ಸ್ನಾತಕೋತ್ತರ ಪದವಿಯಿಲ್ಲದೆ ಎಂಫಿಲ್ ಸಾಧ್ಯವೆ? ಅರುಣ್ ಜೇಟ್ಲಿ ಪ್ರಶ್ನೆ
ನವದೆಹಲಿ, ಏಪ್ರಿಲ್ 13 : ಸ್ನಾತಕೋತ್ತರ ಪದವಿಯಿಲ್ಲದೆ ಎಂಫಿಲ್ ಪದವಿಯನ್ನು ಗಳಿಸುವುದು ಹೇಗೆ ಸಾಧ್ಯ? ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿದ್ಯಾರ್ಹತೆಯನ್ನು ಪ್ರಶ್ನಿಸಿದ್ದಾರೆ.
"ರಾಹುಲ್ ಗಾಂಧಿ ಅವರು ವಿದ್ಯಾರ್ಹತೆಯೇ ಪ್ರಶ್ನಾರ್ಹವಾಗಿರುವುದನ್ನು ಮರೆತು, ಬಿಜೆಪಿ ಅಭ್ಯರ್ಥಿಯ ವಿದ್ಯಾರ್ಹತೆಯ ಬಗ್ಗೆ ಒಂದಿಡೀ ದಿನ ಚರ್ಚೆ ಮಾಡಲಾಗುತ್ತದೆ" ಎಂದು ಅರುಣ್ ಜೇಟ್ಲಿ ಅವರು ಫೇಸ್ ಬುಕ್ ಬ್ಲಾಗ್ ನಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಒಬ್ಬ ಜನಪ್ರಿಯ ಸರಕಾರ ಅಥವಾ ಜನಪ್ರಿಯ ಪ್ರಧಾನ ಮಂತ್ರಿಯನ್ನು ಹೊರಹಾಕಬೇಕಿದ್ದರೆ ನಿಜವಾದ, ಊಹಾಪೋಹರಹಿತ ವಿಷಯಗಳಿರಬೇಕಾಗುತ್ತದೆ. ವಿರೋಧ ಪಕ್ಷಗಳು ಎರಡು ವರ್ಷಗಳ ಕಾಲ ಅಸ್ತಿತ್ವದಲ್ಲಿಯೇ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸಿ ವೃಥಾ ಕಾಲಹರಣ ಮಾಡಿವೆ. ರಫೇಲ್ ಮತ್ತು ಇವಿಎಂ ವಿರುದ್ಧ ಅವರು ಮಾಡಿದ ಸುಳ್ಳು ಪ್ರಚಾರ ಅವರಿಗೆ ಯಾವುದೇ ರೀತಿ ಸಹಾಯ ಮಾಡಿಲ್ಲ ಎಂದು ಅವರು ವಿರೋಧಿಗಳ ಮೇಲೆ ಟೀಕಾಪ್ರಹಾರ ಮಾಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದ್ದು, ದೇಶದಾದ್ಯಂತ 'ನರೇಂದ್ರ ಮೋದಿ' ಅಲೆ ಬಲವಾಗಿರುವುದು ಎಲ್ಲೆಡೆ ಕಾಣುತ್ತಿದೆ. ಹಲವಾರು ರಾಜ್ಯಗಳಲ್ಲಿ ವಿರೋಧ ಪಕ್ಷಗಳು ದಿಕ್ಕೆಟ್ಟಿವೆ, ಮಾಡಿಕೊಂಡ ಮೈತ್ರಿಗಳು ಕೆಲಸ ಮಾಡುತ್ತಿಲ್ಲ. ಇದೆಲ್ಲ ಬಿಜೆಪಿಗೆ ಅತ್ಯಂತ ಪೂರಕವಾಗಿ ಕಾಣಿಸುತ್ತಿದೆ ಎಂದು ಅರುಣ್ ಜೇಟ್ಲಿ ಅವರು ವಿಶ್ಲೇಷಿಸಿದರು.

ವಿರೋಧ ಪಕ್ಷಗಳಲ್ಲಿ ಸಾಮರಸ್ಯವಿಲ್ಲ
ಎಡ ಪಕ್ಷಗಳು, ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ನಡುವೆ ಮತ್ತು ಇದೀಗ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಸಾಮರಸ್ಯ ಇಲ್ಲದಿರುವುದು ಅತ್ಯಂತ ಸ್ಪಷ್ಟವಾಗಿ ಅವರ ವಾಗ್ಯುದ್ಧಗಳಲ್ಲಿ ಕಾಣಿಸುತ್ತಿದೆ. ಇನ್ನು ನಾಯಕತ್ವಕ್ಕೆ ಸಂಬಂಧಿಸಿದಂತೆ, ನಾವಂದುಕೊಂಡಿದ್ದಕ್ಕಿಂತ ಪರಿಸ್ಥಿತಿ ನಿರಾಶಾದಾಯಕವಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸುವುದರಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಕುಮಾರಿ ಮಾಯಾವತಿ ಹಿಂದೆ ಬಿದ್ದಿಲ್ಲ ಎಂದು ಅವರು ವಸ್ತುಸ್ಥಿತಿಯನ್ನು ತೆರೆದಿಟ್ಟರು.

2014ರಲ್ಲಿಯೂ ಈ ಪ್ರಯತ್ನ ನಡೆದಿತ್ತು
ಸರಕಾರವನ್ನು ಟೀಕಿಸುವ ಶಿಕ್ಷಣತಜ್ಞರು, ಆರ್ಥಿಕಶಾಸ್ತ್ರಜ್ಞರು, ಕಲಾವಿದರು ಮತ್ತು ನಿವೃತ್ತ ಸೇನಾಧಿಕಾರಿಗಳನ್ನು ಒಟ್ಟಿಗೆ ಸೇರಿಸಿ ಬಿಜೆಪಿ ವಿರುದ್ಧ ಮನವಿಪತ್ರ ಸಲ್ಲಿಸುವ ತಂತ್ರಗಾರಿಕೆ ಜಾರಿಯಲ್ಲಿದೆ. 2014ರಲ್ಲಿಯೂ ಇದೇರೀತಿ ಹತಾಷೆಯ ಪ್ರಯತ್ನ ಮಾಡಲಾಗಿತ್ತು. ಈ ರೀತಿ ಮನವಿಪತ್ರಕ್ಕೆ ಸಹಿ ಮಾಡುವವರು ವಿವಿಧ ಕ್ಷೇತ್ರಗಳಲ್ಲಿ ಸಿಕ್ಕೇ ಸಿಗುತ್ತಾರೆ. ಆದರೆ, ನಿವೃತ್ತಿ ಸೇನಾಧಿಕಾರಿಗಳು ಬರೆದಿದ್ದಾರೆನ್ನಲಾದ ಪತ್ರಕ್ಕೆ ತಾವು ಸಹಿ ಮಾಡಿಲ್ಲ ಎಂದು ಹಲವಾರು ಸೈನಿಕರೇ ಹೇಳಿದ್ದಾರೆ ಎಂದು ಜೇಟ್ಲಿ ವಾಗ್ದಾಳಿ ನಡೆಸಿದರು.

ಜನರೊಂದಿಗೆ ನೇರವಾದ ಸಂವಾದ
ಬಿಜೆಪಿ ಮತ್ತು ಮಿತ್ರಪಕ್ಷಗಳು ನೇರವಾಗಿ ಜನರೊಂದಿಗೆ ಸಂವಹನ ನಡೆಸುತ್ತವೆ. ಬೃಹತ್ ಸಮಾವೇಶ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ಬಿಜೆಪಿ ಮಾತನಾಡುತ್ತದೆ. ಪಕ್ಷದ ಮತ್ತು ಸರಕಾರದ ಸಂದೇಶವನ್ನು ಲಕ್ಷಾಂತರ ಕಾರ್ಯಕರ್ತರು ಜನರಿಗೆ ತಲುಪಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸರಕಾರದ ವಿರುದ್ಧ ಯಾವುದೇ ಪ್ರಮುಖ ಆರೋಪ ಮಾಡುವಲ್ಲಿ ವಿಫಲವಾಗಿರುವ ವಿರೋಧಿಗಳು ಈ ರೀತಿ ಟ್ವಿಟ್ಟರ್ ನಲ್ಲಿ ಮತ್ತು ಪತ್ರಿಕಾಗೋಷ್ಠಿ ಮಾಡುವ ಮೂಲಕ ಸಲ್ಲದ ವಿಷಯಗಳನ್ನು ಎತ್ತಿತ್ತಿದ್ದಾರೆ. ಇದು ವಿರೋಧ ಪಕ್ಷಗಳ ಹೀನಾಯ ಸ್ಥಿತಿ ಎಂದು ಅರುಣ್ ಜೇಟ್ಲಿ ಅವರು ಕಿಡಿ ಕಾರಿದರು.

ವಿರೋಧಿಗಳಿಗೆ ಅರುಣ್ ಜೇಟ್ಲಿ ಚಾಟಿ
ಪುಲ್ವಾಮಾ ಆತ್ಮಾಹುತಿ ದಾಳಿಯನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ದೂರಲಾಯಿತು. ಬಾಲಕೋಟ್ ಏರ್ ಸ್ಟ್ರೈಕ್ ಅನ್ನು ವಾಯು ಸೇನೆ ಮಾಡಿಯೇ ಇಲ್ಲ ಎಂದು ಪ್ರಶ್ನಿಸಲಾಯಿತು. ಡಾ. ಹೋಲಿ ಜಹಾಂಗಿರ್ ಭಾಭಾ ಅವರೊಂದಿಗೆ ನಡೆಸಿದ ಪತ್ರಸಂವಹನ ವ್ಯತಿರಿಕ್ತವಾಗಿ ಹೇಳುತ್ತಿದ್ದರೂ, ಉಪಗ್ರಹ ನಿಗ್ರಹ ಮಿಸೈಲ್ ಪ್ರಯೋಗವನ್ನು ನೆಹರೂ ಅವರ ಕಾಣಿಕೆ ಎಂದು ಹುಯಿಲೆಬ್ಬಿಸಲಾಯಿತು. ಒಂದು ದಿನ ಬಿಜೆಪಿ ಯುದ್ಧೋನ್ಮಾದದಲ್ಲಿದೆ ಎನ್ನಲಾಯಿತು, ಮತ್ತೊಂದು ದಿನ ಪಾಕಿಸ್ತಾನದ ಪರವಾಗಿದೆ ಎಂದು ಆರೋಪಿಸಲಾಯಿತು ಎಂದು ಜೇಟ್ಲಿ ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.

ನಾಯಕರೂ ಇಲ್ಲ, ಘಟಬಂಧನವೂ ಇಲ್ಲ
ಅವರಲ್ಲಿ ನಾಯಕರೇ ಇಲ್ಲ, ಯಾವುದೇ ಘಟಬಂಧನ್ ಇಲ್ಲ, ಸಾಮಾನ್ಯ ಕನಿಷ್ಠ ಕಾರ್ಯಕ್ರಮವೇ ಇಲ್ಲ, ಅವರ ಬಳಿ ಮಾತಾಡಲು ಯಾವುದೇ ವಿಷಯವೂ ಇಲ್ಲ. ಈ ವಿಫಲ ಪ್ರಚಾರದ ಹೊಣೆಯನ್ನು ಹೊರಲು ಕೂಡ ಅವರ ಬಳಿ ಯಾರೂ ಇಲ್ಲ ಎಂಬುದು ಅಚ್ಚರಿಯ ಸಂಗತಿಯೂ ಅಲ್ಲ ಎಂದು ಅರುಣ್ ಜೇಟ್ಲಿ ಅವರು ತಮ್ಮ ಫೇಸ್ ಬುಕ್ ಬ್ಲಾಗ್ ನಲ್ಲಿ ಬರೆದಿದ್ದಾರೆ.












Click it and Unblock the Notifications