ಕ್ರಿಸ್ಮಸ್ ಹಬ್ಬದಂದು ಕ್ರೈಸ್ತ ಮಿಷನರಿಗಳಿಗೆ ಸಡ್ಡು ನೀಡಲು RSS ಸಜ್ಜು
ನವದೆಹಲಿ, ಡಿ 15: ಕ್ರೈಸ್ತ ಮಿಷನರಿಗಳು ಸದ್ದಿಲ್ಲದೇ ನಡೆಸುತ್ತಿರುವ ಮತಾಂತರಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಡ್ಡು ನೀಡಲು ಸಜ್ಜಾಗಿದೆ. ಅದೂ ಡಿಸೆಂಬರ್ 25 ಕ್ರಿಸ್ಮಸ್ ದಿನದಂದು.
ಅಂದು ಭಾರೀ ಮತಾಂತರಕ್ಕೆ RSS ಸಹ ಸಂಸ್ಥೆ ಧರ್ಮ ಜಾಗರಣ ಸಮಿತಿ ಪೂರ್ವ ತಯಾರಿ ನಡೆಸಿಕೊಂಡಿದೆ ಎಂದು ಫಸ್ಟ್ ಪೋಸ್ಟ್ ಅಂತರ್ಜಾಲ ವರದಿ ಮಾಡಿದೆ. (ಗೋಡ್ಸೆ ನೆಹರೂ ಹತ್ಯೆ ಮಾಡಬೇಕಿತ್ತು)
ಲೋಕಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಕ್ರಿಸ್ಮಸ್ ಹಬ್ಬಕ್ಕೆ ಮುನ್ನ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲು ಧರ್ಮ ಜಾಗರಣ ಸಮಿತಿ ಮುಂದಾಗಿದೆ.

RSS ಸಹ ಸಂಸ್ಥೆಯಾಗಿರುವ 'ಧರ್ಮ ಜಾಗರಣ ಸಮಿತಿ' ಕ್ರಿಸ್ಮಸ್ ಹಬ್ಬದ ದಿನದಂದು ಮೂಲ ಹಿಂದೂ ಧರ್ಮೀಯರಾಗಿದ್ದು ಈಗ ಬೇರೆ ಧರ್ಮದಲ್ಲಿ ಗುರುತಿಸಿ ಕೊಂಡಿರುವ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದವರನ್ನು 'ಘರ್ ವಾಪಸಿ' ಕಾರ್ಯಕ್ರಮದಡಿ ವಾಪಸ್ ಹಿಂದೂ ಧರ್ಮಕ್ಕೆ ಕರೆತರುವ ಭಾರೀ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮುಸ್ಲಿಂರ ಮತಾಂತರಕ್ಕೆ ಐದು ಮತ್ತು ಕ್ರಿಶ್ಚಿಯನ್ನರ ಮತಾಂತರಕ್ಕೆ ಎರಡು ಲಕ್ಷ ಖರ್ಚಾಗುತ್ತದೆ. ಹಿಂದೂ ಧರ್ಮದ ಈ ಪವಿತ್ರ ಕೆಲಸಕ್ಕೆ ದೇಣಿಗೆ ನೀಡುವಂತೆ ಕೋರುವ ಕರಪತ್ರಗಳು ಧರ್ಮ ಜಾಗರಣ ಸಮಿತಿಯ ಹೆಸರಿನಲ್ಲಿ ಮುದ್ರಿತವಾಗಿದೆ.
ಸಮಿತಿಯ ಪಶ್ಚಿಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉತ್ತರಪ್ರದೇಶದ ಹಲವು ನಗರಗಳಲ್ಲಿ ಪ್ರಮುಖವಾಗಿ ಆಲಿಗಢದಲ್ಲಿ ಈ ಕರಪತ್ರಗಳನ್ನು ಸ್ವಯಂಸೇವಕರು ಹಂಚುತ್ತಿದ್ದಾರೆ. ಜನರನ್ನು ಪರಿವರ್ತಿಸುವ ಪವಿತ್ರವಾದ ಕೆಲಸವಿದು ಎಂದು ಸಮಿತಿ ತನ್ನ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದೆ.
ಅಂದಾಜು ಒಂದು ಸಾವಿರ ಜನರನ್ನು ಹಿಂದೂ ಧರ್ಮಕ್ಕೆ ಪರಿವರ್ತಿಸುವ ಕೆಲಸಕ್ಕೆ RSS ಮಾಸಿಕ ಐವತ್ತು ಲಕ್ಷ ರೂಪಾಯಿಗಳನ್ನು ವ್ಯಯಿಸುತ್ತಿದೆ ಎಂದು ಸಂಘಟನೆಯ ಪ್ರಾಂತೀಯ ಮುಖ್ಯಸ್ಥ ರಾಜೇಶ್ವರ್ ಸಿಂಗ್ ಹೇಳಿದ್ದಾರೆ. (ಬಿಜೆಪಿ ಜೊತೆ ಹಳಸಿದ ಸಂಬಂಧ ಆರ್ಎಸ್ಎಸ್ ವಿಕೆಟ್ ಪತನ)
2003ರಿಂದ ಇದುವರೆಗೆ ಆಗ್ರಾ, ಫತೇಪುರ್ ಸಿಕ್ರಿ, ಮಥುರಾ, ಫಿರೋಜಾಬಾದ್, ಈಟ್ವಾ, ಮೀರಟ್, ಮಣಿಪುರಿ ಭಾಗದ ಸುಮಾರು 2.73 ಲಕ್ಷ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮಕ್ಕೆ ಪರಿವರ್ತನೆ ಮಾಡಲಾಗಿದೆ. ಆರ್ಯ ಸಮಾಜ ಸಂಘಟನೆಯೂ ನಮ್ಮ ಅಭಿಯಾನದ ಜೊತೆ ಕೈಜೋಡಿಸಿದೆ ಎಂದು ಸಿಂಗ್ ಸ್ಪಷ್ಟ ಪಡಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಬರುವ ಜನವರಿ ಹದಿನೆಂಟರಂದು ಲಕ್ನೋದಲ್ಲಿ ಹಿಂದೂ ಪರಿವರ್ತನಾ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಮಧ್ಯೆ, ಈ 'ಘರ್ ವಾಪಸಿ' ಕಾರ್ಯಕ್ರಮದ ರೂವಾರಿ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಗೃಹಬಂಧನಕ್ಕೆ ಒಳಪಡಿಸುವಂತೆ ಸಮಾಜವಾದಿ ಪಕ್ಷ ಆಗ್ರಹಿಸಿದೆ.












Click it and Unblock the Notifications