ಅರ್ಜಿ ಹಾಕದೆ ಅಮೆರಿಕ ವೀಸಾ ಪಡೆದ ಮೋದಿ!
ಬೆಂಗಳೂರು, ಸೆ. 10 : ಅಂತೂ ನರೇಂದ್ರ ಮೋದಿ ಅಮೆರಿಕ ಭೇಟಿಗೆ ಮೂಹೂರ್ತ ಫಿಕ್ಸ್ ಆಗಿದೆ. ಸೆಪ್ಟಂಬರ್ 29, 30ರಂದು ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನಡುವೆ ಶ್ವೇತಭವನದಲ್ಲಿ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಯಲಿದೆ.
ಇದು ಭಾರತ ಮತ್ತು ಅಮೆರಿಕದ ನಡುವಿನ ಬಾಂಧ್ಯವ್ಯ ವೃದ್ಧಿಗೆ ಕಾರಣವಾಲಿದ್ದು, ರಕ್ಷಣಾ ವ್ಯವಸ್ಥೆ ಕುರಿತು ಸೂಕ್ತ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ ಎಂದೇ ವಿಶ್ಲೇಷಿಸಲಾಗಿದೆ.

ಆದರೆ ನಿಜವಾಗಿಯೂ ಅಮೆರಿಕ ಮೋದಿಯನ್ನು ಯಾಕೆ ಬರಮಾಡಿಕೊಳ್ಳುತ್ತಿದೆ? 2002ರ ಗೋದ್ರಾ ಹತ್ಯಾಕಾಂಡ ಆರೋಪದಲ್ಲಿ ಮೋದಿಗೆ ವೀಸಾ ನಿರಾಕರಿಸಿದ್ದ ಹಿರಿಯಣ್ಣ ಈಗ ಹೀಗೇಕೆ ಆಡುತ್ತಿದ್ದಾನೆ? ಎಂಬ ಪ್ರಶ್ನೆಗೆ ಉತ್ತರ ಸರಳವಾಗಿಲ್ಲ. ಭಾರತಕ್ಕೆ ಇತ್ತೀಚೆಗೆ ಅಮೆರಿಕ 'ವಿಶೇಷ ಮರ್ಯಾದೆ' ನೀಡುತ್ತಿರುವುದು ಯಾಕೆ ಎಂಬುದಕ್ಕೂ ಉತ್ತರವಿಲ್ಲ. ನರೇಂದ್ರ ಮೋದಿ ಅವರೊಂದಿಗೆ ಸ್ನೇಹಕ್ಕೆ ಮುಂದಾಗಿರುವುದರ ಹಿಂದಿನ ಮರ್ಮ ತಿಳಿಯುತ್ತಿಲ್ಲ.(ಮೋದಿ, ಒಬಾಮಾ ಭೇಟಿಗೆ ಮುಹೂರ್ತ ಸಿಕ್ತು)
ನರೇಂದ್ರ ಮೋದಿ ಅಮೆರಿಕ ವೀಸಾ ಪಡೆದ ಕತೆ...
* ಮಾರ್ಚ್ 2005: ಎರಡು ಸಾವಿರ ಜನರ ಸಾವಿಗೆ ಕಾರಣವಾಗಿದ್ದ ಗುಜರಾತ್ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಕೈವಾಡವಿದೆ ಎಂದು ನಂಬಿದ ಹಿರಿಯಣ್ಣ ಮೋದಿಗೆ ವೀಸಾ ನಿರಾಕರಿಸಿದ.
* ನವೆಂಬರ್ 2012: ಮೋದಿಗೆ ವೀಸಾ ಕೊಡದಿದ್ದುದ್ದನ್ನು ಖಂಡಿಸಿ 65 ಸಂಸದರು ಅಮೆರಿಕ ಅಧ್ಯಕ್ಷ ಬರಾಕ್ ಒಮಾಮಾಗೆ ಪತ್ರ ಬರೆದರು. 25 ಜನ ರಾಜ್ಯಸಭಾ ಮತ್ತು 40 ಜನ ಲೋಕಸಭಾ ಸದಸ್ಯರು ಪತ್ರಕ್ಕೆ ಸಹಿ ಮಾಡಿದ್ದರು. ನವೆಂಬರ್ 26 ಮತ್ತು ಡಿಸೆಂಬರ್ 5 ರಂದು ಕ್ರಮವಾಗಿ ಪತ್ರ ಬರೆಯಲಾಗಿತ್ತು.(ದೇವೇಗೌಡರ ರಾಜಕೀಯ ನಿವೃತ್ತಿ ತಡೆದದ್ದು ಮೋದಿಯೇ!)
* ಡಿಸೆಂಬರ್ 2012: ಹತ್ಯಾಕಾಂಡಕ್ಕೆ ಸಂಬಂಧಿಸಿದ ನರೇಂದ್ರ ಮೋದಿ ಒಳಗೊಂಡಂತೆ ಅನೇಕ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿಯೇ ಇವೆ. ತೀರ್ಮಾನ ಆಗುವವರೆಗೆ ವೀಸಾ ನಿರಾಕರಣೆ ಮಾಡುವುದು ಸಲ್ಲ ಎಂದು ಪತ್ರದಲ್ಲಿ ಸಂಸದರು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.
* ಜುಲೈ 2013: ಪತ್ರದಲ್ಲಿರುವ ಸಹಿ ಅಸಲಿ. ಇದನ್ನು ಸಂಸದರೆ ಬರೆದಿದ್ದಾರೆ ಎಂದು ಕ್ಯಾಲಿಫೋರ್ನಿಯಾದ ಫೋರೆನ್ಸಿಕ್ ತಜ್ಞರೊಬ್ಬರು ವರದಿ ನೀಡಿದರು. ಪತ್ರದ ಪ್ರತಿಗಳು ಭಾರತ ಅಮೆರಿಕ ಮುಸ್ಲಿಂ ಕೌನ್ಸಿಲ್(ಐಎಎಮ್ಎಸ್)ಗೂ ನೀಡಲಾಯಿತು. ರಾಜನಾಥ್ ಸಿಂಗ್ ಅಮೆರಿಕಕ್ಕೆ ಭೇಟಿ ನೀಡಿ ಅಲ್ಲಿನ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದರು. ವೀಸಾ ಸಂಬಂಧ ವಿಧಿಸಿದ್ದ ನಿಷೇಧ ತೆರವಿಗೆ ಚರ್ಚೆ ನಡೆಯಿತು ಎಂದು ತಿಳಿಸಿದರು.(ನರೇಂದ್ರ ಮೋದಿ ಸರ್ಕಾರದ ಸೆಂಚುರಿ ಹೈಲೈಟ್ಸ್)

* ಯಾರಿಗೆ ಒಳ್ಳೆಯದು? ಯಾರಿಗೆ ಕೆಟ್ಟದ್ದು?
ಸಂಸದರ ನಡವಳಿಕೆಯನ್ನು ಎನ್ಸಿಪಿ ಸ್ವಾಗತಿಸಿತು. ಹತ್ಯಾಕಾಂಡದ ನೆಪದಲ್ಲಿ ಮೋದಿಗೆ ವೀಸಾ ನಿರಾಕರಿಸಿದ್ದರಿಂದ ರಾಜನಾಥ್ ಸಿಂಗ್ ಅಮೆರಿಕಕ್ಕೆ ಹೋಗಿ ಬರಬೇಕಾಯಿತು. ಏನೇ ಇರಲಿ ಸಂಸದರು ಇಂಥ ಕೆಲಸ ಮಾಡಿದ್ದು ಆಶಾದಾಯಕ ಬೆಳವಣಿಗೆ. ಜನಪ್ರತಿನಿಧಿಗಳಿಗೆ ವೀಸಾ ನಿರಾಕರಿಸುವ ಕೆಲಸವನ್ನು ಮುಂದೆ ಯಾರು ಮಾಡದಂತೆ ತಡೆಯಬೇಕಾಗಿದೆ ಎಂದು ಎನ್ಸಿಪಿ ಮುಖಂಡ ತರೀಕ್ ಅನ್ವರ್ ಹೇಳಿದ್ದರು.
ಆದರೆ ಇತ್ತ ಡಿಎಂಕೆ ನಾಯಕ ಕರುಣಾನಿಧಿ ಮೋದಿ ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ತಿಳಿದುಬಂದರೆ ಪಕ್ಷದ ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದ್ದರು.
ನಾವು ಕೇಂದ್ರಕ್ಕೆ ಸಂಬಂಧಿಸಿದ ವಿಷಯದಲ್ಲಿ ತಲೆ ಹಾಕಲ್ಲ. ಅದೇ ರೀತಿ ವೀಸಾ ನಿರಾಕರಣೆಯಲ್ಲೂ ಮಧ್ಯ ಪ್ರವೇಶ ಮಾಡಲ್ಲ ಎಂದು ಕರುಣಾನಿಧಿ ತಿಳಿಸಿದ್ದರು.
ಆಶ್ಚರ್ಯ ವ್ಯಕ್ತಪಡಿಸಿದ ರಾಜ್ಯಸಭಾ ಸದಸ್ಯ ಸೀತಾರಾಮ್ ಯಚೂರಿ ಮತ್ತು ಸಂಸದ ಅಚ್ಯುತಂ ನಾವು ಈ ಬಗೆಯ ಯಾವುದೆ ಪತ್ರಕ್ಕೆ ಸಹಿ ಮಾಡಿಲ್ಲ. ಇದೊಂದು ಕತ್ತರಿ ಪ್ರಯೋಗವಾಗಿದ್ದು ಸಂಸದರ ಸಹಿ ನಕಲು ಮಾಡಿರುವ ಶಂಕೆಯಿದೆ ಎಂದಿದ್ದರು.(ನರೇಂದ್ರ ಮೋದಿ ಸರ್ಕಾರದ ಬೆನ್ನುಬಿದ್ದ 10 ವಿವಾದ)
* ಆಗಸ್ಟ್ 2013: ಟಿವಿ ಪತ್ರಕರ್ತೆ ನಿಧಿ ರಾಜಧನ್ ಮತ್ತು ಬ್ರಿಟಿಷ್ ಎಂಪಿ ಬ್ಯಾರಿ ಗಾರ್ಡಿನರ್ ನಡುವೆ ನಡೆದ ಮಾತುಕತೆ ವಿವಾದಕ್ಕೆ ಕಾರಣವಾಯಿತು. ಪತ್ರಕರ್ತೆ ನಿಧಿ ರಾಜಧನ್ಗೆ ಭಾರತದ ನ್ಯಾಯಾಂಗದ ಮೇಲೆ ಗೌರವವಿಲ್ಲ. ಮೋದಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚೀಟ್ ನೀಡಿದ್ದರೂ ವಾದ ಮಾಡುತ್ತಿದ್ದಾಳೆ ಎಂದು ಗಾರ್ಡಿನರ್ ವಾದಿಸಿದರು. ಇದಕ್ಕೆ ಪ್ರತಿಯಾಗಿ ನೀವು ಮೋದಿಗೆ ಯಾಕೆ ಇಂಗ್ಲೆಂಡ್ ವೀಸಾ ನೀಡಿಲ್ಲ ಎಂದು ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
* ಡಿಸೆಂಬರ್ 2013: ಮೋದಿ ಯಾವುದೇ ಕಾರಣಕ್ಕೂ ಅಮೆರಿಕ ವೀಸಾಕ್ಕೆ ಅರ್ಜಿ ಸಲ್ಲಿಸಲ್ಲ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದರು. ನ್ಯಾಯಾಲಯದ ತೀರ್ಮಾನಕ್ಕಿಂತ ಯಾವುದೋ 'ಕಾಂಗರೋ ಕೋರ್ಟ್' ನ ಮಾತಿಗೆ ಬೆಲೆ ನೀಡುವವರ ಬಳಿ ನಾವ್ಯಾಕೆ ಹೋಗಬೇಕು ಎಂದು ಅಮೆರಿಕಕ್ಕೆ ತಿರುಗೇಟು ನೀಡಿದ್ದರು.
* ಏಪ್ರಿಲ್ 2014: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲುವು ಸಾಧಿಸಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಕೊಂಡ ಅಮೆರಿಕ ತನ್ನ ವರಸೆಯಲ್ಲಿ ಬದಲಾವಣೆ ಮಾಡಿಕೊಂಡಿತು. ಒಂಭತ್ತು ವರ್ಷಗಳಿಂದ ನರೇಂದ್ರ ಮೋದಿಗೆ ವೀಸಾ ನೀಡಲು ನಿರಾಕರಿಸಿದ್ದ ಹಿರಿಯಣ್ಣ ಈಗ ತನ್ನಿಂದ ತಾನೇ ನಿಷೇಧ ಹಿಂದಕ್ಕೆ ಪಡೆದ. ಮೋದಿ ಪ್ರಧಾನಿಯಾದ ನಂತರ ಅಮೆರಿಕದಿಂದ ಅಭಿನಂದನೆ ಪತ್ರವೂ ಬಂತು!
* ಮೇ 2014: ನಂತರ ಸ್ವತಃ ಅಮೆರಿಕದ ಅಧ್ಯಕ್ಷ ಬರಾಕ್ ಒಮಾಮಾ ಲೋಕಸಭಾ ಗೆಲುವಲ್ಲಿ ಬೀಗುತ್ತಿದ್ದ ನರೇಂದ್ರ ಮೋದಿಗೆ ಶುಭಾಶಯ ತಿಳಿಸಿದರು. ಅಲ್ಲದೇ ಶ್ವೇತ ಭವನಕ್ಕೆ ಆಗಮಿಸುವಂತೆ ಆಹ್ವಾನನ್ನೂ ನೀಡಿದರು.
ಇಷ್ಟೆಲ್ಲಾ ಬೆಳವಣಿಗೆಗಳ ನಂತರ ನರೇಂದ್ರ ಮೋದಿ ಅಮೆರಿಕ ಪ್ರವಾಸಕ್ಕೆ ವೇದಿಕೆ ಸಿದ್ಧವಾಗಿದೆ. ದ್ವಿಪಕ್ಷೀಯ ಮಾತುಕತೆ ಯಾವ ಯಾವ ದೇಶಗಳಿಗೆ ಲಾಭ ತರಲಿದೆ. ಪ್ರಪಂಚದ ಮೇಲೆ, ಭಾರತದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ.












Click it and Unblock the Notifications