300 ಕೊರೊನಾ ರೋಗಿಗಳ ಅಂತ್ಯಸಂಸ್ಕಾರ ನಡೆಸಿದ್ದ ವ್ಯಕ್ತಿ ಸೋಂಕಿಗೆ ಬಲಿ
ಹರಿಯಾಣ, ಮೇ 18: ಕೊರೊನಾದಿಂದ ಸಾವನ್ನಪ್ಪಿದ ಸುಮಾರು ಮುನ್ನೂರು ಮಂದಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಿದ್ದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.
ಹರಿಯಾಣದ ಹಿಸಾರ್ ನಗರ ಪಾಲಿಕೆ ಅಧಿಕಾರಿ ಆಗಿದ್ದ ಪ್ರವೀಣ್ ಕುಮಾರ್ (43) ಮಂಗಳವಾರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕಳೆದ ವರ್ಷ ಕೊರೊನಾ ಸೋಂಕು ಕಾಣಿಸಿಕೊಂಡ ಸಂದರ್ಭದಿಂದಲೂ ಇವರ ತಂಡ ಕೊರೊನಾದಿಂದ ಸಾವನ್ನಪ್ಪುವವರ ಅಂತ್ಯ ಸಂಸ್ಕಾರ ನಡೆಸುವಲ್ಲಿ ತೊಡಗಿಕೊಂಡಿತ್ತು. ಕೊರೊನಾದಿಂದ ಸಾವನ್ನಪ್ಪಿದ್ದವರ ಅಂತ್ಯಸಂಸ್ಕಾರ ನೆರವೇರಿಸಲು ನಗರ ಪಾಲಿಕೆ ನಿಯೋಜಿಸಿದ್ದ ತಂಡದ ಮುಖ್ಯಸ್ಥರಾಗಿದ್ದ ಪ್ರವೀಣ್ ಅವರು ಕಳೆದ ವರ್ಷದಿಂದ ಇದುವರೆಗೂ ಸುಮಾರು ಮುನ್ನೂರು ಮಂದಿಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಮನೆಯವರೇ ಕೊರೊನಾ ರೋಗಿಗಳ ಶವಗಳನ್ನು ಮುಟ್ಟಲು ಹೆದರುತ್ತಿದ್ದ ಸಂದರ್ಭದಲ್ಲಿ ಸತ್ತವರ ಅಂತ್ಯಸಂಸ್ಕಾರವನ್ನು ಗೌರವವಾಗಿ ನೆರವೇರಿಸಿದ್ದರು.

ಭಾನುವಾರ ಪ್ರವೀಣ್ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿತ್ತು. ಎರಡು ದಿನಗಳ ನಂತರ ಅವರು ಸಾವನ್ನಪ್ಪಿದ್ದಾರೆ. ಆಮ್ಲಜನಕ ಮಟ್ಟ ಕಡಿಮೆಯಾಗಿ ಅವರು ಸಾವನ್ನಪ್ಪಿರುವುದಾಗಿ ಪಾಲಿಕೆ ವಕ್ತಾರ ತಿಳಿಸಿದ್ದಾರೆ.
ಪ್ರವೀಣ್ ಕುಮಾರ್ ನಗರ ಪಾಲಿಕೆ ಸಫಾಯಿ ಕರ್ಮಾಚಾರಿ ಸಂಘಟನೆಯ ಅಧ್ಯಕ್ಷ ಕೂಡ ಆಗಿದ್ದರು. ಕೊರೊನಾ ಮಾರ್ಗಸೂಚಿ ಅನ್ವಯ ಅವರ ಅಂತಿಮ ಸಂಸ್ಕಾರವನ್ನು ರಿಷಿ ನಗರದಲ್ಲಿ ಮಂಗಳವಾರ ನೆರವೇರಿಸಲಾಗಿದೆ.












Click it and Unblock the Notifications