ಉಗ್ರನೆಂದು ತಪ್ಪಾಗಿ ಅರ್ಥೈಸಿ ವ್ಯಕ್ತಿಯನ್ನು ಕೊಂದ ಭಾರತೀಯ ಸೇನೆ?
ಭಾರತ- ಮ್ಯಾನ್ಮಾರ್ ಗಡಿಯಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಯುವಕನ ಮೇಲೆ ಭಾರತೀಯ ಸೇನೆ ಗುಂಡು. ತಿಂಗು (35) ಎಂಬ ನಾಗರಿಕ ಸಾವು. ಬುಧವಾರ (ಜೂನ್ 14) ರಾತ್ರಿ ನಡೆದ ಘಟನೆ.
ಗುವಾಹಟಿ, ಜೂನ್ 16: ಭಾರತ, ಮ್ಯಾನ್ಮಾರ್ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ತಪ್ಪಾಗಿ ಅರ್ಥೈಸಿದ ಭಾರತೀಯ ಸೇನೆ, ಗುಂಡು ಹಾರಿಸಿ ಆತನನ್ನು ಹತ್ಯೆಗೈದಿದೆ. ಬುಧವಾರ (ಜೂನ್ 14) ರಾತ್ರಿ ಈ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ತಿಂಗು ನೆಮು (35) ಎಂದು ಗುರುತಿಸಲಾಗಿದೆ. ಈ ಚಂಗ್ಲಾಂಗ್ ಜಿಲ್ಲೆಯವನೆಂದು ಸೇನೆ ಹೇಳಿದೆ. ಇದೇ ಜಿಲ್ಲೆಗೆ ಹೊಂದಿಕೊಂಡಂತಿರುವ ಮ್ಯಾನ್ಮಾರ್ ದೇಶದ ಗಡಿ ಭಾಗದಲ್ಲಿ ಅರೆಸೇನಾ ಪಡೆ ಈ ಗುಂಡಿನ ದಾಳಿ ನಡೆಸಿತ್ತು.
ಭಾರತೀಯ ಸೇನೆಯ ಹೇಳಿಕೆ ಪ್ರಕಾರ, ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ಮ್ಯಾನ್ಮಾರ್ ನಿಂದ ಅಪಾಯಕಾರಿ ಉಗ್ರರು ಭಾರತದೊಳಕ್ಕೆ ನುಸುಳುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆಯು ಹೇಳಿದ್ದರಿಂದಾಗಿ, ಈ ಪ್ರದೇಶದಲ್ಲಿ ಹದ್ದಿನ ಕಣ್ಣಿಡಲಾಗಿತ್ತು.
ಬುಧವಾರವೂ ಈ ಕಾರ್ಯಾಚರಣೆ ನಡೆಯುವಾಗ, ಅಕಸ್ಮಾತ್ತಾಗಿ ಅದೇ ಪ್ರದೇಶಕ್ಕೆ ಬಂದ ತಿಂಗು, ಸೈನಿಕರ ಕಣ್ಣಿಗೆ ಬಿದ್ದಿದ್ದಾನೆ. ಭಾರತೀಯ ಯೋಧರು ಆತನನ್ನು ವಶಕ್ಕೆ ತೆಗೆದುಕೊಳ್ಳಲು ಮೊದಲು ಯತ್ನಿಸಿದರೂ ಆತ ಅನುಮಾನಾಸ್ಪದವಾಗಿ ಓಡಿಹೋಗಲು ಯತ್ನಿಸಿದ್ದರಿಂದಾಗಿ ಆತನ ಮೇಲೆ ಗುಂಡು ಹಾರಿಸಲಾಗಿತ್ತು ಎಂದು ಸೇನಾ ಮೂಲಗಳು ಹೇಳಿವೆ.