ಚುನಾವಣಾ ಭವಿಷ್ಯ ನುಡಿದರು ಹಲವರು: ಸತ್ಯವಾಗಿದ್ದು ಇವರದ್ದು ಮಾತ್ರ!
Recommended Video
ಲೋಕಸಭಾ ಚುನಾವಣೆಗೆ ಮುನ್ನ ಹಲವು ಜ್ಯೋತಿಷಿಗಳು, ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ಅದರಲ್ಲಿ ಕೆಲವರ ಭವಿಷ್ಯ ನಿಜವಾಯಿತು, ಇನ್ನಷ್ಟು ಸತ್ಯಕ್ಕೆ ದೂರವಾಯಿತು.
ತುಂಬಾ ಜಿದ್ದಾಜಿದ್ದಿನಿಂದ ಈ ಬಾರಿಯ ಸಾರ್ವತ್ರಿಕ ಚುನಾವಣೆ ನಡೆದಿದ್ದರಿಂದ, ಭವಿಷ್ಯದ ಮೇಲೆ ಜನರ ಆಸಕ್ತಿಗೂ ಬರವಿರಲಿಲ್ಲ ಎನ್ನುವುದು ಸತ್ಯ.
ಕೋಡಿ ಮಠದ ಶ್ರೀಗಳಿಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದ್ದರಿಂದ, ಚುನಾವಣಾ ಫಲಿತಾಂಶದ ಬಗ್ಗೆ ಅವರು ತಮ್ಮ ಒಗಟಿನ ರೂಪದ ಭವಿಷ್ಯವನ್ನು ನುಡಿಯಲಿಲ್ಲ.
ಆದರೆ, ಅವರು ನುಡಿದಿದ್ದ ಒಂದು ಭವಿಷ್ಯ ನಿಜವಾಯಿತು. ರಾಜ್ಯದ 28ಕ್ಷೇತ್ರಗಳ ಪೈಕಿ, ತುಂಬಾ ಕುತೂಹಲ ಮೂಡಿಸಿದ್ದು ಎಚ್ ಎಂ ಟಿ, ಅದರಲ್ಲೂ ಮಂಡ್ಯದಲ್ಲಿ. ಯಾರು ನುಡಿದಿದ್ದ ಭವಿಷ್ಯ ನಿಜವಾಯಿತು/ಸುಳ್ಳಾಯಿತು ಎನ್ನುವುದರ ಒಂದು ಅವಲೋಕನ.

ಕೈಯಲ್ಲಿ ತೆಂಗಿನಕಾಯಿಯನ್ನು ಹಿಡಿದುಕೊಂಡು ನುಡಿದಿದ್ದ ಭವಿಷ್ಯ
ಕೈಯಲ್ಲಿ ತೆಂಗಿನಕಾಯಿಯನ್ನು ಹಿಡಿದುಕೊಂಡು ಅದರ ಚಲನೆಯನ್ನು ಆಧರಿಸಿ ಭವಿಷ್ಯ ನುಡಿಯಲಾಗಿತ್ತು. ದಕ್ಷಿಣಕನ್ನಡ ಮೂಲದ ಎಂ ಕೃಷ್ಣಪ್ರಸಾದ್ ಎನ್ನುವವರು ಲೋಕಸಭಾ ಚುನಾವಣಾ ಭವಿಷ್ಯವನ್ನು ತನ್ನದೇ ಲೆಕ್ಕಾಚಾರದ ಮೂಲಕ ಹೇಳಿದ್ದರು. ಮಂಡ್ಯದಲ್ಲಿ ಪಕ್ಷೇತರ, ತುಮಕೂರಿನಲ್ಲಿ ಬಿಜೆಪಿ, ಕಲಬುರಗಿ, ಬೀದರ್, ದಾವಣಗೆರೆ, ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದಿದ್ದರು. ಒಟ್ಟಾರೆಯಾಗಿ ರಾಜ್ಯದಲ್ಲಿ ಬಿಜೆಪಿ 21, ಕಾಂಗ್ರೆಸ್ ಐದು ಮತ್ತು ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಜಯಿಸುತ್ತದೆ, ಎನ್ಡಿಎ ಮೈತ್ರಿಕೂಟಕ್ಕೆ 306, ಯುಪಿಎ ಮೈತ್ರಿಕೂಟಕ್ಕೆ 140ಸ್ಥಾನ ಸಿಗುತ್ತೆ ಎಂದು ಇವರು ಹೇಳಿದ್ದರು.

ಸುಮಲತಾ ಗೆಲ್ಲುವುದಾದರೆ ಬಲಭಾಗದಿಂದ ಪ್ರಸಾದ ಕೊಡು
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾರು ವಿಜಯಶಾಲಿಯಾಗಲಿದ್ದಾರೆ ಎಂದು ಐತಿಹಾಸಿಕ ದೇವಾಲಯವೊಂದರಲ್ಲಿ ಭವಿಷ್ಯವನ್ನು ಕೇಳಲಾಗಿತ್ತು. ಮಂಡ್ಯದಲ್ಲಿ ಸೋಲು ಗೆಲುವು ಯಾರಿಗೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಸುಮಲತಾ ಗೆಲ್ಲುವುದಾದರೆ ಬಲಭಾಗದಿಂದ ಪ್ರಸಾದ ಕೊಡು ಎಂದು ಅರ್ಚಕರು ಪ್ರಾರ್ಥಿಸಿದಾಗ, ಬಲಭಾಗದಿಂದ ಹೂಬಿದ್ದಿತ್ತು. ಹೊನ್ನಾದೇವಿ ದೇವಾಲಯದಲ್ಲಿ ಈ ಭವಿಷ್ಯವನ್ನು ಕೇಳಲಾಗಿತ್ತು.

ಮೋದಿಯವರು ಮುಂದಿನ ಅವಧಿಗೆ ಪ್ರಧಾನಿಯಾಗಲಿದ್ದಾರಾ ಎನ್ನುವುದರ ಬಗ್ಗೆ ಭವಿಷ್ಯ
ಗಜೇಂದ್ರಗಡದ ಕಾಲಜ್ಞಾನ ಮಠದ ಸ್ವಾಮೀಜಿ, ಮೋದಿಯವರು ಮುಂದಿನ ಅವಧಿಗೆ ಪ್ರಧಾನಿಯಾಗಲಿದ್ದಾರಾ ಎನ್ನುವುದರ ಬಗ್ಗೆ ಭವಿಷ್ಯ ನುಡಿದಿದ್ದರು. ಗದಗ ಜಿಲ್ಲೆ ಗಜೇಂದ್ರಗಡದಲ್ಲಿರುವ ಕಾಲಜ್ಞಾನ ಮಠದ, ಬ್ರಹ್ಮ ಸದ್ಗುರು ಶರಣಬಸವ ಸ್ವಾಮೀಜಿಯವರು ಮೋದಿಯವರ ಬಗ್ಗೆ ಮತ್ತು ದೇಶದ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಸಿದ್ದಾರೂಢ ಮಠದ ಶಂಭುಲಿಂಗಾಶ್ರಮದಲ್ಲಿ ನಡೆದ ಶಂಭುಲಿಂಗಸ್ವಾಮಿಗಳ ಹನ್ನೊಂದನೇ ಪುಣ್ಯಾರಾಧನೆಯಲ್ಲಿ ಭಾಗವಹಿಸಿ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆಂದು ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಮೋದಿ ಅವರು ಈ ದೇಶದ ಮುಂದಿನ ಪ್ರಧಾನಿಯಾಗುವುದಿಲ್ಲ
ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬೀಳಲಿದ್ದು, ನರೇಂದ್ರ ಮೋದಿ ಅವರು ಈ ಬಾರಿ ಪ್ರಧಾನಿಯಾಗುವುದಿಲ್ಲ ಎಂದಿದ್ದ ಜ್ಯೋತಿಷಶಾಸ್ತ್ರದ ಪ್ರೊಫೆಸರ್ ಒಬ್ಬರು ಭವಿಷ್ಯ ನುಡಿದಿದ್ದರು. ಮೇ 19 ರಂದು ಕೊನೆಯ ಹಂತದ ಮತದಾನ ನಡೆದ ದಿನ ಅಪರಾಹ್ನ 4 ಗಂಟೆಗೆ ಅವರು ತಮ್ಮ ಅಭಿಪ್ರಾಯವನ್ನು ಬಿಡುಗಡೆ ಮಾಡಿದ್ದರು. ನರೇಂದ್ರ ಮೋದಿ ಅವರು ಈ ದೇಶದ ಮುಂದಿನ ಪ್ರಧಾನಿಯಾಗುವುದಿಲ್ಲ. ಈ ಬಾರಿ ಸಂಸತ್ತಿನಲ್ಲಿ ಯುಪಿಎ, ಎನ್ ಡಿಎ ಯಾವ ಪಕ್ಷಗಳೂ ಬಹುಮತ ಪಡೆಯುವುದಿಲ್ಲ. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದರು.

ದಸರೀಘಟ್ಟ ಚೌಡೇಶ್ವರಿ ದೇವಿ ದೇಗುಲ
ಮೋದಿ ಪ್ರಧಾನಿಯಾಗ್ತರೋ? ಬೇರೆ ಯಾರದ್ರೂ ಆಗ್ತರೋ? ಹೀಗೆ ದಸರೀಘಟ್ಟ ಚೌಡೇಶ್ವರಿ ದೇವಿ ದೇಗುಲದ ಅರ್ಚಕ ಕೃಷ್ಣೇಗೌಡರು ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಕಳಶ ರೂಪಿಯಾಗಿ ತಾಯಿ ಚೌಡೇಶ್ವರಿ ಭವಿಷ್ಯವನ್ನು ಅಕ್ಷರ ರೂಪದಲ್ಲಿ ಮೂಡಿಸಿದ್ದಳು. ಈ ಬಾರಿ ಕೂಡಾ ಮೋದಿ ಪ್ರಧಾನಿಯಾಗುತ್ತಾರೆ, ಆದರೆ, ಹಾದಿ ಸುಗಮವಾಗಿಲ್ಲ. ಮಿತ್ರಪಕ್ಷದ ನೆರವಿನಿಂದ ಮಾತ್ರ ಪ್ರಧಾನಿಯಾಗಬಹುದು ಎಂದು ಭವಿಷ್ಯ ನುಡಿಯಲಾಗಿತ್ತು.

ಕೋಡಿಶ್ರೀಗಳು, ಯಾದಗಿರಿಯಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರೆಯಲ್ಲಿ ನುಡಿದ ಭವಿಷ್ಯ
ತಾಳೇಗರಿ ಆಧಾರಿತ ಭವಿಷ್ಯ ನುಡಿಯುವ ಕೋಡಿಶ್ರೀಗಳು, ಯಾದಗಿರಿಯಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, "ಪಾಂಡವರು ಮತ್ತು ಕೌರವರು ಬಡಿದಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ" ಎನ್ನುವ ಭವಿಷ್ಯವನ್ನು ನುಡಿದಿದ್ದರು. ರತ್ನಖಚಿತ ಸುವರ್ಣ ಕಿರೀಟ ಎನ್ನುವುದು ಪ್ರಧಾನಮಂತ್ರಿ ಹುದ್ದೆ, ಸ್ಥಿರವಾಗಿರುತ್ತದೆ ಎಂದರೆ, ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿ ಎಂದು ಕೋಡಿಶ್ರೀಗಳ ಭವಿಷ್ಯವನ್ನು ವ್ಯಾಖ್ಯಾನಿಸಲಾಗಿತ್ತು.

ಸೆರಗೊಡ್ಡಿ ಬೇಡಿದವರಿಗೆ ಸಿಹಿ ಆತು.. ಕುಟುಂಬ ಸರಪಳಿ ತುಂಡಾತು..ಕುರ್ಚಿಯ ಕಾಲು ಗಟ್ಟಿ ಆತು
ಸೆರಗೊಡ್ಡಿ ಬೇಡಿದವರಿಗೆ ಸಿಹಿ ಆತು.. ಕುಟುಂಬ ಸರಪಳಿ ತುಂಡಾತು..ಕುರ್ಚಿಯ ಕಾಲು ಗಟ್ಟಿ ಆತು.. ಸಂಸಾರ ಬಂಧ ಕತ್ತಲ ಕೋಣೆಗೆ ಹೋದೀತು..' ಎನ್ನುವ ಒಗಟಿನ ಮೂಲಕ ಕೋಡಿಶ್ರೀಗಳು ಮಂಡ್ಯ ಚುನಾವಣೆಯ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಚುನಾವಣಾ ಪ್ರಚಾರದ ಕೊನೆಯ ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಸೆರಗೊಡ್ಡಿ ಮತಯಾಚನೆ ಮಾಡಿದ್ದರು.

ಹೋಗು... ಚುನಾವಣೆನೂ ಗೆಲ್ತೀಯಾ.. ಮಿನಿಸ್ಟರ್ ಕೂಡಾ ಆಗುತ್ತೀಯಾ
ಕಲ್ಬುರ್ಗಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಮುನ್ನ ಡಾ. ಉಮೇಶ್ ಜಾಧವ್, ಕೋಡಿಶ್ರೀಗಳನ್ನು ಅರಸೀಕರೆ ಮಠದಲ್ಲಿ ಭೇಟಿಯಾಗಿದ್ದರಂತೆ. 'ಹೋಗು... ಚುನಾವಣೆನೂ ಗೆಲ್ತೀಯಾ.. ಮಿನಿಸ್ಟರ್ ಕೂಡಾ ಆಗುತ್ತೀಯಾ' ಎಂದು ಹರಸಿದ್ದರು ಎನ್ನುವ ಸುದ್ದಿ, ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ಹರಿದಾಡುತ್ತಿತ್ತು.












Click it and Unblock the Notifications