Online Gambling: ಆನ್ಲೈನ್ ಜೂಜಾಟಕ್ಕೆ ಮಕ್ಕಳು ಬಲಿ, ಕ್ರಮಕ್ಕೆ ಕೋರಿ ವಿತ್ತ ಸಚಿವೆಗೆ ಶಾಸಕ ಪತ್ರ
ಇಂದು ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ಗಳಿವೆ. ಆನ್ಲೈನ್ ಜೂಟಾಟಗಳಿಗೆ ಮಕ್ಕಳು, ಯುವಪೀಳಿಗೆ ದಾಸರಾಗುತ್ತಿದ್ದಾರೆ. ಇದನ್ನು ತಡೆಯಲು ಕಠಿಣ ಕಮ್ರ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಶಾಸಕ ಸುರೇಶ್ ಕುಮಾರ್ ವಿವರಿಸಿದ್ದಾರೆ.
ಅಂತರ್ಜಾಲ, ಮೊಬೈಲ್ ಇಲ್ಲದ ಕಾಲದಲ್ಲಿ ಅನೇಕ ಮಂದಿ ಜೂಜಾಟ ದ ಜಾಲಕ್ಕೆ ಸಿಲುಕಿ ಹಣ, ಮನೆ, ಆಸ್ತಿ ಪಾಸ್ತಿಗಳೆಲ್ಲ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿ ಸಾಲದ ಸುಳಿಗೆ ಸಿಲುಕಿ ಜೀವ ಬಿಟ್ಟಿದ್ದಾರೆ. ಇದರಿಂದ ಅವರ ಹೆಂಡತಿ ಮಕ್ಕಳು ಬೀದಿಗೆ ಬೀದ್ದಿದ್ದರು.
Breaking: ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಮೊಬೈಲ್ ಬ್ಯಾನ್!
ನಿತ್ಯ ಹೊಸ ಹೊಸ ಜೂಜಾಟದ ವೆಬ್ಸೈಟ್ ಪರಿಚಯ
ಆದರೆ ಇಂದು ಕಾಲ ಬದಲಾಗಿದೆ. ಜೂಜಾಟ ಆಡುವ ವಿಧಾನವು ಬದಲಾಗಿದೆ. ದಿನೇ ದಿನೆ ಆನ್ಲೈನ್ ಜೂಜಾಟವು ಒಂದು ಚಟವಾಗಿ ಯುವಪೀಳಿಗೆಯನ್ನು ಆವರಿಸಿಕೊಳ್ಳುತ್ತಿದೆ. ತಂತ್ರಜ್ಞಾನ, ಅಂತರ್ಜಾಲದ ಯುಗದಲ್ಲಿ ಇಂದು ನಿತ್ಯವು ಒಂದೊಂದು ಹೊಸ ಹೊಸ ಆನ್ಲೈನ್ ಜೂಜಾಟದ ಮೊಬೈಲ್ ಆಪ್ಗಳು, ವೆಬ್ಸೈಟ್ಗಳು ಪರಿಚಯವಾಗುತ್ತಿವೆ. ಅದಕ್ಕೆಂದೇ ಜಾಹೀರಾತುಗಳನ್ನು ವಿಧವಿಧವಾಗಿ ಪ್ರಕಟಿಸಿ ಮಕ್ಕಳನ್ನು ಸೆಳೆಯಲಾಗುತ್ತಿದೆ. ಅವರ ಬಣ್ಣದ ಮಾತುಗಳಿಗೆ ಯುವಪೀಳಿಗೆ ಮರಳಾಗುತ್ತಿದ್ದಾರೆ. ಇದರಿಂದ ಅವರ ಉಜ್ವಲ ಭವಿಷ್ಯಕ್ಕೆ ತೊಂದರೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಚೋದನೆ: ಜೂಜಾಡಿ ಹಣ ಕಳೆದುಕೊಳ್ಳುತ್ತಿರುವ ಜನ
ಕೈಯಲ್ಲಿನ ಮೊಬೈಲ್ ಅನ್ನು ಅನ್ಲಾಕ್ ಮಾಡಿದರೆ ಸಾಕು ರಾಶಿಗಟ್ಟಲೇ ನೋಟಿಫಿಕೇಷನ್, ಜಾಹೀರಾತುಗಳು ಕಂಡು ಬರುತ್ತವೆ. ಆಟ ಆಡಿ ದುಡ್ಡು ಗೆಲ್ಲಿ, ಅಲ್ಲಿ ಇಷ್ಟು ಹಣ ಹಾಕಿ ಗೆಲ್ಲಿ ಎನ್ನುತ್ತಾರೆ. ಮೊದಲಿಗೆ ಒಂದು ಆಟ ಅಂತ ಶುರುಮಾಡಿ ಕೊನೆಗೆ ಬ್ಯಾಂಕ್ ಖಾತೆಯಲ್ಲಿನ ಎಲ್ಲ ದುಡ್ಡೆಲ್ಲ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೇ ನನ್ನ ಸ್ನೇಹಿತರು ಹಾಗೂ ಸಂಬಂಧಿಕರ ಮೊಬೈಲ್ಗಳಿಗೆ ಕಳೆದ ಕೆಲವು ದಿನಗಳಿಂದ ಆನ್ಲೈನ್ ರಮ್ಮಿ ಗೇಮ್ ಆಡಿ ಎಂದು ಸಂದೇಶ ಬರುತ್ತಲೇ ಇವೆ. ಸಂದೇಶದ ಮೂಲಕ ಲಿಂಕ್ ನೀಡಿ ಅದನ್ನು ಓಪನ್ ಮಾಡಿ ಆನ್ಲೈನ್ ರಮ್ಮಿ ಆಡುವುದಕ್ಕೆ ಪ್ರಚೋದನೆ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದ್ದಾರೆ.
ಮೊಬೈಲ್ಗಳಿಗೆ ನಿತ್ಯ ಜೂಜಾಟದ ಸಂದೇಶ
ಆನ್ಲೈನ್ ಮೂಲಕವೇ ಹಣ ಬೆಟ್ ಮಾಡಿ ಗೆಲ್ಲಿ. ಮನೆಯಲ್ಲಿಯೇ ಹಣ ಗಳಿಸಿ ಎಂದು ಮೆಸೇಜ್ ಬರುತ್ತಿವೆ. ಅದರಿಂದ ಸಾಕಾಗಿ ನಂಬರ್ಗಳನ್ನು ಬ್ಲಾಕ್ ಮಾಡಿದರೂ ಪ್ರಯೋಜನ ಆಗುತ್ತಿಲ್ಲ. ಬೇರೆ ನಂಬರ್ಗಳಿಂದ ಮತ್ತದೇ ಸಂದೇಶಗಳು ಬರುತ್ತಲೆ ಇರುತ್ತವೆ. ಮದ್ಯ-ಸಿಗರೇಟ್ ಚಟದಂತೆ ಆನ್ಲೈನ್ ರಮ್ಮಿ ಕೂಡ ಒಂದು ಚಟವಾಗಿಬಿಟ್ಟಿದೆ. ಮದ್ಯ, ಸಿಗರೇಟ್ ವ್ಯಸನಿಗಳಾಗದಂತೆ ಸರ್ಕಾರವೇ ಹಲವಾರು ಕಾರ್ಯಕ್ರಮ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಶಾಲಾ-ಕಾಲೇಜು ಸುತ್ತ ಮುತ್ತ ಮದ್ಯ ಹಾಗೂ ಸಿಗರೇಟ್ ಮಾರುವಂತಿಲ್ಲ ಎಂದು ತಿಳಿಸಿದೆ.
ಜೂಜಾಟ ಜಾಹೀರಾತು ನಿಲ್ಲಬೇಕು
ಇಂತದ್ದೇ ಕಠಿಣ ಕ್ರಮಗಳು ಆನ್ಲೈನ್ ರಮ್ಮಿಯಲ್ಲೂ ಬರಬೇಕು. ಆನ್ಲೈನ್ ಜೂಜಾಟದ ಜಾಹೀರಾತುಗಳನ್ನು ಕೂಡಲೇ ನಿಲ್ಲಿಸಬೇಕು. ಇಂತಹ ಆನ್ಲೈನ್ ಗೇಮ್ಗಳಿಂದಲೇ ರಾಜ್ಯದ ಅನೇಕ ಕಡೆಗಳಲ್ಲಿ ಸಾವಾಗುತ್ತಿವೆ. ಆದ್ದರಿಂದ ಜಾಹೀರಾತು ನೀಡಿ ಪ್ರಚೋದಿಸುವುದು, ಮಾರ್ಕೆಟಿಂಗ್ ಮಾಡುವುದು, ಪದೇ ಪದೆ ಮೊಬೈಲ್ಗಳಿಗೆ ಸಂದೇಶ ನೀಡುವುದನ್ನು ನಿಷೇಧಿಸಬೇಕು. ಯುವಪೀಳಿಗೆಯನ್ನು ಉಳಿಸಬೇಕು ಎಂದು ಶಾಸಕರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.