ಮಧ್ಯಪ್ರದೇಶದ ರೈತರ ಹೋರಾಟದಲ್ಲಿ ರಾಜಕೀಯ ಮೇಲಾಟ
ಆಮ್ ಆದ್ಮಿ ಪಕ್ಷದ ಮುಖಂಡರಿಗೆ ಮಧ್ಯಪ್ರದೇಶದ ರೈತರ ಹೋರಾಟದ ಸ್ಥಳಕ್ಕೆ ಹೋಗದಂತೆ ಪೊಲೀಸರು ಸೂಚಿಸಿದ್ದಾರೆ. ಹೊರಭಾಗದ ಯಾರನ್ನೂ ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿಗೆ ಬಿಡಲು ಸಾಧ್ಯವಿಲ್ಲಎಂದು ಪೊಲೀಸರ ಸೂಚನೆ.
ಭೋಪಾಲ, ಜೂ 9 (ಪಿಟಿಐ) : ಹಿಂಸಾತ್ಮಕ ರೂಪಕ್ಕೆ ತಿರುಗಿರುವ ಮಧ್ಯಪ್ರದೇಶದಲ್ಲಿನ ಅನ್ನದಾತರ ಹೋರಾಟದಲ್ಲಿ ವಿರೋಧ ಪಕ್ಷಗಳ ರಾಜಕೀಯ ಮೇಲಾಟ ಮುಂದುವರಿದಿದೆ.
ಗುರುವಾರ (ಜೂ 8) ಪೊಲೀಸ್ ನಿರ್ಭಂದದ ನಡುವೆಯೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಧ್ಯಪ್ರದೇಶದ ಮಂದಸೌರಿಗೆ ತೆರಳಿ, ಬಂಧನಕ್ಕೊಳಗಾಗಿ ನಂತರ ಬಿಡುಗಡೆಗೊಂಡ ಘಟನೆಯ ನಂತರ, ಈಗ ಆಮ್ ಆದ್ಮಿ ಪಕ್ಷದ ಮುಖಂಡರ ಸರದಿ.

ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಲು ಕೆಲವು ಸಮಯಸಾಧಕರು ಕಾರಣ ಎಂದು ಹರಿದಾಡುತ್ತಿರುವ ಸುದ್ದಿಯ ನಡುವೆ, ಪೊಲೀಸರು ಯಾವ ನಾಯಕರನ್ನೂ ಘಟನಾ ಸ್ಥಳದತ್ತ ಹೋಗಲು ಬಿಡುತ್ತಿಲ್ಲ.
ಈ ನಡುವೆ, ಶುಕ್ರವಾರ ಮಂದಸೌರ್ ಮತ್ತು ಪಿಪ್ಲಿಯಾಮಂಡಿಯಲ್ಲಿ ಕರ್ಫ್ಯೂ ಸಡಿಲಿಸಿದ್ದರೂ, ಆಮ್ ಆದ್ಮಿ ಪಕ್ಷದ ಮುಖಂಡರಿಗೆ ಸ್ಥಳಕ್ಕೆ ಹೋಗದಂತೆ ಪೊಲೀಸರು ಸೂಚಿಸಿದ್ದಾರೆ. ಹೊರಭಾಗದ ಯಾರನ್ನೂ ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿಗೆ ಬಿಡಲು ಸಾಧ್ಯವಿಲ್ಲಎಂದು ಪೊಲೀಸರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.
ರೈತರ ಹೋರಾಟವನ್ನು ಬಿಜೆಪಿ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷ, ರಾಹುಲ್ ಭೇಟಿಯಾದ ಮರುದಿನ ಘಟನಾ ಸ್ಥಳಕ್ಕೆ ಹೋಗಲು ಸಿದ್ದತೆ ನಡೆಸಿತ್ತು.
ರೈತರ ಹೋರಾಟವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸುತ್ತಿದ್ದು, ಹಿಂಸೆಗೆ ಪ್ರಚೋದನೆ ನೀಡುತ್ತಿರುವ ಹಿನ್ನಲೆಯಲ್ಲಿ ಸದ್ಯದ ಮಟ್ಟಿಗೆ ಅಲ್ಲಿಗೆ ಯಾರನ್ನೂ ಬಿಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications