ಪಂಚ ರಾಜ್ಯಗಳ ಚುನಾವಣೆಯಲ್ಲಿ ತಿರಸ್ಕರಿಸುವ ಹಕ್ಕು
ಭೋಪಾಲ್, ಅ.2 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಶೀಘ್ರವೇ ಜಾರಿಗೆ ಬರಲಿದೆ. ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿಯೇ ಈ ವ್ಯವಸ್ಥೆ ಮತದಾರರಿಗೆ ದೊರೆಯಲಿದೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ಮತದಾರರಿಗೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಒದಗಿಸುದಾಗಿ ಹೇಳಿಕೆ ನೀಡಿದೆ. ಇದಕ್ಕಾಗಿ ಮತಯಂತ್ರದಲ್ಲಿ ಪ್ರತ್ಯೇಕ ಗುಂಡಿಯನ್ನು ಅಳವಡಿಸಲಾಗುವುದು ಎಂದು ತಿಳಿಸಿದೆ.

ಮಧ್ಯಪ್ರದೇಶದಲ್ಲಿ ಚುನಾವಣೆ ಆಯೋಗ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಚುನಾವಣೆಗೆ ಸ್ಪರ್ಧಿಸುತ್ತಿರುವ ಯಾವುದೇ ಅಭ್ಯರ್ಥಿ ಇಷ್ಟವಾಗದೆ ಹೋದರೆ ಮತದಾರರು ಮತಯಂತ್ರಗಳಲ್ಲಿ ಅಳವಡಿಸಲಾಗಿರುವ ಎನ್ಒಟಿಎ (none of the above) ಗುಂಡಿ ಒತ್ತಬಹುದು ಎಂದು ಹೇಳಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಮತದಾರನಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿತ್ತು. (ಮತದಾರರೇ, ಅಭ್ಯರ್ಥಿ ತಿರಸ್ಕರಿಸುವ ಹಕ್ಕು ಸಿಕ್ತು)
ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಿಂದಲೇ ಅಭ್ಯರ್ಥಿಗಳನ್ನು ತಿರಸ್ಕರಿಸುವ ವಿಶೇಷ ಬಟನ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕೋರ್ಟ್ ಆದೇಶಿಸಿತ್ತು. ಈ ಸಂಬಂಧ ಚುನಾವಣಾ ಆಯೋಗಕ್ಕೆ ಸಹಕಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಮತಪತ್ರಗಳು ಹಾಗೂ ಯಂತ್ರಗಳಲ್ಲಿ ತಿರಸ್ಕರಿಸುವ ಹಕ್ಕನ್ನು ಕಡ್ಡಾಯವಾಗಿ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಮತಪತ್ರಗಳಲ್ಲೂ ಎನ್ಒಟಿಎ ಆಯ್ಕೆಯನ್ನು ಕೊನೆಯ ಅಭ್ಯರ್ಥಿಯ ಹೆಸರಿನ ಕೆಳಗೆ ಮುದ್ರಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.












Click it and Unblock the Notifications