ಮೋದಿ ನೇತೃತ್ವದ ಸರ್ವಪಕ್ಷಗಳ ಸಭೆ ಸಕಾರಾತ್ಮಕ: ಅನಂತಕುಮಾರ್
ನವದೆಹಲಿ ಜುಲೈ 18: ಮುಂಗಾರು ಅಧಿವೇಶನ ಸಮರ್ಪಕವಾಗಿ ನಡೆಯಲು ಸಹಕರಿಸುವುದಾಗಿ ಪ್ರತಿಪಕ್ಷಗಳ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದ್ದಾರೆ.
ನವದೆಹಲಿಯ ಸಂಸತ್ ಭವನದಲ್ಲಿ ಮಂಗಳವಾರ(ಜುಲೈ 17)ದಂದು ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಮುಂಗಾರು ಅಧಿವೇಶನ ಸರಿಯಾಗಿ ನಡೆಯಲು ಸಹಕರಿಸುವಂತೆ ಪ್ರಧಾನಿ ಪ್ರತಿಪಕ್ಷಗಳ ನಾಯಕರನ್ನು ಕೇಳಿದರು. ಪ್ರತಿಪಕ್ಷಗಳು ಯಾವುದೇ ವಿಷಯಗಳನ್ನು ಮಂಡಿಸಬಹುದಾಗಿದೆ. ಇದಕ್ಕೆ ಸಮರ್ಪಕವಾಗಿ ಉತ್ತರಿಸಲು ಕೇಂದ್ರ ಸರಕಾರ ಸಿದ್ದವಿದೆ ಎಂದು ಸಚಿವರು ತಿಳಿಸಿದರು.
ಮುಂಗಾರು ಅಧಿವೇಶನದಲ್ಲಿ ಮೋದಿ ಸರ್ಕಾರಕ್ಕೆ ಐದು ಸವಾಲುಗಳು
ಸಂಸತ್ ಅಧಿವೇಶನ ಸರಿಯಾಗಿ ನಡೆಯಲಿ ಎಂದು ಜನರು ಆಶಿಸುತ್ತಾರೆ. ಇದನ್ನು ಜನಪ್ರತಿನಿಧಿಗಳಾದ ನಾವು ಖಚಿತಪಡಿಸಬೇಕಾಗಿದೆ ಎಂದರು.
ಈ ಬಾರಿಯ ಅಧಿವೇಶನ(ಜುಲೈ 18ರಿಂದ ಆರಂಭ) ದಲ್ಲಿ ಹಲವಾರು ಮಹತ್ವದ ಶಾಸನಾತ್ಮಕ ಅಂಶಗಳನ್ನು ಚರ್ಚೆಗೆ ಕೇಂದ್ರ ಸರಕಾರ ತರಲು ಯೋಜಿಸಿದೆ. ಈ ನಿಟ್ಟಿನಲ್ಲಿ ಈ ಮಳೆಗಾಲದ ಅಧಿವೇಶನ ಸಮರ್ಪಕವಾಗಿ ನಡೆಯಲು ಪ್ರತಿಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಲೋಕಸಭೆಯಿಂದ ಅಂಗೀಕೃತವಾಗಿ, ರಾಜ್ಯ ಸಭೆಯಲ್ಲಿ ಚರ್ಚೆಯಾಗಬೇಕಾಗಿರುವ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಳಲ್ಲೊಂದಾಗಿರಲಿದೆ. ಅಲ್ಲದೆ, ಓಬಿಸಿ ರಾಷ್ಟ್ರಿಯ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆಯನ್ನು ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಲಾಗುವುದು. ಹಾಗೆಯೇ, ವೈದ್ಯಕೀಯ ಶಿಕ್ಷಣದ ರಾಷ್ಟ್ರೀಯ ಆಯೋಗ ಮಸೂದೆ ಹಾಗೂ ತೃತೀಯ ಲಿಂಗಿಗಳ ಮಸೂದೆಯನ್ನೂ ಮಂಡಿಸಲಾಗುವುದು ಎಂದರು.
ರಾಜ್ಯಸಭಾ ಉಪಸಭಾಪತಿ ಪಿ ಜೆ ಕುರಿಯನ್ ಅವರ ಅಧಿಕಾರಾವಧಿ ಕೊನೆಯಾಗುವುದರಿಂದ, ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೂ ಚುನಾವಣೆಯನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಎನ್ ಸಿ ಪಿ ಮುಖಂಡ ಶರದ್ ಪವಾರ್, ಸಿಪಿಐ ಮುಖಂಡರಾದ ಡಿ ರಾಜ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.