ಮುನುಗೋಡು ಉಪಚುನಾವಣೆ: ಬಿಜೆಪಿ ಕಾರ್ಯಕರ್ತನ ಕಾರಿನಲ್ಲಿದ್ದ 1 ಕೋಟಿ ವಶ
ಹೈದರಾಬಾದ್, ಅಕ್ಟೋಬರ್ 18: ನವೆಂಬರ್ 3 ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುನುಗೋಡು ಕಡೆಗೆ ತೆರಳುತ್ತಿದ್ದ ಕಾರೊಂದರಿಂದ ತೆಲಂಗಾಣ ಪೊಲೀಸರು ಅಕ್ಟೋಬರ್ 17 ರಂದು 1 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಚೆಲ್ಮೆಡಾ ಕ್ರಾಸ್ರೋಡ್ನಲ್ಲಿ 1 ಕೋಟಿ ರು ನಗದು ವಶಪಡಿಸಿಕೊಳ್ಳಲಾಗಿದೆ. ಮುನುಗೋಡೆಗೆ ಹೋಗುತ್ತಿದ್ದ ಟಾಟಾ ಸಫಾರಿಯನ್ನು ನಿಲ್ಲಿಸಲಾಗಿದ್ದು, ಕಾರಿನಲ್ಲಿ ಹಣ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಏನನ್ನೂ ಬಹಿರಂಗಪಡಿಸದಿದ್ದರೂ, ಮುಂದಿನ ತನಿಖೆಯಲ್ಲಿ, ಕಾರು ಗುಂಟೂರಿನಿಂದ ಬಂದು ಮುನುಗೋಡುಗೆ ಹೋಗುತ್ತಿತ್ತು ಎಂದು ಪೊಲೀಸರು ಪತ್ತೆಹಚ್ಚಲು ಸಾಧ್ಯವಾಯಿತು.
ಕರೀಂನಗರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಪೊರೇಟರ್ ಒಬ್ಬರ ಪತಿ, ಮುನುಗೋಡು ಬಿಜೆಪಿ ಸ್ಟೀರಿಂಗ್ ಕಮಿಟಿ ಅಧ್ಯಕ್ಷರಾದ ವಿವೇಕ್ ವೆಂಕಟಸ್ವಾಮಿ ಅವರ ಸೂಚನೆಯ ಮೇರೆಗೆ ಹಣವನ್ನು ಸಾಗಿಸುತ್ತಿದ್ದರು. ಹಣದ ಮೂಲವನ್ನು ಸಾಬೀತುಪಡಿಸಲು ಅವರ ಬಳಿ ಯಾವುದೇ ದಾಖಲೆಗಳಿಲ್ಲ, ಮತ್ತು ಹಣವನ್ನು ಆದಾಯ ತೆರಿಗೆ ಇಲಾಖೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ನಲ್ಗೊಂಡ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮಾತನಾಡಿ, ಸಂಯೋಜಿತ ಚೆಕ್ ಪಾಯಿಂಟ್ಗಳ ಹೊರತಾಗಿ ನಾವು ಡೈನಾಮಿಕ್ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿದ್ದೇವೆ. ಅದನ್ನು ಮುನುಗೋಡೆ ಕಡೆಗೆ ಇನ್ಲೆಟ್ ಪಾಯಿಂಟ್ಗಳಲ್ಲಿ ನಿಯೋಜಿಸಲಾಗಿದೆ. ಹಲವೆಡೆ ದಿಢೀರ್ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸೋಮವಾರ 1 ಕೋಟಿ ವಶ ಅಲ್ಲದೆ ತೆಲಂಗಾಣ ಪೊಲೀಸರು ಇಲ್ಲಿಯವರೆಗೆ 24 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. ಇದಲ್ಲದೇ 2 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನು ಹಿಡಿದಿದ್ದಾರೆ. ತೆಲಂಗಾಣ ರಾಜ್ಯ ಅಬಕಾರಿ ಇಲಾಖೆಯು ಇಲ್ಲಿಯವರೆಗೆ ಸುಮಾರು 70 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ.
ಮುಂಬರುವ ಮುನುಗೋಡು ಉಪಚುನಾವಣೆಗೆ ಕಾಂಗ್ರೆಸ್ ಪಕ್ಷವು ಪಾಲ್ವಾಯಿ ಶ್ರವಂತಿ ರೆಡ್ಡಿ ಅವರ ಹೆಸರನ್ನು ಸೂಚಿಸಿದರೆ, ಬಿಜೆಪಿಯು ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರನ್ನು ಆಯ್ಕೆ ಮಾಡಿದೆ. ರಾಜಗೋಪಾಲ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಆಗಸ್ಟ್ 2022 ರಲ್ಲಿ ಮುನುಗೋಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ಮುನುಗೋಡಿನಲ್ಲಿ ಉಪಚುನಾವಣೆ ಅಗತ್ಯವಾಯಿತು.












Click it and Unblock the Notifications