ವಾದ್ರಾ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹರಿಹಾಯ್ದ ಮಿಸ್ತ್ರಿ
ಲಕ್ನೋ, ನ. 8: ಕಾಂಗ್ರೆಸ್ ವರಿಷ್ಠೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರ ಮೇಲಿರುವ ಭೂ ಅವ್ಯವಹಾರ ಆರೋಪ ಕುರಿತು ಪ್ರಶ್ನಿಸಿದ ಪತ್ರಕರ್ತರ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಹರಿಹಾಯ್ದಿದ್ದಾರೆ.
ಉತ್ತರ ಪ್ರದೇಶದ ವಿವಿಧ ಜಿಲ್ಲಾ ಮುಖಂಡರ ಸಭೆ ನಡೆಸುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದ ಮಿಸ್ತ್ರಿ ರಾಬರ್ಟ್ ವಾದ್ರಾ ಕುರಿತು ಪ್ರಶ್ನಿಸುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು. ಅಲ್ಲದೆ, ಮಾಧ್ಯಮಗಳು ಎನ್ಡಿಎ ಸರ್ಕಾರದ ಪರ ಪಕ್ಷಪಾತ ತೋರುತ್ತಿವೆ ಎಂದು ಆರೋಪಿಸಿದರು.

ರಾಬರ್ಟ್ ವಾದ್ರಾ ಅವರನ್ನು ಕಾರಣವಿಲ್ಲದೆ ಗುರಿ ಮಾಡಲಾಗುತ್ತಿದೆ. ಗುಜರಾತ್ನಲ್ಲಿ ನಡೆದ ಭೂ ಅವ್ಯವಹಾರದ ಕುರಿತು ಪತ್ರಕರ್ತರು ಪ್ರಶ್ನಿಸುತ್ತಿಲ್ಲ. ಆದರೆ, ರಾಬರ್ಟ್ ವಾದ್ರಾ ಕುರಿತು ಮಾತ್ರ ಆರೋಪಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಎದುರು ಚುನಾವಣೆಗೆ ನಿಂತು ಹೀನಾಯ ಸೋಲನುಭವಿಸಿರುವ ಮಧುಸೂದನ ಮಿಸ್ತ್ರಿ, ಅವರ ಹೆಸರನ್ನು ನನ್ನ ಎದುರು ಹೇಳಬೇಡಿ. ಅವರ ಹೆಸರು ಕೇಳಿದರೆ ನನ್ನ ರಕ್ತ ಕುದಿಯುತ್ತದೆ ಎಂದು ಸಿಟ್ಟಿಗೆದ್ದರು.
ಪತ್ರಕರ್ತರು ಮತ್ತೆ ರಾಬರ್ಟ್ ವಾದ್ರಾ ಕುರಿತು ಕೇಳುತ್ತಿದ್ದಂತೆ ಮಧುಸೂದನ ಮಿಸ್ತ್ರಿ ಅವರು ಪತ್ರಿಕಾಗೋಷ್ಠಿಯನ್ನು ಅಲ್ಲಿಯೇ ಮೊಟಕುಗೊಳಿಸಿದರು.












Click it and Unblock the Notifications