ವ್ಯಕ್ತಿಯ ಕೈ ಕತ್ತರಿಸಿ ತೆಗೆದುಕೊಂಡು ಹೋದ ದುಷ್ಕರ್ಮಿಗಳು, ಘಟನೆ ಸಿಸಿಟಿವಿಯಲ್ಲಿ ಸೆರೆ
ಕುರುಕ್ಷೇತ್ರ (ಹರಿಯಾಣ), ಜನವರಿ 10: ಹರಿಯಾಣದ ಕುರುಕ್ಷೇತ್ರದಲ್ಲಿ ನಿನ್ನೆ ವ್ಯಕ್ತಿಯೋರ್ವನ ಕೈಯನ್ನು ಅಪರಿಚಿತರು ಕತ್ತರಿಸಿ ಹಾಕಿದ್ದಾರೆ. ಬಳಿಕ ಆರೋಪಿಗಳು ಕೈ ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಗ್ನು ಎಂದು ಗುರುತಿಸಲಾದ ವ್ಯಕ್ತಿಯನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಕ್ಷೇತ್ರ ಹವೇಲಿಯಲ್ಲಿ ಘಟನೆ ನಡೆದಿದ್ದು, ಘಟನೆಯ ಕುರಿತು ತನಿಖೆ ನಡೆಯುತ್ತಿದೆ.
ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಹತ್ತರಿಂದ ಹನ್ನೆರಡು ಮಂದಿ ಮುಖ ಮುಚ್ಚಿಕೊಂಡು ಕುರುಕ್ಷೇತ್ರ ಹವೇಲಿಗೆ ನುಗ್ಗಿ ಸಂತ್ರಸ್ತ ಜುಗ್ನು ಮೇಲೆ ಹಲ್ಲೆ ನಡೆಸಿ ಆತನ ಕೈಯನ್ನು ಕತ್ತರಿಸಿದ್ದಾರೆ. ಘಟನೆಯ ಹಿಂದಿನ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ' ಎಂದು ಡಿಎಸ್ಪಿ ರಾಮದತ್ ನೈನ್ ಹೇಳಿದ್ದಾರೆ.
ಸಂತ್ರಸ್ತನನ್ನು ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಮತ್ತು ಅದರ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗುವುದು ಮತ್ತು ಸಿಸಿಟಿವಿ ದೃಶ್ಯಗಳನ್ನು ಸಹ ಸ್ಕ್ಯಾನ್ ಮಾಡಲಾಗುವುದು ಎಂದು ಅವರು ಹೇಳಿದರು.
ಸಂತ್ರಸ್ತ ಕುರುಕ್ಷೇತ್ರ ಹವೇಲಿಯ ಹೊರಗೆ ಕುಳಿತಿದ್ದಾಗ 10-12 ಮಂದಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕುರುಕ್ಷೇತ್ರ ಹರಿಯಾಣದಲ್ಲಿ ಬರುವ ಧಾರ್ಮಿಕ ಸ್ಥಳವಾಗಿದೆ. ಕುರುಕ್ಷೇತ್ರ ಪ್ರದೇಶದಲ್ಲಿ ಕೌರವರು ಹಾಗೂ ಪಾಂಡವರು ಕಾದಾಡಿರುವುದು ಮಹಾಭಾರತದ ಪ್ರಮುಖ ಹಾಗೂ ಅಂತಿಮ ಘಟ್ಟದಲ್ಲಿ ಬರುತ್ತದೆ.
ಕುರುಕ್ಷೇತ್ರ ನಗರವು ವಾಯುವ್ಯಕ್ಕೆ ಪಟಿಯಾಲ, ಲುಧಿಯಾನ, ಜಲಂಧರ್, ಅಮೃತಸರ, ಉತ್ತರಕ್ಕೆ ಅಂಬಾಲಾ, ಚಂಡೀಗಢ, ಶಿಮ್ಲಾ, ಈಶಾನ್ಯಕ್ಕೆ ಯಮುನಾ ನಗರ, ಜಗಧ್ರಿ, ಡೆಹ್ರಾಡೂನ್, ಪಶ್ಚಿಮಕ್ಕೆ ಪೆಹೋವಾ, ಚೀಕಾ, ಮಾನ್ಸಾ, ಲಾಡ್ವಾ, ಸಹರಾನ್ಪುರ, ರೂರ್ಕಿಯಿಂದ ಸುತ್ತುವರಿದಿದೆ. ಪೂರ್ವದಲ್ಲಿ ಕೈತಾಲ್, ಜಿಂದ್, ನೈಋತ್ಯಕ್ಕೆ ಹಿಸಾರ್, ದಕ್ಷಿಣಕ್ಕೆ ಕರ್ನಾಲ್, ಪಾಣಿಪತ್, ಸೋನಿಪತ್, ನವದೆಹಲಿ ಮತ್ತು ಆಗ್ನೇಯಕ್ಕೆ ಶಾಮ್ಲಿ, ಮುಜಾಫರ್ನಗರ, ಮೀರತ್ ನಗರಗಳನ್ನು ಸುತ್ತುವರಿದಿದೆ.
2017 ರಲ್ಲಿ, ಸರ್ಕಾರವು ಕುರುಕ್ಷೇತ್ರವನ್ನು ಪವಿತ್ರ ನಗರವೆಂದು ಘೋಷಿಸಿತು ಮತ್ತು ಅದರ ಧಾರ್ಮಿಕ ಪ್ರಾಮುಖ್ಯತೆಯಿಂದಾಗಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಮಾಂಸದ ಮಾರಾಟ, ಸ್ವಾಧೀನ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ.