ಣ ಹದಗೆಟ್ಟಿತ್ತು, ಧೃತಿಗೆಟ್ಟ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಕೆಲ ಬಾಹ್ಯ ಅಸಂವಿಧಾನಿಕ ಶಕ್ತಿಗಳು ಮತ್ತು ಕೆಲ ಒಳಗಿನ ಮಿನಿಸ್ಟರ್‌ಗಳ ಗುಂಪಿನ ಕಾರ್ಯಾಚರಣೆಯಿಂದಾಗಿ ಕ್ಯಾಬಿನೆಟ್ ವ್ಯವಸ್ಥೆ ಕೂಡ ದಿಕ್ಕೆಟ್ಟಿತ್ತು. ಇದನ್ನು ಸರಿಪಡಿಸುವುದು ಸವಾಲಿನದಾಗಿತ್ತು, ಇದನ್ನು ಸರಿಪಡಿಸುವಲ್ಲಿ ಮತ್ತು ನಂಬಿಕೆ ಪುನಃ ಸ್ಥಾಪಿಸುವಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಯಿತು. [ಮೋದಿ ಕಂಡ ಕನಸುಗಳು]

Narendra Modi's interview with PTI

ಆಡಳಿತ ಮೊಗಸಾಲೆಯಲ್ಲಿ ಲಾಬಿಯ ಕೊಳಕು

ದೆಹಲಿಯನ್ನು ಅರಿತುಕೊಳ್ಳಬೇಕು ಎಂದು ಅಂದು ಪ್ರಸ್ತಾಪಿಸಿದ್ದು ಕೇಂದ್ರ ಸರಕಾರದ ಬಗ್ಗೆ. ನನ್ನ ಅನುಭವದ ಪ್ರಕಾರ, ನಾಯಕತ್ವ ಹೇಗೆ ವರ್ತಿಸುತ್ತದೋ ಹಾಗೆಯೆ ದೆಹಲಿ ನರ್ತಿಸುತ್ತದೆ. ದೆಹಲಿ ಸರಕಾರವನ್ನು ಕ್ರಿಯಾಶೀಲ ಮಾಡಲು ಮತ್ತು ವೃತ್ತಿಪರತೆ ತರಲು ನಮ್ಮ ತಂಡ ಕೆಲಸದ ಸಂಸ್ಕೃತಿಯಲ್ಲಿ ಹಲವಾರು ಬದಲಾವಣೆ ತಂದಿತು. ನಾನು ಬಂದಾಗ ದೆಹಲಿಯ ಆಡಳಿತ ಮೊಗಸಾಲೆ ಬರೀ ಲಾಬಿಗಳಿಂದ ತುಂಬಿಕೊಂಡಿತ್ತು. ಇದನ್ನು ಸರಿಪಡಿಸುವ ಮತ್ತು ಕೊಳೆಯನ್ನು ತೊಳೆಯಲು ಸ್ವಲ್ಪ ಸಮಯ ಬೇಕಾಯಿತು. ಆದರೆ, ಸ್ವಚ್ಛ ಆಡಳಿತ ನೀಡುವಲ್ಲಿ ಇದು ಸಹಕಾರಿಯಾಗುತ್ತದೆ.

ಸ್ವಚ್ಛ ಭಾರತ ಮತ್ತು ಶಾಲೆಯ ಶೌಚಾಲಯ

ಸ್ವಚ್ಛ ಭಾರತ ಅಭಿಯಾನ ಮತ್ತು ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯಗಳನ್ನು ನಿರ್ಮಿಸುವುದೆಂದರೆ ಬರೀ ಸ್ವಚ್ಛಗೊಳಿಸುವುದು ಮಾತ್ರವಲ್ಲ. ಶಾಲೆಯಲ್ಲಿ ಶೌಚಾಲಯಗಳನ್ನು ನಿರ್ಮಿಸುವುದೆಂದರೆ ಹೆಣ್ಣುಮಕ್ಕಳ ಗೌರವವನ್ನು ಎತ್ತಿ ಹಿಡಿದಂತೆ. ಆದರೆ, ಭಾರತ ಸ್ವಾತಂತ್ರ್ಯ ಪಡೆದು ಇಷ್ಟು ವರ್ಷವಾದರೂ ಇದರ ಬಗ್ಗೆ ಹೆಚ್ಚು ನಿಗಾ ವಹಿಸದಿರುವುದು ನಿಜಕ್ಕೂ ದುರಾದೃಷ್ಟಕರ. ನಮ್ಮ ಮುಂದಿನ ಯೋಜನೆಯ ಗುರಿ ಮಹಿಳೆ, ರೈತ, ನಗರದ ಬಡವರು ಮತ್ತು ಉದ್ಯೋಗದ ಮೇಲಿರುತ್ತದೆ. ಸ್ವಚ್ಛ ನಗರ, ಸ್ವಚ್ಛ ನದಿ, ನಗರಗಳಿಗೆ ನೀರು ಮತ್ತು ವಿದ್ಯುತ್ ಸೌಕರ್ಯ ಒದಗಿಸುವುದು ನಮ್ಮ ಆದ್ಯತೆ. [ಸ್ವಚ್ಛ ಭಾರತದ ಬಗ್ಗೆ ದೇವೇಗೌಡ್ರ ಮೆಚ್ಚುಗೆ]

ಭೂ ಸ್ವಾಧೀನ ಕಾಯ್ದೆ ಕುರಿತು

ನನಗೆ ಒಂದು ಸಂಗತಿ ಇನ್ನೂ ಅರ್ಥವಾಗಿಲ್ಲ. ಯಾವ ಪಕ್ಷ ರಾಜ್ಯ ಆಡಳಿತ ನಡೆಸುತ್ತಿದ್ದಾಗ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂದು ಹೇಳುತ್ತಿದ್ದುದು, ಕೇಂದ್ರಕ್ಕೆ ಬಂದಾಗ ಅದನ್ನು ವಿರೋಧಿಸುತ್ತವೆ. ಭೂ ಸ್ವಾಧೀನ ಕಾಯ್ದೆಯಾಗಲಿ, ಗೂಡ್ಸ್ ಮತ್ತು ಸೇವಾ ತೆರಿಗೆ ಕಾಯ್ದೆಯಾಗಲಿ ಅಭಿವೃದ್ಧಿ ಪರವಾಗಿದ್ದು, ಇವೆರಡು ಮಸೂದೆಗಳು ಲೋಕಸಭೆಯಲ್ಲಿ ಅಂಗೀಕಾರವಾಗಲಿವೆ ಎಂಬ ಆಶಾಭಾವನೆ ಹೊಂದಿದ್ದೇನೆ.

ಅತ್ಯಂತ ಕಠಿಣ ದಾರಿಯನ್ನೇ ಆಯ್ದುಕೊಂಡೆ

ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಒಂದು, ಇದ್ದ ವ್ಯವಸ್ಥೆಯಲ್ಲಿನ ಲೋಪದೇಷಗಳನ್ನು ಸರಿಪಡಿಸಿ, ಕೊಳೆಯನ್ನೆಲ್ಲಾ ತೊಲಗಿಸಿ, ದೇಶದ ಜನತೆಗೆ ದೂರದೃಷ್ಟಿಕೋನದ ಲಾಭ ಸಿಗುವಂತೆ ಮಾಡುವುದು ಮತ್ತು ಸ್ವಚ್ಛ, ಪರಿಣಾಮಕಾರಿಯಾದ ಆಡಳಿತ ನೀಡವುದು. ಮತ್ತೊಂದು, ಜನಪ್ರಿಯ ಯೋಜನೆಗಳನ್ನು ಒಂದೊಂದಾಗಿ ಘೋಷಿಸುತ್ತ ಜನರನ್ನು ಮೂರ್ಖರನ್ನಾಗಿ ಮಾಡುವುದು. ಎರಡನೇಯದು ಸುಲಭ ಮತ್ತು ಜನರು ಅದಕ್ಕೇ ಒಗ್ಗಿಕೊಂಡಿದ್ದಾರೆ. ಆದರೆ, ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಮೊದಲನೇ ಮತ್ತು ಅತ್ಯಂತ ಕಠಿಣವಾದ ಕೆಲಸವನ್ನು ಆಯ್ದುಕೊಂಡಿದ್ದೇನೆ.

ಆರ್ಬಿಐ ಮೇಲೆ ಸರಕಾರಕ್ಕೆ ಅಪಾರ ಗೌರವವಿದೆ

ಆರ್ಬಿಐ ಕುರಿತಂತೆ ವಿಭಿನ್ನ ಹಂತದಲ್ಲಿ ನೀಡಲಾಗಿರುವ ಹೇಳಿಕೆಗಳನ್ನು ಅತ್ಯಂತ ಪ್ರಮುಖ ಮತ್ತು ನಂಬಿಕಾರ್ಹ ಸುದ್ದಿ ಸಂಸ್ಥೆಯಾದ ಪಿಟಿಐ ತಪ್ಪಾಗಿ ಗ್ರಹಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಿದ್ದು, ಅದರ ಮೇಲೆ ಸರಕಾರ ಮತ್ತು ಹಣಕಾಸು ಮಂತ್ರಾಲಯ ಸಂಪೂರ್ಣವಾಗಿ ಗೌರವವಿದೆ.

ನಮ್ಮ ಮುಂದಿನ ಗಮನ ಪಿ2ಜಿ2 ಮೇಲೆ

ಮೊದಲ ವರ್ಷದಲ್ಲಿ ನಾವು ಈಗಾಗಲೆ ತೆಗೆದುಕೊಂಡಿರುವ ಕ್ರಮಗಳ ಯಶಸ್ಸು ಮತ್ತು ದೇಶದ ಜನರು ಈ ಸುಧಾರಣಾ ಕ್ರಮಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವ ರೀತಿ ನಮ್ಮನ್ನು ಮತ್ತಷ್ಟು ಕೆಲಸ ಮಾಡಲು ಉತ್ತೇಜಿಸಿದೆ. ನಮ್ಮ ಮುಂದಿನ ಗಮನ ಪಿ2ಜಿ2 (Pro-active Pro-people, Good Governance) ಮೇಲಿರಲಿದೆ. ನಾವು ಕೇಂದ್ರೀಕರಿಸಲಿರುವ ಮತ್ತೊಂದು ಪ್ರಮುಖ ಸಂಗತಿಯೆಂದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದೇ ತಂಡವಾಗಿ ಸುಧಾರಣೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವುದು.

ವಿದೇಶಿ ಪ್ರವಾಸ ಮತ್ತು ವಿರೋಧಿಗಳ ಟೀಕೆ

ಜಗತ್ತಿನಲ್ಲಿ ಎಲ್ಲ ರಾಷ್ಟ್ರಗಳು ಒಂದು ಮತ್ತೊಂದರ ಮೇಲೆ ಅವಲಂಬಿತವಾಗಿವೆ. ಭಾರತ ದೊಡ್ಡ ರಾಷ್ಟ್ರವಾಗಿದೆ, ಬಲಿಷ್ಠವಾಗಿದೆ ಎಂದು ಇತರ ರಾಷ್ಟ್ರಗಳನ್ನು ಕಡೆಗಣಿಸಬೇಕಿಲ್ಲ ಮತ್ತು ದುರಹಂಕಾರದಿಂದ ವರ್ತಿಸಬೇಕಿಲ್ಲ. ನಮ್ಮನ್ನು ನಾವು ಪ್ರತ್ಯೇಕವಾಗಿ ಎಂದೂ ನೋಡಬಾರದು. 17 ವರ್ಷಗಳ ಕಾಲ ಒಬ್ಬೇ ಒಬ್ಬ ಪ್ರಧಾನಿ ನೇಪಾಳಕ್ಕೆ ಭೇಟಿ ನೀಡದಿದ್ದುದು ಒಳ್ಳೆ ಸಂಗತಿಯಲ್ಲ. ಭಯೋತ್ಪಾದನೆ ಬೃಹದಾಕಾರವಾಗುತ್ತಿದೆ, ದಾಳಿ ಸಂಪರ್ಕಕ್ಕೇ ಇಲ್ಲದ ರಾಷ್ಟ್ರದಿಂದಲೂ ಆಗಬಹುದು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತಾಡಲು ಹಕ್ಕಿದೆ. ಸಹಜವಾಗಿ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದರೆ ಅವಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ, ಇಂಥ ಸುದ್ದಿಗಳೂ ಓದಲೂ ರೋಚಕವಾಗಿರುತ್ತವೆ. ವಿದೇಶಿ ಪ್ರವಾಸ ಕುರಿತಂತೆ, ನಾನು ಪ್ರಧಾನಿಯಾದಂದಿನಿಂದಲೂ ವಿರೋಧ ಪಕ್ಷಗಳು ವೃಥಾ ಆರೋಪ ಮಾಡುತ್ತಿವೆ, ಟೀಕಿಸುತ್ತಲೇ ಬಂದಿವೆ. ನನ್ನ ವಿದೇಶಿ ಪ್ರವಾಸಗಳು ಯಶಸ್ವಿಯಾಗಿದ್ದರಿಂದಲೇ ವಿರೋಧಿಗಳು ವಿದೇಶ ಪ್ರವಾಸದ ದಿನಗಳ, ನಾನು ಸಂದರ್ಶಿಸಿದ ರಾಷ್ಟ್ರಗಳ ಬಗ್ಗೆ ಚರ್ಚೆ ನಡೆಸುತ್ತಿವೆ. ಇಲ್ಲದಿದ್ದರೆ ನಿಖರವಾದ ವಿಷಯದ ಬಗ್ಗೆ ಟೀಕಿಸುತ್ತಿದ್ದವು. (ಪೂರ್ತಿ ಸಂದರ್ಶನವನ್ನು ಇಲ್ಲಿ ಓದಿರಿ) [ಪಿಟಿಐ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+