ಗೌರಿ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಸಿಬಿಐ ವಶಕ್ಕೆ
ಮುಂಬೈ, ಸೆಪ್ಟೆಂಬರ್ 06 : ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆಯನ್ನು ಸಿಬಿಐ ವಶಕ್ಕೆ ಪಡೆದಿದೆ. ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಕಾಳೆ ಕೈವಾಡ ಇರುವ ಕುರಿತು ಸಿಬಿಐ ವಿಚಾರಣೆ ನಡೆಸಲಿದೆ.
ಬುಧವಾರ ಬೆಂಗಳೂರಿಗೆ ಆಗಮಿಸಿದ್ದ ಸಿಬಿಐ ತಂಡ ಅಮೋಲ್ ಕಾಳೆಯನ್ನು ವಶಕ್ಕೆ ಪಡೆದುಕೊಂಡು ಪುಣೆಗೆ ಕರೆದುಕೊಂಡು ಹೋಗಿತ್ತು. ಗುರುವಾರ ಪುಣೆ ಸೆಷನ್ಸ್ ನ್ಯಾಯಾಲಯಕ್ಕೆ ಅಮೋಲ್ ಕಾಳೆಯನ್ನು ಹಾಜರುಪಡಿಸಲಾಗಿತ್ತು.
ಸೆಷನ್ಸ್ ನ್ಯಾಯಾಲಯ ಸೆಪ್ಟೆಂಬರ್ 14ರ ತನಕ ಅಮೋಲ್ ಕಾಳೆಯನ್ನು ಸಿಬಿಐ ವಶಕ್ಕೆ ನೀಡಿದೆ. ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲಿ ಅಮೋಲ್ ಕಾಳೆಯ ಪಾತ್ರದ ಕುರಿತು ಸಿಬಿಐ ವಿಚಾರಣೆ ನಡೆಸಲಿದೆ.

ಅಮೋಲ್ ಕಾಳೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ. ಗೌರಿ ಹತ್ಯೆ ಪ್ರಕರಣದ ಸಂಚು ರೂಪಿಸಿದ್ದೇ ಅಮೋಲ್ ಕಾಳೆ ಎಂಬ ಆರೋಪವಿದೆ. ಮೇ 21ರಂದು ದಾವಣಗೆರೆಯಲ್ಲಿ ಎಸ್ಐಟಿ ಅಮೋಲ್ ಕಾಳೆಯನ್ನು ಬಂಧಿಸಿತ್ತು.
ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರನಾದ ಅಮೋಲ್ ಕಾಳೆ, 2009ರಿಂದ ಮಹಾರಾಷ್ಟ್ರದ ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಪ್ರಗತಿಪರರನ್ನು ಕೊಲ್ಲಲು 2014-15ರಲ್ಲಿ ಗೋವಾದಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದ.












Click it and Unblock the Notifications