ಆಸ್ಪತ್ರೆಗೆ ಮೋದಿ ಭೇಟಿ, ಪರಿಕ್ಕರ್ ಆರೋಗ್ಯ ಪರಿಸ್ಥಿತಿ ಇನ್ನೂ ನಿಗೂಢ
ಮುಂಬೈ, ಫೆಬ್ರವರಿ 19: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂಬ ಗಾಳಿಸುದ್ದಿಗಳ ಮಧ್ಯೆ ಭಾನುವಾರ ರಾತ್ರಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಅವರು ಪರಿಕ್ಕರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಪರಿಕ್ಕರ್ ನಾಲ್ಕನೇ ಹಂತದ ಪ್ಯಾನ್ ಕ್ರಿಯೇಟಿಕ್ ಕ್ಯಾನ್ಸರ್ ಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಇದನ್ನು ಆಸ್ಪತ್ರೆಯ ಮೂಲಗಳು ತಳ್ಳಿ ಹಾಕಿವೆ.
ಈ ಕುರಿತು ವರದಿ ಬಿಡುಗಡೆ ಮಾಡಿದ ಲೀಲಾವತಿ ಆಸ್ಪತ್ರೆ, "ಮನೋಹರ್ ಪರಿಕ್ಕರ್ ಆರೋಗ್ಯದ ಬಗ್ಗೆ ಮಾಧ್ಯಮಗಳಲ್ಲಿ ದುರುದ್ದೇಶಪೂರಿತ ಮತ್ತು ದಾರಿತಪ್ಪಿಸುವ ವರದಿಗಳು / ವದಂತಿಗಳನ್ನು ಹರಡಲಾಗುತ್ತಿದೆ," ಎಂದು ಹೇಳಿತ್ತು. ಆದರೆ ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ಯಾವುದೇ ಗುಟ್ಟುಗಳನ್ನು ಬಿಟ್ಟುಕೊಟ್ಟಿಲ್ಲ.

"ನಾವು ಈ ರೀತಿಯ ಗಾಳಿ ಸುದ್ದಿಗಳನ್ನು ತಳ್ಳಿ ಹಾಕುತ್ತಿದ್ದೇವೆ. ಗೌರವಾನ್ವಿತ ಗೋವಾ ಮುಖ್ಯಮಂತ್ರಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಅವರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ," ಎಂದಷ್ಟೇ ತನ್ನ ಪ್ರಕಟಣೆಯಲ್ಲಿ ಲೀಲಾವತಿ ಆಸ್ಪತ್ರೆ ಹೇಳಿದೆ.
ಆಸ್ಪತ್ರೆಯವರು ಪರಿಕ್ಕರ್ ಗೆ ಪ್ಯಾನ್ ಕ್ರಿಯೇಟಿಕ್ ಕ್ಯಾನ್ಸರ್ ಇದೆ ಎಂದೂ ಹೇಳಿಲ್ಲ. ಇಲ್ಲ ಎಂದೂ ಸ್ಪಷ್ಟನೆ ನೀಡಿಲ್ಲ. ಕೇವಲ ಗಾಳಿ ಸುದ್ದಿಗಳನ್ನಷ್ಟೇ ತಳ್ಳಿ ಹಾಕಿದೆ.
ಮಂಗಳವಾರ ಮನೋಹರ್ ಪರಿಕ್ಕರ್ ಹೊಟ್ಟೆ ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ಇದು ಆಹಾರದಲ್ಲಾದ ಏರುಪೇರು ಎಂದು ತಿಳಿದುಕೊಳ್ಳಲಾಗಿತ್ತು. ನಂತರ ಬುಧವಾರ ಚೆಕ್ ಅಪ್ ಮಾಡಿದ ನಂತರ ವಿಮಾನದಲ್ಲಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.












Click it and Unblock the Notifications