ಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿ
Recommended Video
ನವದೆಹಲಿ, ಆಗಸ್ಟ್ 15: ನೋಟುರದ್ಧತಿ, ಪಾಕ್ ಉಗ್ರರ ಮೇಲೆ ದಾಳಿ, ಜಮ್ಮು ಕಾಶ್ಮೀರ ವಿಶೇಷ ಸ್ಥಾನ-ಮಾನ, ತ್ರಿವಳಿ ತಲಾಖ್ ವಿರುದ್ಧ ಕಾಯ್ದೆ ಜಾರಿ ಹೀಗೆ ಅನೇಕ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡಿರುವ ನರೇಂದ್ರ ಮೋದಿ ಅವರು ಇನ್ನೊಂದು ಅತ್ಯಂತ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ.
ನವದೆಹಲಿಯ ಕೆಂಪು ಕೋಟೆಯ ಮುಂದೆ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತ್ರಿವರ್ಣ ಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ದೇಶಕ್ಕೆ ಅತ್ಯಂತ ಅವಶ್ಯಕವಿರುವ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ತೆಗೆದುಕಕೊಳ್ಳುವ ಸ್ಪಷ್ಟ ಸುಳಿವು ಇಂದು ನೀಡಿದರು.
ತಮ್ಮ ದೀರ್ಘ ಭಾಷಣದಲ್ಲಿ ಭಾರತದಲ್ಲಿ ಹೆಚ್ಚುತಿರುವ ಜನಸಂಖ್ಯೆಯ ಬಗ್ಗೆ ಉಲ್ಲೇಖ ಮಾಡಿದ ಮೋದಿ, ದೇಶದಲ್ಲಿ ಅನಿಯಂತ್ರಿತವಾಗಿ ಬೆಳೆಯುತ್ತಿರುವ ಜನಸಂಖ್ಯೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು.
ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ಹಬ್ಬದ ಸಂಭ್ರಮ: ಚಿತ್ರಗಳು
ಜನಸಂಖ್ಯಾ ಸ್ಫೋಟ, ಮುಂದಿನ ಪೀಳಿಗೆಗಳ ಹಕ್ಕುಗಳನ್ನು, ನೈಸರ್ಗಿಕ ಸಂಪತ್ತನ್ನು ಕಿತ್ತುಕೊಳ್ಳುತ್ತಿವೆ ಎಂದ ಮೋದಿ, ಸಣ್ಣ ಕುಟುಂಬ ಹೊಂದುವುದು ದೇಶಪ್ರೇಮದ ಸಂಕೇತ ಎಂದು ಹೇಳಿದರು.

ಮಗುವನ್ನು ಭೂಮಿಗೆ ತರುವ ಮುನ್ನಾ ಯೋಚಿಸಿ: ಮೋದಿ
ಮಗುವನ್ನು ಭೂಮಿಗೆ ತರುವ ಮುನ್ನಾ ಪೋಷಕರು ಯೋಚನೆ ಮಾಡಬೇಕಿದೆ. ನಾವು ಮಗುವಿಗೆ ಅವರಿಗೆ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ನೀಡಲು ಸಾಧ್ಯವೇ, ಅವರಿಗೆ ನೀಡಬೇಕಾದ ಸೌಕರ್ಯಗಳು ಲಭ್ಯವಿದೆಯೇ ಎಂಬ ಬಗ್ಗೆ ಚಿಂತಿಸಬೇಕಿದೆ ಎಂದ ಅವರು ಸಣ್ಣ ಕುಟುಂಬಗಳ ಅವಶ್ಯಕತೆ ಬಗ್ಗೆ ಒತ್ತಿ ಹೇಳಿದರು.

'ಸಣ್ಣ ಕುಟುಂಬ ಹೊಂದುವುದು ದೇಶಪ್ರೇಮದ ಸಂಕೇತ'
ಯಾರು ಸಣ್ಣ ಕುಟುಂಬದ ನಿಯಮ ಪಾಲಿಸುತ್ತಾರೊ ಅವರು ದೇಶದ ಅಭಿವೃದ್ಧಿಯಲ್ಲಿ ನೆರವು ನೀಡಿದ್ದಾರೆಂದು ಅರ್ಥ, ಸಣ್ಣ ಕುಟುಂಬ ಹೊಂದುವುದೂ ಸಹ ದೇಶಪ್ರೇಮವೇ ಎಂದು ಮೋದಿ ಹೇಳಿದರು.

ಜನಸಂಖ್ಯೆ ಸ್ಫೋಟ ತಡೆಗೆ ವಿಶೇಷ ಕಾಯ್ದೆ
ಮೋದಿ ಅವರು ಜನಸಂಖ್ಯಾ ಸ್ಫೋಟದ ಬಗ್ಗೆ ಮಾತನಾಡುವ ಮೂಲಕ, ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನು ಜಾರಿಮಾಡಲು ಚಿಂತನೆ ನಡೆಸಿದ್ದಾರೆ ಎಂಬ ಸೂಚನೆ ನೀಡಿದ್ದಾರೆ. ದೇಶದ ತ್ವರಿತ ಅಭಿವೃದ್ಧಿಗೆ ಜನಸಂಖ್ಯೆ ಸ್ಫೋಟ ಮಾರಕವಾಗಿರುವುದು ತಿಳಿದ ವಿಷಯವೇ ಹಾಗಾಗಿ ಇದನ್ನು ನಿಯಂತ್ರಿಸಲು ಹೊಸ ಕಾಯ್ದೆಯ ರಚನೆಯ ಬಗ್ಗೆ ಮೋದಿ ಅವರು ಸೂಚನೆ ನೀಡಿದ್ದಾರೆ.

ಮುಂದಿನ ಅಧಿವೇಶನದಲ್ಲಿ ಕಾಯ್ದೆ ಪ್ರಸ್ತಾವ
ಮುಂದಿನ ಲೋಕಸಭೆ ಅಧಿವೇಶನದಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಕಾಯ್ದೆಯನ್ನು ಕೇಂದ್ರ ಸರ್ಕಾರವು ಮಂಡಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಜಮ್ಮು ಕಾಶ್ಮೀರ ವಿಶೇಷ ಸ್ಥಾನ ರದ್ದತಿ ಕಾಯ್ದೆ, ತ್ರಿವಳಿ ತಲಾಖ್ ಗೆ ಅನುಮೋದನೆ ದೊರೆತಿದೆ.











Click it and Unblock the Notifications