ಮೇಘಾಲಯದಲ್ಲಿ 17ರ ಪೈಕಿ 12 ಕಾಂಗ್ರೆಸ್ ಶಾಸಕರು ಟಿಎಂಸಿ ಸೇರ್ಪಡೆ
ನವದೆಹಲಿ, ನವೆಂಬರ್ 25: ಮೇಘಾಲಯದ ಕಾಂಗ್ರೆಸ್ಸಿನಲ್ಲಿ ರಾಜಕೀಯ ದಂಗೆ ಸೃಷ್ಟಿಯಾಗಿದೆ. ಬುಧವಾರ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ ರಾಜ್ಯದ 17 ಕಾಂಗ್ರೆಸ್ ಶಾಸಕರ ಪೈಕಿ 12 ಶಾಸಕರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಕುರಿತು ಮೇಘಾಲಯ ಶಾಸಕರು ಈಗಾಗಲೇ ವಿಧಾನಸಭಾ ಸ್ಪೀಕರ್ ಮೆತ್ಬಾ ಲಿಂಗ್ಡೋರಿಗೆ ಪತ್ರ ಬರೆದಿದ್ದಾರೆ.
ಮೇಘಾಲಯದಲ್ಲಿ ಒಟ್ಟು 60 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, 12 ಕಾಂಗ್ರೆಸ್ ಶಾಸಕರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಟಿಎಂಸಿಯು ರಾಜ್ಯದ ವಿರೋಧ ಪಕ್ಷವಾಗಿ ಹೊರ ಹೊಮ್ಮಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ದೆಹಲಿ ಪ್ರವಾಸದಲ್ಲಿ ಇರುವಾಗಲೇ ಇಂಥದೊಂದು ರಾಜಕೀಯ ಬೆಳವಣಿಗೆ ನಡೆದಿದೆ. ಕಳೆದ ಎರಡು ತಿಂಗಳಿನಿಂದ ತೃಣಮೂಲ ಕಾಂಗ್ರೆಸ್ ಪಕ್ಷವು ವಿಸ್ತರಣಾವಾದದ ನೀತಿ ಅನುಸರಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಬೆಲೆ ತೆರಬೇಕಾಗಿದೆ.
ತ್ರಿಪುರಾ ಹಿಂಸಾಚಾರ, ಬಿಎಸ್ಎಫ್ ಬಗ್ಗೆ ಮೋದಿಯೊಂದಿಗೆ ಚರ್ಚಿಸಿದ ಮಮತಾ ಬ್ಯಾನರ್ಜಿ
ಪ್ರತಿಬಾರಿ ದೆಹಲಿಗೆ ತೆರಳಿದ ವೇಳೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ದರು. ಕಾಂಗ್ರೆಸ್ ಜೊತೆಗೆ ಸೌಹಾರ್ದ ಸಂಬಂಧ ಹಂಚಿಕೊಳ್ಳಲು ಹೆಸರುವಾಸಿ ಆಗಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಾರಿ ಅವರನ್ನು ಭೇಟಿ ಮಾಡದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸೋನಿಯಾ
ಗಾಂಧಿಯವರನ್ನು
ಏಕೆ
ಭೇಟಿ
ಆಗಬೇಕು?:
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರನ್ನು ಏಕೆ ಭೇಟಿಯಾಗಲಿಲ್ಲ ಎಂಬ ಬಗ್ಗೆ ಪ್ರಶ್ನಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗರಂ ಆಗಿ ಉತ್ತರಿಸಿದರು. ಸೋನಿಯಾ ಗಾಂಧಿಯವರ ಭೇಟಿಗೆ ಯಾವುದೇ ಅಪಾಯಿಂಟ್ಮೆಂಟ್ ಕೇಳಿರಲಿಲ್ಲ, ಏಕೆಂದರೆ ಅವರು ಪಂಜಾಬ್ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬ್ಯಾನರ್ಜಿ ಹೇಳಿದರು. ಅಲ್ಲದೇ, "ಪ್ರತಿ ಬಾರಿ ಸೋನಿಯಾರನ್ನು ಏಕೆ ಭೇಟಿಯಾಗಬೇಕು? ಇದು ಸಾಂವಿಧಾನಿಕವಾಗಿ ಕಡ್ಡಾಯವಾಗಿಲ್ಲ" ಎಂದು ಹೇಳಿದರು.
ತ್ರಿಪುರಾ ಮತ್ತು ಗೋವಾದಲ್ಲಿ ಟಿಎಂಸಿ ಛಾಪು:
ಮುಂಬರುವ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ತ್ರಿಪುರಾ ಮತ್ತು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ತ್ರಿಪುರಾದಲ್ಲಿ ನಾಳೆ ನಡೆಯಲಿರುವ ನಾಗರಿಕ ಸಂಸ್ಥೆಗಳ ಚುನಾವಣೆಗೂ ಮುನ್ನ ಪಕ್ಷವು ರಾಜ್ಯದ ಆಡಳಿತಾರೂಢ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆ. ಗೋವಾದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಲುಯಿಜಿನ್ಹೋ ಫಲೈರೊ ಜೊತೆ ಚರ್ಚೆ ನಡೆದಿದೆ.
ಟಿಎಂಸಿ ವಿಸ್ತರಣಾವಾದ ನೀತಿ:
ಬುಧವಾರ ಪಂಜಾಬ್ ಮತ್ತು ಹರಿಯಾಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಂತಾ ರಾಜಕೀಯ ಬೆಳವಣಿಗೆ ನಡೆಯಿತು. ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಜೊತೆಗೆ ರಾಹುಲ್ ಗಾಂಧಿ ಮಾಜಿ ಸಹಾಯಕ ಅಶೋಕ್ ತನ್ವಾರ್, ಮತ್ತು ಜನತಾ ದಳ ಯುನೈಟೆಡ್(ಜೆಡಿಯು) ಪಕ್ಷದ ಮಾಜಿ ರಾಜ್ಯಸಭಾ ಸಂಸದ ಪವನ್ ವರ್ಮಾ ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಜೊತೆಗೆ ಮನಸ್ತಾಪವನ್ನು ಹೊಂದಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದವರಲ್ಲಿ ದಿವಂಗತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಮತ್ತು ಸಿಲ್ಚಾರ್ನ ಮಾಜಿ ಕಾಂಗ್ರೆಸ್ ಸಂಸದೆ ಹಾಗೂ ದಿವಂಗತ ಕಾಂಗ್ರೆಸ್ ಮುಖಂಡ ಸಂತೋಷ್ ಮೋಹನ್ ದೇವ್ ಅವರ ಪುತ್ರಿ ಸುಶ್ಮಿತಾ ದೇವ್ ಸೇರಿದ್ದಾರೆ.
ಬಿಜೆಪಿಗೆ ಸೋಲುಣಿಸಲು ಟಿಎಂಸಿ ಸನ್ನದ್ಧ:
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿದ ತೃಣಮೂಲ ಕಾಂಗ್ರೆಸ್ ಪಕ್ಷವು 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮುವುದಕ್ಕೆ ಕಾರ್ಯತಂತ್ರ ರೂಪಿಸುತ್ತಿದೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಇತರೆ ಪಕ್ಷಗಳಿಗೆ ಸಹಾಯ ಮಾಡುವುದಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.