ಕೊರೊನಾ ನಿಯಮ ಪಾಲಿಸದಿದ್ದರೆ ಭಾರತ್ ಜೋಡೋ ಯಾತ್ರೆ ನಿಲ್ಲಿಸಿ: ಕೇಂದ್ರ ಆರೋಗ್ಯ ಸಚಿವ
ನವದೆಹಲಿ, ಡಿ. 21: ಚೀನಾದಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿದ್ದಂತೆ ಭಾರತದಲ್ಲಿಯೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದು ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಮೇಲೆ ಪ್ರಭಾವ ಬೀರಲಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ತಮ್ಮ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಳ್ಳಬೇಕು. ಇಲ್ಲದಿದ್ದರೇ ರಾಷ್ಟ್ರೀಯ ಹಿತಾಸಕ್ತಿಯಿಂದ ಅದನ್ನು ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಚೀನಾದಲ್ಲಿ ಕೊರೊನಾ ಉಲ್ಬಣ ಹಿನ್ನೆಲೆ: ದೇಶದಲ್ಲಿ ಮುನ್ನೆಚ್ಚರಿಕೆ ವಹಿಸಲು ತಜ್ಞರ ಜೊತೆ ಆರೋಗ್ಯ ಸಚಿವರ ಸಭೆ
ಚೀನಾದಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳು, ಕೊರೊನಾ ಸಂಬಂಧಿತ ಸಾವುಗಳು ಹೆಚ್ಚಾಗಿದ್ದು, ದೇಶದಲ್ಲಿ ಪರಿಸ್ಥಿತಿಯನ್ನು ಸರಿದೂಗಿಸುವ ಕ್ರಮವಾಗಿ ಆರೋಗ್ಯ ಸಚಿವರು ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ವಿಶ್ವದಾದ್ಯಂತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಲು ರಾಜಸ್ಥಾನದ ಮೂವರು ಬಿಜೆಪಿ ಸಂಸದರು ಆರೋಗ್ಯ ಸಚಿವರಿಗೆ ಪತ್ರ ಬರೆದಿರುವುದನ್ನು ಮನ್ಸುಖ್ ಮಾಂಡವಿಯಾ ಅವರ ಪತ್ರ ಉಲ್ಲೇಖಿಸಿದೆ.
Just in - health minister @mansukhmandviya writes to Rajasthan CM @ashokgehlot51 and @INCIndia Leader @RahulGandhi to follow COVID19 related guidelines for #BharatJodaYatra or suspend it “in the interest of the country.” pic.twitter.com/Hwh2iF0P74
— Nistula Hebbar (@nistula) December 21, 2022
"ಮಾಸ್ಕ್ ಮತ್ತು ಸ್ಯಾನಿಟೈಸರ್ಗಳ ಬಳಕೆ ಸೇರಿದಂತೆ ಕೋವಿಡ್ ಪ್ರೋಟೋಕಾಲ್ಗಳನ್ನು ಪಾದಯಾತ್ರೆಯಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕು. ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಭಾರತ್ ಜೋಡೋನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ನಾನು ರಾಹುಲ್ ಗಾಂಧಿ ಅವರಿಗೆ ವಿನಂತಿಸುತ್ತೇನೆ" ಎಂದು ಸಚಿವರು ಡಿಸೆಂಬರ್ 20 ರ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
"ಈ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶವನ್ನು ಉಳಿಸಲು, ರಾಷ್ಟ್ರೀಯ ಹಿತಾಸಕ್ತಿಯಿಂದ 'ಭಾರತ್ ಜೋಡೋ ಯಾತ್ರೆ'ಯನ್ನು ಸ್ಥಗಿತಗೊಳಿಸುವಂತೆ ನಾನು ವಿನಂತಿಸುತ್ತೇನೆ" ಎಂದು ಸಚಿವರು ಬರೆದಿದ್ದಾರೆ.
ಇನ್ನು, ಪಾದಯಾತ್ರೆಯಲ್ಲಿ ಭಾಗವಹಿಸಿದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದನ್ನು ಮೂವರು ಬಿಜೆಪಿ ಸಂಸದರ ಪತ್ರವನ್ನು ಸಹ ಲಗತ್ತಿಸಿದ್ದಾರೆ.
ಇದಕ್ಕೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಗುಜರಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಚುನಾವಣಾ ಪ್ರಚಾರವನ್ನು ಉಲ್ಲೇಖಿಸಿದ್ದಾರೆ.
'ರಾಹುಲ್ ಗಾಂಧಿ ಅವರಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಯಾತ್ರೆಗೆ ಹೆದರಿದೆ. ಈ ಯಾತ್ರೆಯು ಬಿಜೆಪಿಯನ್ನು ಬೆಚ್ಚಿಬೀಳಿಸಿದೆ. ಗುಜರಾತ್ನಲ್ಲಿ ಮತ ಕೇಳಲು ಮೋದಿಜಿ ಮನೆ ಮನೆಗೆ ಹೋದಾಗ ಮಾಸ್ಕ್ ಧರಿಸಿದ್ದರಾ?. ಆರೋಗ್ಯ ಸಚಿವರು ರಾಹುಲ್ ಗಾಂಧಿಯವರ ಯಾತ್ರೆಯನ್ನು ಇಷ್ಟಪಡದಿರಬಹುದು, ಆದರೆ ಭಾರತದಾದ್ಯಂತದ ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಬುಧವಾರ ಹರಿಯಾಣ ಪ್ರವೇಶಿಸಿದೆ.