ರಾಜಭವನ ಲೇಡೀಸ್ ಕ್ಲಬ್ ಮಾಡಿದ ಆರೋಪ: ಮೇಘಾಲಯ ರಾಜ್ಯಪಾಲ ರಾಜಿನಾಮೆ
ಶಿಲ್ಲಾಂಗ್ ನಲ್ಲಿರುವ ರಾಜಭವನಕ್ಕೆ ಸಂಬಂಧಪಟ್ಟ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿಯಿಂದ ಪತ್ರ. ರಾಜ್ಯಪಾಲರನ್ನು ವಜಾಗೊಳಿಸುವಂತೆ ಆಗ್ರಹ.
ನವದೆಹಲಿ, ಜನವರಿ 26: ರಾಜಭವನವನ್ನು ಲೇಡಿಸ್ ಕ್ಲಬ್ ಆಗಿಸಿರುವ ಆರೋಪ ಹೊತ್ತಿರುವ ಮೇಘಾಲಯದ ರಾಜ್ಯಪಾಲ ವಿ.ಷಣ್ಮುಗನಾಥನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
2015ರಲ್ಲಿ ಎನ್ ಡಿಎ ಸರ್ಕಾರವು ಷಣ್ಮುಗನಾಥನ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಸಿಬ್ಬಂದಿಗೆ ಕಿರುಕುಳ ಹಾಗೂ ರಾಜಭವನದ ದುರುಪಯೋಗದ ಆರೋಪಗಳು ಷಣ್ಮುಗನಾಥನ್ ಮೇಲಿತ್ತು. ಈ ಬಗ್ಗೆ ರಾಜಭವನದ 100ಕ್ಕೂ ಹೆಚ್ಚು ಸಿಬ್ಬಂದಿ ಕೇಂದ್ರಕ್ಕೆ ದೂರು ನೀಡಿದ್ದರು.
ಈ ದೂರು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದ್ದರಿಂದ ಅವರು ರಾಜ್ಯಪಾಲರ ಹುದ್ದೆ ತೊರೆದಿದ್ದಾರೆಂದು ಮೂಲಗಳು ತಿಳಿಸಿವೆ.
ಸಿಬ್ಬಂದಿಯಿಂದ ಕೇಂದ್ರಕ್ಕೆ ದೂರು
ಮೇಘಾಲಯದ ರಾಜ್ಯಪಾಲರಾಗಿರುವ ವಿ. ಷಣ್ಮುಗನಾಥನ್ ಅವರು ತಾವು ವಾಸವಾಗಿರುವ ರಾಜಭವನದ ಘನತೆಗೆ ಮಸಿ ಬಳಿಯುವ ಕೆಲಸಗಳಲ್ಲಿ ನಿರತರಾಗಿದ್ದಾರೆಂದು ಅಲ್ಲಿನ ರಾಜಭವನದ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಪತ್ರದ ಮುಖೇನ ಕೇಂದ್ರ ಸರ್ಕಾರವನ್ನು ಕೋರಿದ್ದರು.
ಸುದೀರ್ಘವಾಗಿರುವ ಆ ಪತ್ರದಲ್ಲಿ, ಷಣ್ಮುಗನಾಥನ್ ಅವರು ರಾಜಭವನಕ್ಕೆ ಕಾಲಿಟ್ಟಾಗಿನಿಂದಲೂ ಅಲ್ಲಿನ ಸಿಬ್ಬಂದಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ತನ್ನದೇ ಆದ ಪ್ರತಿಷ್ಠೆಯನ್ನು ಹೊಂದಿರುವ ರಾಜಭವನವನ್ನು ಲೇಡೀಸ್ ಕ್ಲಬ್ ಆಗಿ ಮಾಡಿದ್ದಾರೆಂದು ದೂರಲಾಗಿದೆ. ಅಲ್ಲದೆ, ಅವರನ್ನು ರಾಜ್ಯಪಾಲ ಸ್ಥಾನದಿಂದ ಕಿತ್ತೊಗೆಯುವಂತೆಯೂ ಮನವಿ ಮಾಡಿದ್ದರು.

ಪತ್ರವನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೇ ಬರೆಯಲಾಗಿದ್ದು, ಕೇಂದ್ರ ಗೃಹ ಸಚಿವರು ಹಾಗೂ ಮೇಘಾಲಯದ ಮುಖ್ಯಮಂತ್ರಿ ಕಚೇರಿಗಳಿಗೂ ಅದರ ಪ್ರತಿಯನ್ನು ರವಾನಿಸಲಾಗಿದೆ.
ಪತ್ರದಲ್ಲಿರುವ ಪ್ರಮುಖ ಅಂಶಗಳು:
ರಾಜಭವನದಲ್ಲಿ ಸೇವೆಯಲ್ಲಿದ್ದ ಪುರುಷ ಸಿಬ್ಬಂದಿಗಳನ್ನು ಎತ್ತಂಗಡಿ ಮಾಡಿ ತಮ್ಮ ಕಚೇರಿಯಲ್ಲಿ ಸೇವೆ ನಿಯೋಜಿಸಲಾಗಿದೆ. ಅವರ ಕಿರುಕುಳಕ್ಕೆ ನೊಂದಿದ್ದ ಅಧಿಕಾರಿಯೊಬ್ಬರು ಕಳೆದ ವರ್ಷ ನವೆಂಬರ್ 3ರಂದು ಕಚೇರಿಯಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಮ್ಮ ದೈನಂದಿನ ಕಚೇರಿ, ವೈಯಕ್ತಿಕ ಕೆಲಸಕ್ಕಾಗಿ ರಾಜ್ಯಪಾಲರು ಇಬ್ಬರು ಮಹಿಳಾ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಒಬ್ಬ ಅಡುಗೆಯವಳು ಹಾಗೂ ಒಬ್ಬ ಶುಶ್ರೂಷಕಿಯನ್ನು ನೇಮಿಸಿಕೊಂಡಿದ್ದಾರೆ. ಇವರೆಲ್ಲರಿಗೂ ರಾಜಭವನದಲ್ಲಿ ರಾತ್ರಿ ವೇಳೆಯೇ ಕೆಲಸಕ್ಕಿರುತ್ತಾರೆ. ಇದಲ್ಲದೆ, ರಾಜಭವನಕ್ಕೆ ಅವರ ಆಯ್ಕೆಯ ಮಹಿಳಾ ಸಿಬ್ಬಂದಿಗಷ್ಟೇ ಪ್ರವೇಶವಿದೆ ಎಂದೂ ಪತ್ರದಲ್ಲಿ ದೂರಲಾಗಿತ್ತು.
ವಿವಿಧ ಸಂಘನೆಗಳಿಂದ ಪ್ರತಿಭಟನೆ:
ಅಂದಹಾಗೆ, ಈ ಪತ್ರದ ವಿಚಾರ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನ ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಇದು ಹಲವಾರು ಪ್ರತಿಭಟನೆಗಳೂ ನಡೆದಿದ್ದು, ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ಸುಧಾರಿಸಬೇಕೆಂದು ಪ್ರತಿಭಟನೆ ನಡೆಸಿರುವ ಕೆಲವಾರು ಸಂಘಟನೆಗಳು ಕೇಂದ್ರ ಸರ್ಕಾರವನ್ನು ಪತ್ರದ ಮುಖೇನ ಕೋರಿವೆ.












Click it and Unblock the Notifications