ಮೋದಿ ಭೀತಿಯಲ್ಲಿ ದೀದಿ? ಕೋಲ್ಕತ್ತಾದಲ್ಲಿ ಪ್ರಜಾತಂತ್ರದ ಭಾರೀ ಅಣಕ
Recommended Video
ಮೊದಲಿಗೆ, ಪಶ್ಚಿಮ ಬಂಗಾಳದ 24 ಪರಗಣ ಭಾಗದ ಠಾಕೋರ್ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಶನಿವಾರದ (ಫೆ 2) ಸಾರ್ವಜನಿಕ ಸಭೆಯ ಬಗ್ಗೆ ಪ್ರಸ್ತಾವಿಸೋಣ. ಕಂಡು ಕೇಳರಿಯದ ಜನಸಾಗರ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸಿದ್ದ ಜನರು, ಮೋದಿ ಭಾಷಣ ಆರಂಭವಾಗುತ್ತಿದ್ದಂಂತೆಯೇ, ಕುರ್ಚಿ, ಕಂಬವನ್ನು ಏರಲಾರಂಭಿಸಿದ ಜನಸ್ತೋಮ.
ಕಾರ್ಯಕ್ರಮದ ಆಯೋಜಕರಿಗೆ ಎಲ್ಲಿ ಕಾಲ್ತುಳಿತದ ಘಟನೆ ನಡೆಯುತ್ತದೋ ಎನ್ನುವ ಭಯ, ಸತತವಾಗಿ ಜೈಕಾರ ಹಾಕುತ್ತಿದ್ದ ಜನರಿಗೆ ಮೋದಿಯಿಂದ ಶಾಂತವಾಗಿರುವಂತೆ ಹಲವು ಬಾರಿ ಮನವಿ. ಏನೇ ಆದರೂ ಕಮ್ಮಿಯಾಗದ ಜನರ ಅತಿರೇಕದ ಉತ್ಸಾಹದಿಂದ ಪ್ರಧಾನಿ ತಮ್ಮ ಭಾಷಣವನ್ನೇ ಮೊಟಕುಗೊಳಿಸಿದರು. ಮಮತಾ ಬ್ಯಾನರ್ಜಿ ಸರಕಾರದ ಪೊಲೀಸರು, ದೇಶದ ಪ್ರಧಾನಿಯೊಬ್ಬರು ಭಾಗವಹಿಸುವ ಸಭೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾದರು.
ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಸ್ಟರ ಕಾರುಬಾರು ಬಹುತೇಕ ಇತಿಹಾಸದ ಪುಟಕ್ಕೆ ಸೇರುತ್ತಿರುವುದರನಂತರ, ಇತ್ತೀಚಿನ ದಿನಗಳಲ್ಲಿ ಕೇರಳವನ್ನು ನಾಚಿಸುವಂತೆ ಬಿಜೆಪಿ ಮತ್ತು ಮಮತಾ ಬ್ಯಾನರ್ಜಿಯವರ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆಯುತ್ತಿವೆ. ಅದರಲ್ಲೂ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಎರಡು ಪಕ್ಷಗಳ ನಡುವಿನ ಜಿದ್ದು ಇನ್ನೊಂದು ಆಯಾಮಕ್ಕೆ ಹೋಗುತ್ತಿದೆ.
ದೀದಿ-ಸಿಬಿಐ ವಿವಾದ LIVE: ಮಮತಾ ಬೆಂಬಲಕ್ಕೆ ನಿಂತ ರಾಜ್ ಠಾಕ್ರೆ
ಠಾಕೋರ್ ನಗರದಲ್ಲಿ ಪ್ರಧಾನಿಯ ಭಾಷಣಕ್ಕೆ ಹರಿದುಬಂದ ಜನಸಾಗರ, ದೀದಿಯ ನಿದ್ದೆಯನ್ನು ಕೆಡಿಸಿದೆ ಎನ್ನುವ ಚರ್ಚೆಯ ನಡುವೆ, ಕೇಂದ್ರ ತನಿಖಾ ದಳ (ಸಿಬಿಐ), ಕೋಲ್ಕತ್ತಾದ ಪೊಲೀಸ್ ಕಮಿಷನರ್ ಬಾಗಿಲು ತಟ್ಟಿದೆ. ಅದು, ಶಾರದಾ ಚಿಟ್ ಫಂಡ್ ಗೋಲ್ಮಾಲ್ ವಿಚಾರಣೆಗಾಗಿ. ಹಾಗಾಗಿ, ಕೇಂದ್ರ ವರ್ಸಸ್ ಮಮತಾ ನಡುವೆ ಇನ್ನೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ವೇದಿಕೆ ಸಿದ್ದವಾಗಿದೆ, ಮಮತಾ ಧರಣಿ ಕೂತಿದ್ದಾರೆ.
ಕಮಿಷನರ್ ಮನೆಗೆ ಸಿಬಿಐ ತಂಡ
ಕಮಿಷನರ್ ಬಳಿ ಸಿಬಿಐ ತಂಡವನ್ನು ಕಳುಹಿಸಿದ ಮೋದಿ ಸರಕಾರದ ನಡೆ ಸರಿಯೋ ಅಥವಾ ಸಿಬಿಐ ಅಧಿಕಾರಿಗಳಿಗೆಯೇ ದಿಗ್ಬಂಧನ ವಿಧಿಸಿದ ಮಮತಾ ಸರಕಾರದ ನಿರ್ಧಾರ ಸರಿಯೋ, ತಪ್ಪೋ ಎನ್ನುವುದಕ್ಕಿಂತ, ಕೋಲ್ಕತ್ತಾದಲ್ಲಿ ಸದ್ಯ ನಡೆಯುತ್ತಿರುವುದು ಅಕ್ಷರಸಃ ಪ್ರಜಾತಂತ್ರದ ಅಣಕ, ರಾಜಕೀಯ ವೈಷಮ್ಯದ ಪರಮಾವಧಿ. ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಶಾಮೀಲಾಗಿರುವವರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಮುಖಂಡರು ಶಾಮೀಲಾಗಿದ್ದಾರೆ ಎನ್ನುವ ಆಪಾದನೆಯಿದೆ.
ಕಮಿಷನರ್ ಮನೆಗೆ ಬರಲು ಎಷ್ಟು ಧೈರ್ಯ : ಸಿಬಿಐ ವಿರುದ್ಧ ದೀದಿ ಕೆಂಡಾಮಂಡಲ
ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರಕಾರ
ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರಕಾರದ ನಡುವಿನ ಸಂಬಂಧ ತೀರಾ ಹಳಸಿದೆ. ಕೇಂದ್ರದ ವಿರುದ್ದ ಮಮತಾ ಸಡ್ಡು ಹೊಡೆಯುತ್ತಿರುವುದು ಇದೇನು ಮೊದಲಲ್ಲ. ಇತ್ತೀಚೆಗೆ ಲೋಕಸಭಾ ಚುನಾವಣೆಗೆ ಸಂಬಂಧ, ಚುನಾವಣಾ ಇಲಾಖೆಯ ಅಧಿಕಾರಿಗಳು ಕೋಲ್ಕತ್ತಾಗೆ ಹೋದಾಗಲೂ ಮಮತಾ ಸರಕಾರ ಸಹಕರಿಸಲಿರಲಿಲ್ಲ ಎನ್ನುವ ಆಪಾದನೆಯಿದೆ. ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವ ಮಮತಾ, ಈ ಹಿಂದೆ ಜಿಎಸ್ಟಿ ಬಗ್ಗೆ ವಿರೋಧ ವ್ಯಕ್ತಪಡಿಸಿ, ಕೊನೆಗೆ ತಮ್ಮ ಹಠವನ್ನು ಸಡಿಲಿಸಿದ್ದರು. ಸ್ಮಾರ್ಟ್ ಸಿಟಿ ಯೋಜನೆ, ರಿಯಲ್ ಎಸ್ಟೇಟ್ ರೆಗ್ಯುಲಾರಿಟಿ ಕಾಯ್ದೆ, ನದಿ ಜೋಡಣೆ, ಸ್ವಚ್ಚತಾ ಸರ್ವೇಕ್ಷಣೆ ಮುಂತಾದ ಕೇಂದ್ರ ಸರಕಾರದ ಯೋಜನೆಗಳಿಗೆ ಮಮತಾ ಸಡ್ಡು ಹೊಡೆದಿದ್ದರು.
ಮಮತಾ ಕುತ್ತಿಗೆಗೆ ಸುತ್ತಿಕೊಂಡ 'ಚೀಟ್' ಫಂಡ್
ಹಾಲಿ ಕೋಲ್ಕತ್ತಾದ ಕಮಿಷನರ್
ಹಾಲಿ ಕೋಲ್ಕತ್ತಾದ ಕಮಿಷನರ್ ರಾಜೀವ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಲು ಸಿಬಿಐ ಅಧಿಕಾರಿಗಳು ಬಂದಿದ್ದೇ, ಮಮತಾ ಈ ಬೀದಿ ಕಾಳಗಕ್ಕೆ ಕಾರಣ. ಹಲವು ಬಾರಿ ನೋಟಿಸ್ ನೀಡಿದರೂ ಕಮಿಷನರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎನ್ನುವುದು ಸಿಬಿಐ ಅಧಿಕಾರಿಗಳ ಹೇಳಿಕೆ. ಅಸಲಿಗೆ, 2014ರಲ್ಲಿ ಸರ್ವೋಚ್ಚ ನ್ಯಾಯಾಲಯವೇ ಶಾರದಾ ಚಿಟ್ ಫಂಡ್ ಹಗರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಈಗ, ಸಿಬಿಐ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ, ಮಮತಾ ಸರಕಾರ, ಸುಪ್ರೀಂಕೋರ್ಟ್ ತೀರ್ಪಿಗೇ ಸಡ್ಡು ಹೊಡೆದಿದೆ.
ಪಟ್ಟು ಬಿಡದ ದೀದಿ: ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ
ಮೋದಿ ಸರಕಾರ ನಮ್ಮ ಮೇಲೆ ಹಗೆತನ ಸಾಧಿಸುತ್ತಿದೆ
ಕೇಂದ್ರದ ಮೋದಿ ಸರಕಾರ ನಮ್ಮ ಮೇಲೆ ಹಗೆತನ ಸಾಧಿಸುತ್ತಿದೆ ಎನ್ನುವ ಆರೋಪ ಹೊರಿಸುವ ಮಮತಾ ಬ್ಯಾನರ್ಜಿ, ಈ ಹಿಂದೆ ಭದ್ರತೆಯ ನೆಪದಲ್ಲಿ ಅಮಿತ್ ಶಾ ಅವರ ರಥಯಾತ್ರೆಗೆ ಅವಕಾಶ ನೀಡಿರಲಿಲ್ಲ. ಅಮಿತ್ ಶಾ ಅವರ ಹೆಲಿಕಾಪ್ಟರ್ ಇಳಿಯಲೂ ಅನುಮತಿಯನ್ನು ನೀಡಿರಲಿಲ್ಲ. ಭಾನುವಾರ (ಫೆ 3) ಉತ್ತರ ಬಂಗಾಳದ ಬಲುರ್ ಘಾಟ್ ನಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಬೇಕಿತ್ತು. ಆದರೆ ಮಮತಾ ಬ್ಯಾನರ್ಜಿ ಸರಕಾರ ಅದಕ್ಕೂ ಅನುಮತಿ ನೀಡಿಲ್ಲ. ಪ್ರಧಾನಿಯವರ ಠಾಗೋರ್ ನಗರದ ಸಭೆಯಲ್ಲೂ ಭದ್ರತಾ ವೈಫಲ್ಯ ಕಂಡಿತ್ತು.
ಕಮಿಷನರ್ ರಾಜೀವ್ ಕುಮಾರ್
ಕೋಲ್ಕತ್ತಾ ಕಮಿಷನರ್ ರಾಜೀವ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಲು ಸಿಬಿಐ ಅಧಿಕಾರಿಗಳು ಏನು ಬಂದಿದ್ದರೋ, ಅದಕ್ಕೆ ಅಧಿಕಾರಿಗಳು ನೀಡುವ ಕಾರಣ, ಶಾರದಾ ಚಿಟ್ ಫಂಡ್ ಮತ್ತು ರೋಸ್ ವ್ಯಾಲಿ ಹಗರಣದ ಪ್ರಮುಖ ಸಾಕ್ಷಿಗಳನ್ನು ರಾಜೀವ್ ಕುಮಾರ್ ನಾಶ ಮಾಡುತ್ತಿದ್ದಾರೆ ಎನ್ನುವುದು. ತಮ್ಮ ಗಮನಕ್ಕೆ ತಾರದೆ ಪೊಲೀಸ್ ಕಮಿಷನರ್ ಅವರನ್ನು ವಿಚಾರಣೆ ನಡೆಸಲು ಸಿಬಿಐ ಬಂದಿದ್ದು ತಪ್ಪು ಎನ್ನುವುದು ಮಮತಾ ಆರೋಪ.
ಬಿಜೆಪಿಯ ಪ್ರಾಭಲ್ಯ ಹೆಚ್ಚುತ್ತಿರುವುದು
ಈ ಎಲ್ಲಾ ಘಟನೆಗಳನ್ನು ಅವಲೋಕಿಸಿದರೆ, ಬಿಜೆಪಿಯ ಪ್ರಾಭಲ್ಯ ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವುದು, ಮೋದಿ ಜನಪ್ರಿಯತೆ ವೃದ್ದಿಯಾಗುತ್ತಿರುವುದು ಮಮತಾ ಬ್ಯಾನರ್ಜಿಗೆ ನಡುಕ ಹುಟ್ಟಲಾರಂಭಿಸಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ. ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ,, ಸಿಬಿಐ ವಿಚಾರವನ್ನು ಇಟ್ಟುಕೊಂಡು, ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ, ತಾನೂ ಪ್ರಧಾನಮಂತ್ರಿ ಅಭ್ಯರ್ಥಿ ಎನ್ನುವುದನ್ನು ಸಾರುವುದಕ್ಕೆ ಈ ಘಟನೆಯನ್ನು ಮಮತಾ ಬಳಸಿಕೊಳ್ಳುತ್ತಿದ್ದಾರಾ ಎನ್ನುವ 'ರಾಜಕೀಯ ವಾಸನೆ' ಕಾಡದೇ ಇರದು.