ಮೊಘಲ್ ಚಕ್ರವರ್ತಿಗಳ ಮೇಲೆ ಮತ್ತೆ ಯೋಗಿ ಆದಿತ್ಯನಾಥ್ ವಾಗ್ದಾಳಿ
ಲಕ್ನೋ, ಜೂ 28: ಕೆಲವು ದಿನಗಳ ಹಿಂದೆ ಮೊಘಲ್ ಚಕ್ರವರ್ತಿ ಅಕ್ಬರ್ ವಿರುದ್ದ ಹೇಳಿಕೆ ನೀಡಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈಗ ಮತ್ತೊಬ್ಬ ಮೊಘಲ್ ಅರಸ ಔರಂಗಜೇಬ್ ವಿರುದ್ದ ವಾಗ್ದಾಳಿ ನಡಿಸಿದ್ದಾರೆ.
ಔರಂಗಜೇಬ್ ಉಪಟಳ ತಾಳಲಾರದೇ ಕಾಶ್ಮೀರ ಪಂಡಿತರು, ಇಸ್ಲಾಂಗೆ ಮತಾಂತರಗೊಂಡಿದ್ದರು ಎಂದು ಬಂಜಾರ ಸಮುದಾಯದ ಸಮಾವೇಶದಲ್ಲಿ ಯೋಗಿ ಹೇಳಿದ್ದಾರೆ. ಈ ಬಗ್ಗೆ ವಿವರಣೆಯನ್ನೂ ಯೋಗಿ ನೀಡಿದ್ದಾರೆ.
ವೈರಲ್ ವಿಡಿಯೋ: ಕರಾಕುಲ್ ಟೋಪಿ ಧರಿಸೋಕೆ ಒಲ್ಲೆ ಎಂದ ಯೋಗಿ
ಕಾಶ್ಮೀರ ಪಂಡಿತರ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಪಂಡಿತರ ಗುಂಪೊಂದು ಸಿಖ್ಕರ ಒಂಬತ್ತನೇ ಗುರು ತೇಗ್ ಬಹಾದ್ದೂರ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ತಮ್ಮ ನೋವನ್ನು ತೋಡಿಕೊಂಡಿತ್ತು.
ಇಸ್ಲಾಂ ಸಮುದಾಯಕ್ಕೆ ಮತಾಂತರಗೊಳ್ಳಲು ಔರಂಗಜೇಬ್ ಕೊಡುತ್ತಿದ್ದ ಕಷ್ಟಕಾರ್ಪಣ್ಯಗಳನ್ನು ಕಾಶ್ಮೀರ ಪಂಡಿತರು ತೇಗ್ ಬಹಾದ್ದೂರ್ ಅವರಿಗೆ ವಿವರಿಸಿದ್ದರು. ನಮ್ಮ ಗುರುಗಳನ್ನು ಒಪ್ಪಿಕೊಂಡರೆ ಮಾತ್ರ ಇಸ್ಲಾಂಗೆ ನಾವು ಮತಾಂತರಗೊಳ್ಳುತ್ತೇವೆ ಎಂದು ಔರಂಗಜೇಬ್ ಗೆ ತಿಳಿಸಿ ಎನ್ನುವ ಸಲಹೆಯನ್ನು ಪಂಡಿತರಿಗೆ ತೇಗ್ ಬಹಾದ್ದೂರ್ ನೀಡಿದ್ದರು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಆದರೆ, ತೇಗ್ ಬಹಾದ್ದೂರ್ ಅವರನ್ನು ಬಂಧಿಸಿದ ಔರಂಗಜೇಬ್ ಅವರಿಗೆ ಕೊಡಬಾರದು ಕಷ್ಟವನ್ನು ಕೊಡುತ್ತಾನೆ. ಇದನ್ನೆಲ್ಲವನ್ನೂ ಸಹಿಸಿಕೊಂಡ ತೇಗ್ ಬಹಾದ್ದೂರ್ ಅವರನ್ನು ಇಸ್ಲಾಂಗೆ ಪರವರ್ತನೆಗೊಳಿಸಲು ಔರಂಗಜೇಬ್ ಗೆ ಸಾಧ್ಯವಾಗಲಿಲ್ಲ ಎಂದು ಯೋಗಿ ಕಿಡಿಕಾರಿದ್ದಾರೆ.
ಕೆಲವು ದಿನಗಳ ಹಿಂದೆ ಮೊಘಲ್ ಚಕ್ರವರ್ತಿ ಅಕ್ಬರ್ ಗಿಂತ ಹದಿನಾರನೇ ಶತಮಾನದ ರಾಣಾ ಪ್ರತಾಪ್ ಶ್ರೇಷ್ಠರು. ತನ್ನ ಕೋಟೆಯನ್ನು ಹಲವು ವರ್ಷಗಳ ಹೋರಾಟದ ನಂತರ ರಾಣಾ ಪ್ರತಾಪ್ ವಾಪಸ್ ಪಡೆದುಕೊಂಡಿದ್ದರು. ಅಕ್ಬರ್ ನನ್ನು ಚಕ್ರವರ್ತಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಾತನ್ನು ಯೋಗಿ ಆದಿತ್ಯನಾಥ್ ಹೇಳಿದ್ದರು.
ಶಹಜಹಾನ್ - ಮಮ್ತಾಜ್ ದಂಪತಿಗಳ ಮೂರನೇ ಪುತ್ರನಾದ ಔರಂಗಜೇಬ್, 1628ರಲ್ಲಿ ಮೊಘಲ್ ಚಕ್ರವರ್ತಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದರು.