ಅವಿಶ್ವಾಸ ನಿರ್ಣಯ : ನರೇಂದ್ರ ಮೋದಿ ಪ್ರತ್ಯುತ್ತರ, ರಾಹುಲ್ ನಿರುತ್ತರ

ನವದೆಹಲಿ, ಜುಲೈ 20 : ಸತತ ಹನ್ನೆರಡು ಗಂಟೆಗಳ ಕಾಲ ನಡೆದ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯ ನಂತರ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ 325 ಮತಗಳನ್ನು ಗಳಿಸಿ ವಿಶ್ವಾಸ ಮತದಲ್ಲಿ ವಿಜಯಿಶಾಲಿಯಾಗಿದೆ.

ಅವಿಶ್ವಾಸ ನಿರ್ಣಯದ ಪರ ಬಿದ್ದಿರುವ ಮತಗಳು ಕೇವಲ 126 ಮಾತ್ರ. ಗೆಲ್ಲಲು ಎನ್‌ಡಿಎಗೆ ಬೇಕಾಗಿದ್ದುದು 226 ಮತಗಳು. ಆದರೆ, ಅದಕ್ಕೂ ಹೆಚ್ಚು ಮತಗಳನ್ನು ಗಳಿಸಿರುವ ನರೇಂದ್ರ ಮೋದಿಯವರು 2019ರ ಲೋಕಸಭೆ ಚುನಾವಣೆಗೆ ಭರ್ಜರಿ ಮುನ್ನುಡಿ ಬರೆದಿದ್ದಾರೆ. ಒಟ್ಟು 199 ಮತಗಳ ಅಂತರದಿಂದ ಎನ್‌ಡಿಎ ಜಯಭೇರಿ ಬಾರಿಸಿದೆ.

ಲೋಕಸಭೆಯಲ್ಲಿ 451 ಸದಸ್ಯರು ಹಾಜರಿದ್ದರು. ನರೇಂದ್ರ ಮೋದಿ ಸರಕಾರವನ್ನು ಬೆಂಬಲಿಸದ ಶಿವಸೇನೆ ಅವಿಶ್ವಾಸ ನಿರ್ಣಯದಿಂದ ಹೊರಗುಳಿದಿತ್ತು. ಬಿಜು ಜನತಾ ದಳ ಕೂಡ, ಮೋದಿಯವರನ್ನು ಬೆಂಬಲಿಸಿದರೂ ವಾಕೌಟ್ ಮಾಡಿ ಅವಿಶ್ವಾಸ ಮತದಿಂದ ಹೊರಗುಳಿದಿದ್ದರು.

Narendra Modi give befitting reply to Rahul and wins trust vote

2014ರ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ್ದ ಎನ್‌ಡಿಎಗೆ ಇಂದಿನ ಅವಿಶ್ವಾಸ ನಿರ್ಣಯದಲ್ಲಿ ಸೋಲುವ ಭಯವೇನೂ ಇರಲಿಲ್ಲ. ಏಕೆಂದರೆ, ವಿರೋಧಿಗಳಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ನರೇಂದ್ರ ಮೋದಿಯನ್ನು ಸೋಲಿಸಲು ಬೇಕಾದಂಥ ಸಂಖ್ಯೆಗಳೂ ಇರಲಿಲ್ಲ.

ಗೆದ್ದ ಮೇಲೆ ಬೀಗುವುದಕ್ಕಿಂತ, ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಹಲವಾರು ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದು, ಗೆದ್ದಿರುವ ಬಿಜೆಪಿ ಮತ್ತು ಅಂಗ ಪಕ್ಷಗಳಿಗೆ ಲೋಕಸಭೆ ಚುನಾವಣೆಗೂ ಮುನ್ನ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ.

ನರೇಂದ್ರ ಮೋದಿಯವರ ಮೇಲೆ ಭಾರೀ ವಾಕ್ ಪ್ರಹಾರ ಮಾಡಿದ ರಾಹುಲ್ ಗಾಂಧಿಯವರಿಗೆ, ರಾಫೆಲ್ ಡೀಲ್, ಡೋಕ್ಲಾಂ ವಿವಾದ, ರೈತರ ಸಾಲಮನ್ನಾ, ಅಪನಗದೀಕರಣ, ಜಿಎಸ್ಟಿ ಅನುಷ್ಠಾನ ಮುಂತಾದ ಗಹನ ವಿಷಯಗಳಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರು ತಕ್ಕ ಉತ್ತರ ನೀಡಿದ್ದಾರೆ.

Narendra Modi give befitting reply to Rahul and wins trust vote

ರಾಫೆಲ್ ಡೀಲ್ ಪಾರದರ್ಶಕವಾಗಿಲ್ಲ, ಡೀಲ್ ಬಗ್ಗೆ ರಕ್ಷಣಾ ಸಚಿವೆ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿಯವರು ಹೇಳಿದ್ದರಿಂದ, ಸ್ವತಃ ನಿರ್ಮಲಾ ಸೀತಾರಾಮನ್ ಮತ್ತು ಫ್ರಾನ್ಸ್ ಸರಕಾರದಿಂದ, ಒಪ್ಪಂದ ರಹಸ್ಯ ಕಾಪಾಡುವುದರ ಬಗ್ಗೆ ಸ್ಪಷ್ಟನೆ ನೀಡಬೇಕಾಯಿತು. ಇದರಿಂದ ರಾಹುಲ್ ಅವರಿಗೆ ಮುಖಭಂಗವೂ ಆಯಿತು.

ಇನ್ನು ಮೋದಿಯವರು ರಾಹುಲ್ ಅವರು ಆಡಿದ ಪ್ರತಿಯೊಂದು ಮಾತಿಗೂ, ಅದಕ್ಕಿಂತಲೂ ಬಲವಾದ ತಿರುಗೇಟು ನೀಡಿದ್ದಾರೆ. ಪ್ರತಿಯೊಂದು ಸಂಗತಿಯನ್ನೂ ತೆಗೆದುಕೊಂಡು, ರಾಹುಲ್ ಅವರು ವಿಷಯದ ಆಳಕ್ಕೆ ಇಳಿಯಬೇಕಾಗಿರುವುದು, ತಿಳಿದುಕೊಳ್ಳುವುದು ಬೇಕಾದಷ್ಟಿದೆ ಎಂದು 48 ವರ್ಷದ ಸಂಸದನಿಗೆ ಪಾಠ ಮಾಡಿದರು. ಗಂಭೀರವಾದ ವಿಷಯಗಳ ಬಗ್ಗೆ ಮಾತನಾಡುವಾಗ ಸಾಕಷ್ಟು ಸಿದ್ಧತೆಯಿಂದ ಮಾತನಾಡಬೇಕು ಎಂದು ಪಾಠ ಮಾಡಿದರು.

ಮೋದಿಯವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ ಎಂದು ಕಿಚಾಯಿಸಿದ್ದಕ್ಕೆ ತಿರುಗೇಟು ನೀಡಿದ ಮೋದಿಯವರು, ಅವರು ನಾಮ್‌ದಾರಿ, ನಾನು ಕಾಮ್‌ಧಾರಿ. ಆದ್ದರಿಂದ ಕಾಮ್‌ಧಾರಿ ನಾಮ್‌ಧಾರಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಹೇಗೆ ಸಾಧ್ಯ. ನಾನೆಲ್ಲಿ ಅವರೆಲ್ಲ ಎಂದು ಅಪಹಾಸ್ಯ ಮಾಡಿ, ಬಿಜೆಪಿಯ ಸಂಸದರನ್ನು ನಗೆಗಡಲಲ್ಲಿ ತೇಲಾಡಿಸಿದರು.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಜುಮ್ಲಾ ಸ್ಟ್ರೈಕ್ ಎಂದು ಕೇವಲ ಮಾತಾಡಿದ್ದಕ್ಕೆ ಆಕ್ರೋಶಭರಿತ ಮಾತುಗಳನ್ನಾಡಿದ ಮೋದಿ, ನೀವು ಬೇಕಾದರೆ ನನಗೆ ಅವಮಾನ ಮಾಡಿ, ಆದರೆ, ದೇಶದ ಗಡಿಯನ್ನು ಕಾಯುತ್ತಿರುವ, ನಮ್ಮನ್ನು ಕಾಪಾಡುತ್ತಿರುವ ಸೈನಿಕರಿಗೆ ಹೇಗೆ ಅವಮಾನ ಮಾಡುತ್ತೀರಿ. ದೇಶದ ಜನತೆ ನಿಮ್ಮನ್ನೆಂದೂ ಕ್ಷಮಿಸುವುದಿಲ್ಲ ಎಂದು ಕಿಡಿ ಕಾರಿದರು.

ನಾನು ಚೌಕಿದಾರನೂ ಹೌದು ಭಾಗೀದಾರನೂ ಹೌದು. ದೇಶದ ಬಡ ಜನರ, ರೈತರ, ಉದ್ಯೋಗಿಗಳ, ಇಡೀ ದೇಶದ ಜನರ ಅಭ್ಯದಯದಲ್ಲಿ ನಾನು ಭಾಗೀದಾರನಾಗಿರುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಮೋದಿ, ರಾಹುಲ್ ಗಾಂಧಿಯವರು ಆಡಿದ ಮಾತಿಗೆ ಮಾತಿನಿಂದಲೇ ಪ್ರತ್ಯುತ್ತರ ನೀಡಿದರು. ರಾಹುಲ್ ಗಾಂಧಿ ನಿರುತ್ತರರಾಗಿದ್ದರು. ತಮ್ಮನ್ನು ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿಯವರು ಭ್ರಷ್ಟಾಚಾರದಲ್ಲಿ ಭಾಗೀದಾರ ಎಂದು ಆರೋಪ ಹೊರಿಸಿದ್ದರು ರಾಹುಲ್.

ಈ ಚರ್ಚೆಯಲ್ಲಿ ತೆಲುಗು ದೇಶಂ ಪಕ್ಷದ ನಾಯಕ ಜಯದೇವ್, ಮಲ್ಲಿಕಾರ್ಜುನ ಖರ್ಗೆ, ರಾಜನಾಥ್ ಸಿಂಗ್ ಮುಂತಾದವರು ಮಾತನಾಡಿದರೂ, ಇದು ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅವರ ವ್ಯಕ್ತಿತ್ವಗಳ ನಡುವಿನ ತಾಕಲಾಟವಾಗಿತ್ತು. ಬಾಯಿಬಿಟ್ಟಿದ್ದರಿಂದ ಕಾಂಗ್ರೆಸ್ ಬಣ್ಣಗೇಡಿಯಾಯಿತೇ ವಿನಃ ನರೇಂದ್ರ ಮೋದಿಯವರ ಬಾಯಿ ಮುಚ್ಚಿಸಲು ಸಾಧ್ಯವಾಗಲಿಲ್ಲ.

ಈ ಚರ್ಚೆಗಳು, ಎತ್ತಿರುವ ಪ್ರಶ್ನೆಗಳು ಅದಕ್ಕೆ ಉತ್ತರಗಳು ಏನೇ ಇರಲಿ, ತಮ್ಮ ಭಾಷಣದ ನಂತರ ರಾಹುಲ್ ಗಾಂಧಿಯವರು ಮೋದಿಯವರನ್ನು ನಾಟಕೀಯವಾಗಿ ತಬ್ಬಿಕೊಂಡಿದ್ದು, ನಂತರ ಮೊದಲೇ ಅಂದುಕೊಂಡಂತೆ ಎಲ್ಲ ನಡೆಯಿತು ಎಂಬಂತೆ ಸಹೋದ್ಯೋಗಿಗಳಿಗೆ ಕಣ್ಣು ಮಿಟುಕಿಸಿದ್ದು ಈ ದಿನದ ಹೈಲೈಟ್ ಗಳಲ್ಲಿ ಒಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+