ದೇಶವ್ಯಾಪ್ತಿ ಗೋಹತ್ಯೆ ನಿಷೇಧಕ್ಕೆ ಮನೇಕಾ ಗಾಂಧಿ ಕರೆ
ನವದೆಹಲಿ, ಏ.20: 'ಗೋಹತ್ಯೆ ನಿಷೇಧ ದೇಶದೆಲ್ಲೆಡೆ ಜಾರಿಗೊಳ್ಳಲಿ, ಇದಕ್ಕೆ ಮತೀಯ ಬಣ್ಣ ಬಳಿಯುವುದು ಬೇಡ' ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಕರೆ ನೀಡಿದ್ದಾರೆ.
ಎಷ್ಟೇ ಕಠಿಣ ಕಾನೂನು ಜಾರಿಗೊಳಿಸಿದರೂ ಹಸು, ಎಮ್ಮೆಗಳನ್ನು ಹತ್ಯೆ ಮಾಡುವುದು ನಡೆಯುತ್ತಿದೆ. ದೇಶದಲ್ಲಿ ಶೇ 90ರಷ್ಟು ಗೋಹತ್ಯೆ ಅಕ್ರಮವಾಗಿದೆ. ಕಾನೂನಿನ ಪ್ರಕಾರ ನಿರ್ದಿಷ್ಟ ವಯಸ್ಸಿನ ನಂತರ ಮಾತ್ರ ಗೋವುಗಳನ್ನು ಹತ್ಯೆ ಮಾಡಬೇಕಾಗುತ್ತದೆ. [ಗೋಹತ್ಯೆ ನಿಷೇಧ: ಮೋದಿಗೆ ಅಜಂ ಖಾನ್ ನೀಡಿದ ಸಲಹೆ]
ಅದರೆ, ಹಾಲು ಕೊಡುವ ಹಸು, ಗರ್ಭಿಣಿಯಾಗಿರುವ ಹಸುಗಳನ್ನು ಕೂಡಾ ಹಿಡಿದು ಕೊಲ್ಲಲಾಗುತ್ತಿದೆ. ಇದಕ್ಕೆಲ್ಲ ನಿರ್ಬಂಧ ಹೇರಬೇಕು ಎಂದು ಮನೇಕಾ ಗಾಂಧಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಗೋ ಮಾಂಸವನ್ನು ರಫ್ತು ಮಾಡಲು ಮುಂದಾಗಿರುವ ಸಂಸ್ಥೆಗಳಿಗೆ ಸರಿಯಾದ ಲೈಸನ್ಸ್ ಇರುವುದಿಲ್ಲ. ಇನ್ನೂ ಬಾಳಿ ಬದುಕಬೇಕಾಗಿರುವ ಜೀವಿಗಳನ್ನು ಹಿಡಿದು ಕೊಲ್ಲುವುದು ಎಷ್ಟು ಸರಿ? ದೇಶದಲ್ಲಿ ಕ್ಷೀರಕ್ರಾಂತಿ, ಹಸಿರು ಕ್ರಾಂತಿ ಎಲ್ಲವೂ ಸಾಧ್ಯವಾಗಿದ್ದು ಗೋವುಗಳ ಇರುವಿಕೆಯಿಂದ ಮಾತ್ರ. ಹೀಗಾಗಿ ಬಲಿಷ್ಠ ಗೋವುಗಳಿದ್ದರೆ ಮಾತ್ರ ದೇಶದ ಆರ್ಥಿಕ ಪ್ರಗತಿ ಸಾಧ್ಯ ಎಂದಿದ್ದಾರೆ. [ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ]
ದೇಶದಲ್ಲಿ ಲಭ್ಯವಿರುವ ಹಾಲಿನ ಶೇ 80ರಷ್ಟು ಪ್ರಮಾಣ ಕಲುಷಿತವಾಗಿದೆ ಅಥವಾ ನಕಲಿಯಾಗಿದೆ. ಉತ್ತರ ಪ್ರದೇಶ ಹಾಗೂ ಬಿಹಾರ ಈ ರೀತಿ ನಕಲಿ ಹಾಲು ಮಾರಾಟದಲ್ಲಿ ಮುಂಚೂಣಿಯಲ್ಲಿವೆ. [ಗೋ ಹತ್ಯೆ, ಬಹುಪತ್ನಿತ್ವ, ಮದ್ಯಪಾನ ನಿಷೇಧಿಸಿ]
ಗೋಹತ್ಯೆಗೂ ಧಾರ್ಮಿಕತೆಗೂ ಸಂಬಂಧವಿಲ್ಲ. ಗೋವುಗಳನ್ನು ಕತ್ತರಿಸುವ ಕಟುಕರು ಒಂದು ಜಾತಿಯವರಾದರೆ, ಅದನ್ನು ಸಾಗಿಸುವವರು ಒಂದು ಜಾತಿಯಾಗಿರುತ್ತಾರೆ. ಹಿಂದೂ, ಮುಸ್ಲಿಮ್, ಆಹಾರ ಪದ್ಧತಿ ಎಲ್ಲವನ್ನು ಬದಿಗಿಟ್ಟು ಪ್ರಾಣಿಗಳ ಜೀವನ ಹಾಗೂ ದೇಶದ ಆಹಾರ ವ್ಯವಸ್ಥೆ ಬಗ್ಗೆ ಯೋಚಿಸಬೇಕು ಎಂದು ಮನೇಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. (ಪಿಟಿಐ)












Click it and Unblock the Notifications