ಮಣಿಪುರ ಚುನಾವಣಾ ಪೂರ್ವ ಹಿಂಸಾಚಾರ: ಎನ್ಪಿಪಿ ಬೆಂಬಲಿಗರ ಮನೆ ಮೇಲೆ ಗ್ರೆನೇಡ್ ದಾಳಿ
ಇಂಫಾಲ, ಜನವರಿ 20: ಚುನಾವಣೆ ನಡೆಯಲಿರುವ ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಎನ್ಪಿಪಿ ಬೆಂಬಲಿಗರೊಬ್ಬರ ಮನೆಯ ಮೇಲೆ ಗ್ರೆನೇಡ್ ದಾಳಿ ನಡೆದಿದೆ. ಚುನಾವಣಾ ಪೂರ್ವ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಈ ಘಟನೆ ಬುಧವಾರ ತಡರಾತ್ರಿ ಕೆಯ್ರಾವ್ ವಿಧಾನಸಭೆ ಕ್ಷೇತ್ರದಲ್ಲಿ ಇರುವ ಇರಿಲ್ಬಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಪ್ತಿ ಅವಂಗ್ ಲೈಕೈಯಲ್ಲಿರುವ ಕೆ ಲೋಕೆನ್ರ ಮನೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗ್ರೆನೇಡ್ ಸ್ಫೋಟದಲ್ಲಿ, ಲೋಕೆನ್ ಅವರ 27 ವರ್ಷದ ಮಗನ ಬಲಗಾಲಿಗೆ ಗಾಯಗಳಾಗಿವೆ ಎಂದು ಕೂಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ಪೊಲೀಸ್ ಮಹಾನಿರ್ದೇಶಕ ಪಿ ಡೌಂಗೆಲ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಗ್ರೆನೇಡ್ ದಾಳಿ ಯಾರು ನಡೆಸಿದ್ದಾರೆ, ಇದರ ಹಿಂದಿನ ಕಾರಣ ಏನು ಎಂಬ ಬಗ್ಗೆ ಇನ್ನೂ ಕೂಡಾ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತಮಗೆ ಯಾರೊಂದಿಗೂ ದ್ವೇಷವಿಲ್ಲ ಎಂದು ಹೇಳಿರುವ ಲೋಕೇನ್, ಈ ಸಂದರ್ಭದಲ್ಲೇ ನಮ್ಮ ಮನೆಯವರು ಇತ್ತೀಚೆಗೆ ನಮ್ಮ ಕಾಂಪೌಂಡ್ನಲ್ಲಿ ಬಿಜೆಪಿ ಧ್ವಜವನ್ನು ಹಾಕಲು ಬಿಡಲಿಲ್ಲ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಬಿಜೆಪಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
'ಗನ್ ಸಂಸ್ಕೃತಿಯನ್ನು ಖಂಡಿಸಿ' ಫಲಕ ಹಿಡಿದು ಪ್ರತಿಭಟನೆ
ಗನ್ ಸಂಸ್ಕೃತಿಯನ್ನು ಖಂಡಿಸಿ' ಫಲಕ ಹಿಡಿದು ಸ್ಥಳೀಯರು ಈ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು. ಈ ಘಟನೆಯ ಹಿಂದಿರುವವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜನವರಿ 9 ರಂದು ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಭಾರತೀಯ ರಿಸರ್ವ್ ಬೆಟಾಲಿಯನ್ (ಐಆರ್ಬಿ) ಸಿಬ್ಬಂದಿಯೊಂದಿಗೆ ಓರ್ವ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. 60 ಸದಸ್ಯರ ವಿಧಾನಸಭೆ ಕ್ಷೇತ್ರವನ್ನು ಹೊಂದಿರುವ ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಚ ರಾಜ್ಯಗಳಲ್ಲಿ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications