ಸಂಸದರಿಗಾಗಿ ನಂಬಿ ನಾರಾಯಣನ್ ಜೀವನಾಧಾರಿತ 'ರಾಕೆಟ್ರಿ' ಸಿನಿಮಾ ಪ್ರದರ್ಶನ
ನವದೆಹಲಿ,ಆಗಸ್ಟ್. 6: ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನಾಧಾರಿತ 'ರಾಕೆಟ್ರಿ' ಸಿನಿಮಾವನ್ನು ಸಂಸದರಿಗಾಗಿ ಪ್ರದರ್ಶಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಿರಿಯ ಮುಖಂಡರು ಸಂಸದರ ಜೊತೆ ರಾಕೆಟ್ರಿ ಸಿನಿಮಾ ವೀಕ್ಷಿಸಿದರು.
ರಾಕೆಟ್ ಉಡಾವಣೆಗೆ ಬಳಸುವ ಮಹತ್ವದ ವಿಕಾಸ್ ಇಂಜಿನ್ ತಯಾರಿಸಿದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರು ಸಹ ಈ ವಿಶೇಷ ಪ್ರದರ್ಶನದ ವೇಳೆ ಹಿರಿಯ ನಾಯಕರು ಹಾಗೂ ಸಂಸದರ ಜೊತೆ ಪಾಲ್ಗೊಂಡಿದ್ದರು. ಈ ಶ್ರೇಷ್ಠ ಚಿತ್ರದ ಅಭಿನಯಕ್ಕಾಗಿ ನಾಯಕ ನಟ ಆರ್. ಮಾಧವನ್ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ಅಭಿನಂದಿಸಿದರು.
ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರು ಸುಳ್ಳು ಆಪಾದನೆ ಎದುರಿಸಿ 1994 ರಿಂದ 1998 ರ ವರೆಗೆ ಅನುಭವಿಸಿದ ಹಿಂಸೆ, ಕೇರಳ ಪೊಲೀಸರು ನೀಡಿದ ಕಿರುಕುಳಗಳ ಕುರಿತು ಚಿತ್ರದಲ್ಲಿ ಹೇಳಲಾಗಿದೆ. ವಿಕಾಸ್ ಇಂಜಿನ್ ತಯಾರಿಸಿದ ಒಬ್ಬ ರಾಕೆಟ್ ಸೈನ್ಸ್ ವಿಜ್ಞಾನಿ ಭಾರತದ ವ್ಯವಸ್ಥೆಯಲ್ಲಿ ಪಟ್ಟ ಶ್ರಮದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಹಲವು ಅವಮಾನ, ಹಿಂಸೆಯ ನಡುವೆಯೂ ಹೋರಾಡಿ ತಾವು ನಿರ್ದೋಷಿ ಎಂಬುದನ್ನ ಸಾಬೀತು ಮಾಡಿದ ನಂಬಿ ನಾರಾಯಣನ್, ದೇಶದ ಅತ್ಯುತ್ತಮ ಮೂರನೇ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪಡೆದವರು.
ವಿದೇಶದಲ್ಲಿ ಹೆಚ್ಚಿನ ತರಬೇತಿ ಪಡೆದ ಬಳಿಕವು ಅಮೆರಿಕಾದ ನಾಸಾ ಆಫರ್ ತಿರಸ್ಕರಿಸಿ ಭಾರತಕ್ಕೆ ಬಂದು ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದವರು ನಂಬಿ ನಾರಾಯಣನ್. ಪಾಕಿಸ್ತಾನಕ್ಕೆ ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನ ಮಾರಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ನಂಬಿ ನಾರಾಯಣನ್ ಜೈಲುವಾಸ ಅನುಭವಿಸಬೇಕಾಯಿತು.
ಭಾರತದಲ್ಲಿ ಇಲ್ಲದ ಟೆಕ್ನಾಲಜಿಯನ್ನು ಮಾರಲು ಹೇಗೆ ಸಾಧ್ಯವಿದೆ..? ಎಂದು ನಂಬಿ ನಾರಾಯಣನ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಷಡ್ಯಂತ್ರದ ಹಿಂದೆ ಯಾರೇ ಇದ್ದರು ಅವರನ್ನು ಬಿಡಬಾರದು. ಇದು ದೇಶದ ಅತಿ ದೊಡ್ಡ ಸ್ಕ್ಯಾಂಡಲ್. ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರು ಯಾರು ಎಂಬುದು ದೇಶಕ್ಕೆ ಗೊತ್ತಾಗಬೇಕು ಎಂಬುದು ನಂಬಿ ನಾರಾಯಣನ್ ಹೋರಾಟವಾಗಿತ್ತು ಎಂದು ಸಿನಿಮಾ ಹೇಳುತ್ತದೆ. ರಾಕೆಟ್ರಿ ಸಿನಿಮಾ ವೀಕ್ಷಣೆ ಬಳಿಕ, ನಂಬಿ ನಾರಾಯಣನ್ ಅವರನ್ನು ಸನ್ಮಾನಿಸುವ ಮೂಲಕ ಗೌರವಿಸಲಾಯಿತು.