ಪ್ರಧಾನಿ ಮೋದಿಗೆ ಧನ್ಯವಾದ ಹೇಳಿ ವ್ಯಕ್ತಿ ಆತ್ಮಹತ್ಯೆ
ನವದೆಹಲಿ, ಜೂ 2: ಕಾಂಗ್ರೆಸ್ ದುರಾಡಳಿತಕ್ಕೆ ನೀವು ಮಂಗಳ ಹಾಡಿದ್ದೀರಿ. ಪ್ರಧಾನಿಯಾದ ನಿಮಗೆ ನನ್ನ ಆತ್ಮೀಯ ಅಭಿನಂದನೆಗಳು ಎಂದು ನರೇಂದ್ರ ಮೋದಿಗೆ ಡೆತ್ ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ದೆಹಲಿ ಭಾಗದಿಂದ ವರದಿಯಾಗಿದೆ.
ಉತ್ತರ ದೆಹಲಿಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರಾಧಾ ಶ್ಯಾಮ್ ಪ್ರಸಾದ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳಲು ಇವರಿಗಿದ್ದ ಪ್ರಮುಖ ಕಾರಣವೆಂದರೆ ಕೌಟುಂಬಿಕ ಸಮಸ್ಯೆ.

ಪತ್ನಿ ನನ್ನವಳಾಗಿರಲಿಲ್ಲ, ನನ್ನ ಮಕ್ಕಳೇ ನನ್ನನ್ನು ಗೌರವಿಸಲಿಲ್ಲ. ಭಾವ ಮೈದುನರೊಂದಿಗೆ ಆಪ್ತಳಾಗಿ ನನ್ನನ್ನು ಪತ್ನಿ ಮೂಲೆಗುಂಪು ಮಾಡಿದಳು ಎಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪ್ರಸಾದ್ ಡೆತ್ ನೋಟಿನಲ್ಲಿ ಬರೆದಿಟ್ಟಿದ್ದಾರೆ.
ಕಾಂಗ್ರೆಸ್ ದುರಾಡಳಿತಕ್ಕೆ ಮತ್ತು ವಂಶಪಾರಂಪರ್ಯ ಆಡಳಿತಕ್ಕೆ ಅಂತ್ಯ ಹಾಡಿದ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು, ದೇಶದಲ್ಲಿ ನೀವು ಬದಲಾವಣೆ ತರಲಿದ್ದೀರಿ ಎನ್ನುವ ಆಶಾಭಾವನೆ ಹೊಂದಿದ್ದೇನೆಂದು ಪ್ರಸಾದ್ ತನ್ನ ಕೌಟುಂಬಿಕ ಸಮಸ್ಯೆಯ ಜೊತೆಗೆ ಮೋದಿಗೂ ಡೆತ್ ನೋಟಿನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ನಾನು ದುಡಿದು ಸಂಪಾದಿಸಿ ತಂದ ಸಂಬಳದ ಹಣವನ್ನು ನನ್ನ ಪತ್ನಿ ಭಾವಮೈದುನರ ಕುಟುಂಬ ನಿರ್ವಹಣೆಗೆ ವಿನಿಯೋಗಿಸುತ್ತಿದ್ದಳು. ಪತ್ನಿ ನನ್ನ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ. ನನಗೆ ಅದರ ಬಗ್ಗೆ ನೋವಿಲ್ಲ.
ಆದರೆ, ನನ್ನ ಮಕ್ಕಳು ನನ್ನನ್ನು ನಿಂದಿಸುತ್ತಿದ್ದದ್ದು ನನಗೆ ತಡೆಯಲಾರದ ನೋವಾಗಿತ್ತು ಎಂದು ಆತ್ಮಹತ್ಯೆ ಮಾಡಿಕೊಂಡ ಪ್ರಸಾದ್ ಡೆತ್ ನೋಟಿನಲ್ಲಿ ಬರೆದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಡೆತ್ ನೋಟನ್ನು ಪ್ರಧಾನಿ ಮೋದಿಗೆ ಸಂಬೋಧಿಸಿ ಬರೆದಿದ್ದರು. ಪ್ರಕರಣ ದಾಖಲಿಸಿಕೊಂಡ ಉತ್ತರ ದೆಹಲಿಯ ಬುರಾರಿ ಠಾಣಾ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.












Click it and Unblock the Notifications