ಅವಧಿಗೂ ಮುನ್ನವೇ ಮುಂಗಾರು ಮಳೆ ಆಗಮನ,ಈ ರಾಜ್ಯಗಳಿಗೆ ಎಚ್ಚರಿಕೆ
ಬೆಂಗಳೂರು, ಮೇ 17: ನೈಋತ್ಯ ಮುಂಗಾರು ಮಾರುತಗಳು ಅವಧಿಗೆ ಮುನ್ನ ಮಳೆ ಹೊತ್ತು ಸಾಗುತ್ತಿದ್ದು, ಸೋಮವಾರ ರಾತ್ರಿ ವೇಳೆಗೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹ ಪ್ರವೇಶಿಸಿರುವುದನ್ನು ಭಾರತೀಯ ಹವಾಮಾನ ಇಲಾಖೆ ಖಚಿತಪಡಿಸಿದೆ. ಮೊದಲ ಮಳೆಯ ಸಿಂಚನವಾಗುತ್ತಿದ್ದು, ವಾರ್ಷಿಕ ಮುಂಗಾರು ಮಳೆ ವೇಳಾಪಟ್ಟಿಯನ್ನು ಬದಲಾಯಿಸಲು ಒತ್ತಡ ಹೇರಿದೆ. ಕನಿಷ್ಠ 10-12 ದಿನಗಳಿಗೂ ಮುನ್ನವೇ ಮುಂಗಾರು ಮಳೆಯ ಆಗಮನದ ಬಗ್ಗೆ ಮಾಹಿತಿ ಹೊರ ಬಂದಿದೆ. ಈ ಮೂಲಕ ನಾಲ್ಕು ತಿಂಗಳ ಮಳೆಗಾಲಕ್ಕೆ ಜನತೆ ಸಜ್ಜಾಗಬೇಕಿದೆ.
ಮೇ 15ರ ಸುಮಾರಿಗೆ ನೈಋತ್ಯ ಮಾನ್ಸೂನ್ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೇ 13ರಂದೇ ಮುನ್ಸೂಚನೆ ನೀಡಿತ್ತು. ಎರಡು ದಿನ ಕಳೆದು ಮಳೆ ಮಾರುತಗಳು ಭರ್ಜರಿಯಾಗಿ ಎಂಟ್ರಿಕೊಟ್ಟಿವೆ. ಈ ಮೂಲಕ ಹಲವು ರಾಜ್ಯಗಳಿಗೆ ಮಳೆಗಾಲಕ್ಕೆ ಅನಿವಾರ್ಯವಾಗಿ ಸಜ್ಜಾಗಬೇಕಾದ ಪರಿಸ್ಥಿತಿ ತಂದೊಡ್ಡಿವೆ.
ಸಾಮಾನ್ಯವಾಗಿ, ಮಾನ್ಸೂನ್ ಮೇ 22ರಂದು ಸಂಪೂರ್ಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಆವರಿಸುತ್ತದೆ. ಜೂನ್ 1ರ ವೇಳೆಗೆ 5 ದಿನ ಹೆಚ್ಚು ಕಡಿಮೆಯ ಅಂತರದಲ್ಲಿ ಕೇರಳವನ್ನು ತಲುಪುತ್ತದೆ.

ಮುಂಗಾರು ವೇಳಾಪಟ್ಟಿ ಬದಲಾವಣೆ ಏಕೆ?
ಮೇ 19ರ ವೇಳೆಗೆ ದಕ್ಷಿಣ ಚೀನಾ ಸಮುದ್ರದ ಮೇಲೆ ಮತ್ತೊಂದು ಕಡಿಮೆ ಒತ್ತಡದ ವ್ಯವಸ್ಥೆಯು ರೂಪುಗೊಳ್ಳುತ್ತದೆ ಎಂದು ಹವಾಮಾನ ಮಾದರಿಗಳು ಸೂಚಿಸುತ್ತಿವೆ, ಇದು ಬಂಗಾಳ ಕೊಲ್ಲಿಗೆ ದಾಟಿದರೆ ಕೇರಳದ ಕಡೆಗೆ ಮಾನ್ಸೂನ್ ಮಾರುತಗಳನ್ನು ಸ್ಥಾಪಿಸಲು ಮತ್ತು ಬಲಪಡಿಸಲು ಸಹಾಯವಾಗುತ್ತದೆ," ಎಂದು ಹವಾಮಾನ ಇಲಾಖೆ ಹೇಳಿದೆ. ಮೇ 15ರೊಳಗೆ ಪ್ರಾದೇಶಿಕ ವಿತರಣೆ ಮತ್ತು ಉತ್ತರದ ಕಡೆಗೆ ಅದರ ಪ್ರಗತಿಯನ್ನು ಒಳಗೊಂಡಂತೆ ಹೆಚ್ಚು ನಿಖರವಾದ ಮುನ್ಸೂಚನೆಯೊಂದಿಗೆ ಬರಲಿದೆ ಎಂದು ತಿರುವನಂತಪುರಂನಲ್ಲಿರುವ IMD ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕೆ ಸಂತೋಷ್ ಹೇಳಿದರು.

ಕೇರಳ ಮತ್ತು ಕರ್ನಾಟಕದಲ್ಲಿ ಮಳೆ
ಕೇರಳ ಮತ್ತು ಕರ್ನಾಟಕದಲ್ಲಿನ 14 ನಿಗದಿತ ಸ್ಥಳಗಳಲ್ಲಿ ಕನಿಷ್ಠ 8 ಎರಡು ದಿನಗಳಲ್ಲಿ 2.4 mm ಗಿಂತ ಹೆಚ್ಚಿನ ಮಳೆಯನ್ನು ಆಗಲಿದೆ. ನಿರ್ದಿಷ್ಟ ವ್ಯಾಪ್ತಿಯ ಭೂ ತಾಪಮಾನ ಮತ್ತು ಗಾಳಿಯ ವೇಗವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, 10-15 ಎಂಎಂ ನಂತೆ ಮಳೆ ಸುರಿಯುತ್ತಿದೆ.
ಜುಲೈ ಮಧ್ಯದ ವೇಳೆಗೆ ಭಾರತದ ಉಳಿದ ಭಾಗಗಳನ್ನು ಆವರಿಸುತ್ತದೆ, ರಾಜ್ಯದಲ್ಲಿ ಸುಮಾರು 204 ಸೆಂ.ಮೀ ವಾರ್ಷಿಕ ಮಳೆಯನ್ನು ತರುತ್ತದೆ, ಆದರೆ ಈಶಾನ್ಯ ಮಾನ್ಸೂನ್ ಕೇರಳದಲ್ಲಿ ಸುಮಾರು 49 ಸೆಂ.ಮೀ ಮಳೆಯನ್ನು ನೀಡುತ್ತದೆ. ಇದರ ಮಧ್ಯೆ, ರಾಜ್ಯವು ಬೇಸಿಗೆ ಕಾಲದಲ್ಲಿ ಶೇ.69 ಹೆಚ್ಚುವರಿ ಮಳೆಯನ್ನು ದಾಖಲಿಸಿದೆ. ಮಾರ್ಚ್ 1 ರಿಂದ ಮೇ 12 ರವರೆಗಿನ ದೀರ್ಘಾವಧಿಯ ಸರಾಸರಿ 20.09 cm ಗೆ 33.88 cm ಮಳೆ ಆಗುತ್ತದೆ.

ಯಾವೆಲ್ಲ ರಾಜ್ಯಗಳಲ್ಲಿ ಮಳೆ ಅಬ್ಬರ
ತಮಿಳುನಾಡು, ಕೇರಳ, ಕರ್ನಾಟಕ ಹಾಗೂ ಆಂಧ್ರ- ತೆಲಂಗಾಣದ ಕೆಲ ಭಾಗದಲ್ಲಿ ನಿರಂತರ ಮಳೆ ನಿರೀಕ್ಷಿಸಲಾಗಿದೆ. ಈಗಾಗಲೇ ಈ ರಾಜ್ಯಗಳಲ್ಲಿ ಚಂಡಮಾರುತ, ವಾಯುಭಾರ ಕುಸಿತದ ಪರಿಣಾಮ ಮಳೆ ಸುರಿಯುತ್ತಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಬಿದ್ದಿದೆ. ಮುಂದಿನ ಐದು ದಿನಗಳಲ್ಲಿ ಭಾರಿ ಗಾಳಿ ಮಳೆ ಜೊತೆ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಮುಖ್ಯವಾಗಿ ಕೇರಳ ಹಾಗೂ ಕರ್ನಾಟಕ ಕರಾವಳಿ ಭಾಗದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದೆ.

ಕರ್ನಾಟಕ ಕರಾವಳಿಯಲ್ಲಿ ರೆಡ್ ಅಲರ್ಟ್
ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಪ್ರತಿದಿನ ತಲಾ 100 ಮಿ. ಮೀ. ನಿಂದ 150 ಮಿ. ಮೀ. ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ.ರಾಜೇಂದ್ರ ಆದೇಶಿಸಿದ್ದಾರೆ.
ಸೋಮವಾರದಿಂದ ಬುಧವಾರದವರೆಗೆ ತಮಿಳುನಾಡಿನಲ್ಲಿ ಮತ್ತು ಮುಂದಿನ ಎರಡು ದಿನಗಳಲ್ಲಿ ಲಕ್ಷದ್ವೀಪ ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಮೇಲೆ ಬುಧವಾರದಂದು ಭಾರಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications