ಆಗ್ರಾದಲ್ಲಿ ವಿಜಯ 'ಶಂಖನಾದ' ಊದಿದ ಮೋದಿ
ಆಗ್ರಾ, ನ.21: ಇಲ್ಲಿನ ಕೋಥಿ ಮೀನಾ ಬಜಾರ್ ನಲ್ಲಿ ಗುರುವಾರ ನಡೆದ 'ವಿಜಯ ಶಂಖನಾದ'ಸಮಾವೇಶದಲ್ಲಿ ನರೇಂದ್ರ ಮೋದಿ ಅವರು ತಮ್ಮ ಭಾಷಣದುದ್ದಕ್ಕೂ ಆಗ್ರಾದ ಪ್ರವಾಸೋದ್ಯಮ ಮಹತ್ವದ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದರು. ಜತೆಗೆ ಕಾಂಗ್ರೆಸ್ಸಿಗೆ ಭ್ರಷ್ಟಾಚಾರವು ರಾಜಕೀಯದ ಒಂದು ಭಾಗವಾಗಿದೆ ಎಂದು ಮೂದಲಿಸುವುದನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮರೆಯಲಿಲ್ಲ.
ಮೋದಿ ಅವರ ಭಾಷಣಕ್ಕೂ ಮುನ್ನ ಮುಝಾಫರ್ ನಗರ ಗಲಭೆ ಕುಮ್ಮಕ್ಕು ನೀಡಿದ ಆರೋಪ ಹೊತ್ತಿರುವ ಇಬ್ಬರು ಬಿಜೆಪಿ ಶಾಸಕರಿಗೆ ಸನ್ಮಾನ ನಡೆದಿದ್ದು ಕುತೂಹಲಕಾರಿಯಾಗಿತ್ತು.
ಉತ್ತರ ಪ್ರದೇಶದ ಆಗ್ರಾದಲ್ಲಿ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಬಿಜೆಪಿ ಒಗ್ಗಟ್ಟನ್ನು ಸಾರಿದರೆ, ಕಾಂಗ್ರೆಸ್ ವಿಭಜಿಸುವ ಕೆಲಸ ಮಾಡುತ್ತದೆ. ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ರಾಜಕೀಯ ನಡೆಸುತ್ತಿದೆ. ದೇಶವನ್ನು ಅಭಿವೃದ್ಧಿ ಪಡೆಸುವಲ್ಲಿ ಕಾಂಗ್ರೆಸ್ಸಿಗೆ ಯಾವುದೇ ಆಸಕ್ತಿ ಇಲ್ಲ ಎಂದು ಮೋದಿ ದೂರಿದರು.
ಬಿಜೆಪಿ ಅಭಿವೃದ್ಧಿಯ ಕಾರ್ಯಸೂಚಿ ಹೊಂದಿದೆ, ಜಾತೀಯತೆ ಎಂಬುದು ಬಿಜೆಪಿ ಪಾಲಿಗಿಲ್ಲ, ಕಾಂಗ್ರೆಸ್ ಮತಕ್ಕಾಗಿ ಬಿಜೆಪಿ ಮೇಲೆ ಸುಳ್ಳು ಆರೋಪ ವರಿಸುತ್ತಿದೆ ಎಂದು ಮೋದಿ ಹೇಳಿದರು. ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರು ತಲೆಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಆ ಪಕ್ಷದ ನಾಯಕರೇ ಹೆಚ್ಚಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹಾಗಾಗಿ ಭ್ರಷ್ಟಾಚಾರ ರಾಜಕೀಯದ ಒಂದು ಭಾಗ ಎಂದು ಕಾಂಗ್ರೆಸ್ ತಿಳಿದಿದೆ ಎಂದರು.
ಅಕ್ಟೋಬರ್ 27 ರಂದು ಪಾಟ್ನದಲ್ಲಿ ಸರಣಿ ಸ್ಫೋಟ ನಡೆದ ನಂತರ ಮೋದಿ ಸಮಾವೇಶಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಮೋದಿ ನಮ್ಮ ಟಾರ್ಗೆಟ್ ನಂ.1 ಎಂದು ಲಷ್ಕರ್ ಇ ತೋಯ್ಬಾ ಸಂಘಟನೆ ಹೇಳಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಇಂದಿನ ಸಮಾವೇಶದಲ್ಲಿ ಪೋಲೀಸರ ಜತೆಗೆ ಲೋಹ ಶೋಧಕ, ಬಾಂಬ್ ಪತ್ತೆ ಹಚ್ಚುವ ಯಂತ್ರ, ಶ್ವಾನದಳ, ಬಾಂಬ್ ನಿಷ್ಕ್ರಿಯ ತಂಡ ಸುಸಜ್ಜಿತರಾಗಿ ಪಹರೆ ಕಾಯ್ದರು.

ಮೋದಿ ಭಾಷಣದ ಮುಖ್ಯಾಂಶ ಇಲ್ಲಿದೆ :
* ಪ್ರವಾಸೋದ್ಯಮ ಸುಮಾರು 3 ಟ್ರಿಲಿಯನ್ ಡಾಲರ್ ನಷ್ಟು ಹಣಗಳಿಕೆ ಹೊಂದಿದೆ ಆದರೆ, ಆಗ್ರಾಕ್ಕೆ ಇದರಿಂದ ಏನಾದರೂ ಲಾಭವಾಗುತ್ತಿದೆಯೆ?. ದೆಹಲಿಯಲ್ಲಿರುವ ತಲೆಗಳು ಸ್ಥಳೀಯರ ಕೈಗೆ ಲಾಭ ದೊರೆಯದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
* ದೇಶ ವಿದೇಶಗಳಿಂದ ಆಗ್ರಾಕ್ಕೆ ಪ್ರವಾಸಿಗರು ಬರುತ್ತಾರೆ. ದುರಂತವೆಂದರೆ ಇಲ್ಲಿ ಒಂದು ವಿಮಾನ ನಿಲ್ದಾಣವೂ ಇಲ್ಲ.
* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಬಿಕ್ಕಟ್ಟು ಇದ್ದರೆ ಪ್ರವಾಸಿ ತಾಣಗಳ ಪರಿಸ್ಥಿತಿ ಎಂದಿಗೂ ಬದಲಾಗದು.
* ಯಮುನಾ ನದಿ ದಂಡೆಯಲ್ಲಿರುವ ಆಗ್ರಾದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರೆ ನಂಬುತ್ತೀರಾ?
* ಬಹುಜನ ಸಮಾಜವಾಪಿ ಪಕ್ಷ ಹಾಗೂ ಸಮಾಜವಾದಿ ಪಕ್ಷ ರಾಜ್ಯ ಒಡೆಯುವುದನ್ನು ಕಾಯಕ ಮಾಡಿಕೊಂಡಿವೆ.
* ಕುಟುಂಬ ರಾಜಕಾರಣ, ಜಾತೀಯತೆ, ಸ್ವಜನಪಕ್ಷಪಾತ ಇರುವ ಕಡೆ ಅಭಿವೃದ್ಧಿ ನಿದ್ದೆ ಮಾಡುತ್ತದೆ.
* ಆಗ್ರಾದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ದೇಶದ ಪ್ರಮುಖ ರಾಜ್ಯ ಉತ್ತರ ಪ್ರದೇಶದಲ್ಲಿ ಆಡಳಿತ ಈ ರೀತಿ ಇರುವುದು ಶೋಚನೀಯ.











Click it and Unblock the Notifications