ಮುನುಗೋಡೆ ಉಪಚುನಾವಣೆ 2022: ಶೇ. 77.55 ರಷ್ಟು ಮತದಾನ
ಹೈದರಾಬಾದ್, ನವೆಂಬರ್ 3: ಬಿಜೆಪಿ, ಟಿಆರ್ಎಸ್ ಹಾಗೂ ಕಾಂಗ್ರೆಸ್ಗೆ ಪ್ರತಿಷ್ಠೆಯ ವಿಧಾನಸಭಾ ಕ್ಷೇತ್ರವಾಗಿದ್ದ ತೆಲಂಗಾಣದ ಮುನುಗೋಡೆ ವಿಧಾನಸಭಾ ಉಪಚುನಾವಣೆ ಮುಗಿದಿದ್ದು, 5 ಗಂಟೆವರೆಗೆ ಶೇ. 77.55ರಷ್ಟು ಮತದಾನವಾಗಿದೆ.
ಮುನುಗೋಡೆ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಬೆಳಗ್ಗೆ 6 ಗಂಟೆಯವರೆಗೆ ಮತದಾನ ನಡೆದಿತ್ತು. 2.41 ಲಕ್ಷಕ್ಕೂ ಹೆಚ್ಚು ಮತದಾರರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ಕ್ಷೇತ್ರದಲ್ಲಿ ಒಟ್ಟು 298 ಮತಗಟ್ಟೆಗಳಿದ್ದು, ಎಲ್ಲದರಿಂದ ವೆಬ್ ಕಾಸ್ಟಿಂಗ್ ಮಾಡಲಾಗಿತ್ತು. ಒಟ್ಟು, 105 ಬೂತ್ಗಳನ್ನು ನಿರ್ಣಾಯಕ ಎಂದು ಗುರುತಿಸಲಾಗಿತ್ತು.
ಮುನುಗೋಡು ಉಪಚುನಾವಣೆ: ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಬಂಧನ
ಈ ಮಧ್ಯೆ ಉಪಚುನಾವಣೆ ನಡೆಯುತ್ತಿರುವ ಮುನುಗೋಡುವಿನ ಮರ್ರಿಗುಡದ ಮತಗಟ್ಟೆಯೊಂದರಲ್ಲಿ ಎರಡು ಗುಂಪುಗಳು ಒಂದೇ ಗ್ರಾಮದವರಲ್ಲ ಎಂದು ಆರೋಪಿಸಿ ತೆಲಂಗಾಣ ಪೊಲೀಸರು ಗುರುವಾರ ಎರಡು ಗುಂಪುಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಮರ್ರಿಗುಡದಲ್ಲಿ ಎರಡು ಗುಂಪುಗಳು ಜಮಾಯಿಸಿ ಒಂದೇ ಗ್ರಾಮದವರಲ್ಲ ಎಂದು ಪರಸ್ಪರ ಆರೋಪಿಸಿದರು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಗುಂಪುಗಳನ್ನು ಚದುರಿಸಿದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನಲ್ಗೊಂಡ ಎಸ್ಪಿ ರೆಮಾ ರಾಜೇಶ್ವರಿ ತಿಳಿಸಿದ್ದಾರೆ.
ಟಿಆರ್ಎಸ್ ಪಕ್ಷವು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿಗರು ಮರ್ರಿಗುಡದ ಮತಗಟ್ಟೆಯಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿತು.
ಬಿಹಾರ, ಒಡಿಶಾ, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಆರು ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಈ ಆರು ರಾಜ್ಯಗಳಲ್ಲಿ ಖಾಲಿ ಇರುವ ಏಳು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ಮತದಾನ ನಡೆಯುತ್ತಿದ್ದು, ತೆಲಂಗಾಣದ ಮುನುಗೋಡು ಕ್ಷೇತ್ರವು ಚುನಾವಣಾ ಪೂರ್ವದಲ್ಲಿ ನಿರಂತರ ಮಾತಿನ ಸಮರಕ್ಕೆ ಸಾಕ್ಷಿಯಾದ ನಂತರ ಪ್ರಮುಖ ಕ್ಷೇತ್ರವಾಗಿತ್ತು.
ತೆಲಂಗಾಣದ ಮುನುಗೋಡು ಕ್ಷೇತ್ರದ ಜನತೆ ಮತದಾನಕ್ಕೂ ಮುನ್ನ ಟಿಆರ್ಎಸ್ ಮತ್ತು ಬಿಜೆಪಿಯಿಂದ ಬಿರುಸಿನ ಚುನಾವಣಾ ಪ್ರಚಾರವನ್ನು ಕಂಡಿದ್ದು, ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ್ದಾರೆ. ಇಂದು ಮುಂಜಾನೆ ಬಿಜೆಪಿ ಅಭ್ಯರ್ಥಿ ರಾಜ್ ಗೋಪಾಲ್ ರೆಡ್ಡಿ, ತಮ್ಮ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ, ರಾಜ್ಯ ಸರ್ಕಾರದಿಂದ ನಿರ್ಲಕ್ಷಿಸಲ್ಪಟ್ಟ ಈ ಪ್ರದೇಶದ ಅಭಿವೃದ್ಧಿಯನ್ನು ಕ್ಷೇತ್ರದ ಜನರು ಬಯಸುತ್ತಾರೆ ಎಂದು ಹೇಳಿದ್ದರು.
ಟಿಆರ್ಎಸ್ ಕಾರ್ಯಕರ್ತರು ಮತ್ತು ಪೊಲೀಸರು ಜನರಿಗೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ. ಜನರು ಇಲ್ಲಿ ಅಭಿವೃದ್ಧಿ ಬಯಸುತ್ತಾರೆಯೇ ಹೊರತು ಮದ್ಯವಲ್ಲ. ಇದು ತೀರಾ ಹಿಂದುಳಿದ ಕ್ಷೇತ್ರ. ಜನರು ಅಭಿವೃದ್ಧಿ ಬಯಸುತ್ತಿದ್ದಾರೆ. ಟಿಆರ್ಎಸ್ ಸರ್ಕಾರ ಇದನ್ನು ನಿರ್ಲಕ್ಷಿಸಿದೆ. ಕಾನೂನು ಸುವ್ಯವಸ್ಥೆ ಇಲ್ಲದ ಕಾರಣ ಮೂರೂವರೆ ವರ್ಷದಿಂದ ಏನೂ ಮಾಡಲು ಸಾಧ್ಯವಾಗಿಲ್ಲ. ನಾವು ಸರ್ವಾಧಿಕಾರದ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೇವೆ. ಅದೊಂದು ಭ್ರಷ್ಟ ಸರಕಾರ. ಜನರು ನನ್ನೊಂದಿಗಿದ್ದು, ಉತ್ತಮ ಫಲಿತಾಂಶ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.