ನಾಗಾಲ್ಯಾಂಡ್ ಹತ್ಯಾಕಾಂಡ: ಯೋಧರ ಹೇಳಿಕೆ ದಾಖಲಿಸಲು ಎಸ್ಐಟಿಗೆ ಅನುಮತಿ
ನವದೆಹಲಿ, ಡಿಸೆಂಬರ್ 29: ನಾಗಾಲ್ಯಾಂಡ್ ಸೇನಾ ಕಾರ್ಯಾಚರಣೆ ವೇಳೆ 14 ನಾಗರಿಕರ ಹತ್ಯೆಗೆ ಸಂಬಂಧಿಸಿದಂತೆ ಸೇನಾ ಯೋಧರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ವಿಶೇಷ ತನಿಖಾ ತಂಡಕ್ಕೆ ಭಾರತೀಯ ಸೇನೆ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ 5ರಂದು ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ನಾಗಾಲ್ಯಾಂಡ್ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಚಾತುರ್ಯ ನಡೆಯಿತು. ನಾಗರಿಕರನ್ನೇ ಉಗ್ರರು ಎಂದು ತಪ್ಪಾಗಿ ಭಾವಿಸಿದ ಯೋಧರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 14 ನಾಗರಿಕರು ಮೃತಪಟ್ಟಿದ್ದರು. ಅಂದು ಆಕ್ರೋಶಗೊಂಡ ಗ್ರಾಮಸ್ಥರು ನಡೆಸಿದ ಹಲ್ಲೆಯಲ್ಲಿ ಒಬ್ಬ ಯೋಧರು ಹುತಾತ್ಮರಾಗಿದ್ದರು.
ನಾಗಾಲ್ಯಾಂಡ್ 14 ನಾಗರಿಕರ ಹತ್ಯೆ ಬಗ್ಗೆ ಅಮಿತ್ ಶಾ ಹೇಳಿಕೆಗೆ ಸಂಸತ್ ಸದಸ್ಯರ ಧಿಕ್ಕಾರ
ನಾಗಾಲ್ಯಾಂಡ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಈ ಹಿಂದೆ ಸೇನಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಯೋಧರ ಹೇಳಿಕೆ ಅನ್ನು ದಾಖಲಿಸಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.
ವಿಶೇಷ ಪಡೆ ಯೋಧರ ಹೇಳಿಕೆ ಸಂಗ್ರಹ:
ನಾಗಾಲ್ಯಾಂಡ್ ವಿಶೇಷ ತನಿಖಾ ತಂಡ ಅಥವಾ ಎಸ್ಐಟಿ ಅಧಿಕಾರಿಗಳು ಇದೇ ವಾರ 21 ಪ್ಯಾರಾ ಸ್ಪೆಷಲ್ ಫೋರ್ಸ್ ಯೋಧರ ಹೇಳಿಕೆಯನ್ನು ಸಂಗ್ರಹಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಗಾಲ್ಯಾಂಡ್ ಸಶಸ್ತ್ರ ಪಡೆಗಳ (ವಿಶೇಷ) ಅಧಿಕಾರಗಳ ಕಾಯಿದೆ ಅಥವಾ ಕೇಂದ್ರದ ಅನುಮತಿಯಿಲ್ಲದೆ ಶೋಷಣೆಯಿಂದ ಭದ್ರತಾ ಪಡೆಗಳನ್ನು ರಕ್ಷಿಸುವ AFSPA ಅಡಿಯಲ್ಲಿ ರಾಜ್ಯ ಮಟ್ಟದ ತನಿಖಾ ತಂಡದಿಂದ ಹೇಗೆ ತನಿಖೆ ಮುಂದುವರಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನಾಗಾಲ್ಯಾಂಡ್ ಎಸ್ಐಟಿ ತಂಡವನ್ನು ಎಂಟು ಸದಸ್ಯರಿಂದ 22 ಅಧಿಕಾರಿಗಳಿಗೆ ವಿಸ್ತರಿಸಲಾಗಿದೆ. ಆ ಮೂಲಕ ತನಿಖೆಗೆ ವೇಗ ನೀಡಲು ಸರ್ಕಾರ ಮುಂದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ, ದೊಡ್ಡ ತಂಡವು ಐದು ಭಾರತೀಯ ಪೊಲೀಸ್ ಸೇವಾ ಅಧಿಕಾರಿಗಳನ್ನು ಒಳಗೊಂಡಿದೆ. ಈ ಎಸ್ಐಟಿಯನ್ನು ಏಳು ತಂಡಗಳಾಗಿ ವಿಂಗಡಿಸಲಾಗಿದೆ.
ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ನಾಗಾಲ್ಯಾಂಡ್ನ ನಾಗರಿಕರ ಹತ್ಯೆ ವಿಷಯ ಸದ್ದು-ಗದ್ದಲ ಸೃಷ್ಟಿಸಿತು. ಸೋಮವಾರ ಲೋಕಸಭೆ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದರು.
ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಮಿತ್ ಶಾ ತಮ್ಮ ಹೇಳಿಕೆಯನ್ನು ನೀಡುತ್ತಿದ್ದರೆ, ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದರು. ನಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ AFSPA ಅನ್ನು ರದ್ದುಗೊಳಿಸುವಂತೆ ಸದಸ್ಯರು ಆಗ್ರಹಿಸಿದರು.