ಮಾಯಾವತಿ-ಸೋನಿಯಾ ಡಿಚ್ಚಿ ಚಿತ್ರಕ್ಕೆ ನೂರಾರಿದೆ ಅರ್ಥ!
ನವದೆಹಲಿ, ಮೇ 26: ಎಚ್ ಡಿ ಕುಮಾರಸ್ವಾಮಿ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಾಕಷ್ಟು ಸೆಳೆದ ಚಿತ್ರ ಯಾವುದು ಎಂದರೆ ಮಾಯಾವತಿ-ಸೋನಿಯಾ ಗಾಂಧಿ ಡಿಚ್ಚಿ ಚಿತ್ರವೇ ಇರಬೇಕು!
ಉಭಯ ನಾಯಕರಲ್ಲಿ ಪ್ರೀತಿಯ ಡಿಚ್ಚಿಕೊಡುವ ಮಟ್ಟಿನ ಆತ್ಮೀಯತೆ ಯಾವಾಗ ಮೊಳೆಯಿತೋ ಗೊತ್ತಿಲ್ಲ. ಆದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದು ದುಬಾರಿ ಎಂಬುದನ್ನು ಮನಗಂಡ ಕಾಂಗ್ರೆಸ್ ಚಿಕ್ಕ-ಪುಟ್ಟ ಪ್ರಾದೇಶಿಕ ಪಕ್ಷಗಳೆಲ್ಲದರ ಜೊತೆ ಮೈತ್ರಿ ಮಾಡಿಕೊಳ್ಳುವ ಇರಾದೆ ಹೊಂದಿದೆಯಾ? ಆ ಚಿತ್ರವನ್ನು ನೋಡಿದರೆ ಹಾಗನ್ನಿಸುತ್ತದೆ!
ಇವೆಲ್ಲದರೊಟ್ಟಿಗೆ ಇಂದು ನವದೆಹಲಿಯಲ್ಲಿ ನಡೆಯಲಿರುವ ಬಿಎಸ್ಪಿ ಶಾಸಕಾಂಗ ಸಭೆಯಲ್ಲಿ ಬಿಎಸ್ಫಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಯಾವತಿಯವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಒಂದೇ ಒಂದು ಲೋಕಸಭಾ ಕ್ಷೇತ್ರವನ್ನೂ ಗೆಲ್ಲದ ಬಿಎಸ್ಪಿ ಇಂಥ ಸಾಹಸಕ್ಕೆ ಕೈಹಾಕಿದೆ!. ಮಾಯಾವತಿ ಅವರು ಸಂಸದರಾಗಿದ್ದರು ರಾಜ್ಯಸಭೆಯಿಂದ ಆಯ್ಕೆಯಾಗಿದ್ದಾರೆ. ಆದರೆ ನೇರವಾಗಿ ಜನರಿಂದ ಆಯ್ಕೆಯಾದ ಬಿಎಸ್ಪಿಯ ಒಬ್ಬನೇ ಒಬ್ಬ ಸಂಸದನೂ ಇಲ್ಲವಾದರೂ ಪ್ರಧಾನಿ ಅಭ್ಯರ್ಥಿಯನ್ನಾಗಿ ಪಕ್ಷದ ನಾಯಕಿಯನ್ನು ಆರಿಸಲು ಪಕ್ಷ ಮುಂದಾಗಿದೆ.

ಮುಂಬರುವ ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಗಳಲ್ಲಿ ಬಿಎಸ್ಪಿಯು ಕಾಂಗ್ರೆಸ್ ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಉತ್ತರ ಪ್ರದೇಶದಿಂದ ಆಚೆಯೂ ತನ್ನ ಅಸ್ತಿತ್ವನ್ನು ತೋರಿಸಿಕೊಳ್ಳುತ್ತಿರುವ ಬಿಎಸ್ಪಿಗೆ ಬೇರೆ ಪಕ್ಷಗಳ ಬೆಂಬಲವಿಲ್ಲದೆ ಹೋರಾಡುವುದು ಕಷ್ಟ. ಇತ್ತ ಕಾಂಗ್ರೆಸ್ ಈಗಾಗಲೇ ಹಲವು ಚುನಾವಣೆಗಳಲ್ಲಿ ಹೀನಾಯ ಪ್ರದರ್ಶನ ತೋರಿರುವುದರಿಂದ ಮೈತ್ರ ಅದಕ್ಕೂ ಅನಿವಾರ್ಯವಾಗಿದೆ.












Click it and Unblock the Notifications