'ಮಮತಾರಿಂದ ವಿಪಕ್ಷ ಮುಖ್ಯಸ್ಥೆಯಾಗುವ ಯತ್ನ, ಆದರೆ ಸೋಲು ಖಂಡಿತ'
ನವದೆಹಲಿ, ಡಿಸೆಂಬರ್, 16: ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್ ಸೇರಿ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ಬಳಿಕ 2024ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಿಂದಾಗಿ ಈ ಚುನಾವಣೆಯು ಭಾರೀ ಮಹತ್ವವನ್ನು ಪಡೆದುಕೊಂಡಿದೆ. ಈ ನಡುವೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2024ರ ಸಾರ್ವತ್ರಿಕ ಚುನಾವಣೆಗೆ ಈಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಟಿಎಂಸಿ ನಾಯಕಿಯ ವಿರುದ್ಧ ಬಿಜೆಪಿ ನಾಯಕಿ ರೂಪಾ ಗಂಗೂಲಿ ವಾಗ್ದಾಳಿ ನಡೆಸಿದ್ದಾರೆ.
"ಮಮತಾ ಬ್ಯಾನರ್ಜಿ ವಿರೋಧ ಪಕ್ಷ ನಾಯಕರುಗಳಲ್ಲಿ ಪ್ರಮುಖ ವ್ಯಕ್ತಿ ಎಂಬ ಸ್ಥಾನವನ್ನು ಪಡೆಯುವ ಯತ್ನ ಮಾಡುತ್ತಿದ್ದಾರೆ. ಆದರೆ ಜನರು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ನಡೆದ ಹಿಂಸಾಚಾರವನ್ನು ನೋಡಿದ್ದಾರೆ. ಹಾಗಾಗಿ ಮಮತಾ ಬ್ಯಾನರ್ಜಿಗೆ ಸೋಲು ಖಂಡಿತ," ಎಂದು ಹೇಳಿದ್ದಾರೆ.
ಬುಧವಾರ ಮುಂದಿನ ಚುನಾವಣೆಗಳ ಮಾತನಾಡಿದ್ದ ಮಮತಾ ಬ್ಯಾನರ್ಜಿ, "ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಂತೆಯೇ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಾಗುವುದು," ಎಂದು ತಿಳಿಸಿದ್ದರು. ಇದರ ವಿರುದ್ಧವಾಗಿ ಎಎನ್ಐಗೆ ಪ್ರತಿಕ್ರಿಯೆ ನೀಡಿದ ಗಂಗೂಲಿ, "2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪ್ರತಿಪಕ್ಷದ ಮುಖವಾಗಿ ಗುರುತಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರು ವಿಫಲರಾಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ," ಎಂದು ತಿಳಿಸಿದ್ದಾರೆ.

"ಬಿಜೆಪಿ ಹೇಗೆ ಎಂದು ದೇಶದ ಜನರಿಗೆ ತಿಳಿದಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಬಳಿಕ ಬಿಜೆಪಿ ಕಾರ್ಯಕರ್ತರನ್ನು ಥಳಿಸಲಾಯಿತು ಮತ್ತು ಜನರು ಬಿಜೆಪಿಗೆ ಮತ ಹಾಕಿದ್ದರಿಂದ ಅವರಿಗೂ ಥಳಿಸಲಾಯಿತು. ಮಮತಾ ಬ್ಯಾನರ್ಜಿ ತನ್ನ ಇಮೇಜ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದು ಎಲ್ಲಾ ಜನರಿಗೂ ತಿಳಿದಿದೆ. ಆಕೆಯ ಯಾವುದೇ ತಂತ್ರವೂ ಜನರ ಮೇಲೆ ಯಾವುದೇ ಪ್ರಭಾವವನ್ನು ಬೀರಲಾರದು," ಎಂದಿದ್ದಾರೆ.
ಸದನದಲ್ಲಿ ಜನರ ಸಮಸ್ಯೆ ಬಗ್ಗೆ ಪ್ರತಿಭಟನೆ ಮಾಡಬೇಕಿತ್ತು..
ರಾಜ್ಯಸಭೆಯಿಂದ ಅಮಾನತುಗೊಂಡಿರುವ 12 ಸಂಸದರ ಪ್ರತಿಭಟನೆ ಕುರಿತು ಮಾತನಾಡಿದ ಬಿಜೆಪಿ ನಾಯಕಿ, "ಆ 12 ಸಂಸದರು ಸದನದಲ್ಲಿ ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತುವ ಬದಲು ಗದ್ದಲವನ್ನು ಸೃಷ್ಟಿ ಮಾಡಿದ್ದಾರೆ. ಸಂಸದರಿಗೆ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದರೆ ಆ ಪ್ರತಿಭಟನೆ ಜನರಿಗಾಗಿ ಮಾಡಬೇಕು," ಎಂದು ಕೂಡಾ ಅಭಿಪ್ರಾಯಿಸಿದ್ದಾರೆ.
"ಸಂಸದರು ಕ್ಷಮೆ ಯಾಚಿಸಲು ಸಿದ್ಧರಿದ್ದರೆ ಅಮಾನತು ರದ್ದುಪಡಿಸುವುದಾಗಿ ಸರ್ಕಾರ ಹೇಳುತ್ತಿದೆ. ಎಲ್ಲಾ ಸಂಸದರು ಒಟ್ಟಾಗಿ ಸದನ ನಡೆಸಲು ಕೆಲಸ ಮಾಡಬೇಕು. ಆದರೆ ಅವರು ಅದನ್ನು ಮಾಡುವುದಿಲ್ಲ. ಅವರು ಸದನದೊಳಗೆ ಗದ್ದಲ ಸೃಷ್ಟಿಸುತ್ತಾರೆ. ಈಗ ದೇಶದ ಜನರು ಏನು ಆಲೋಚನೆ ಮಾಡುತ್ತಾರೆ ಎಂಬುವುದು ಪ್ರಮುಖ ಪ್ರಶ್ನೆಯಾಗಿದೆ. ಸಂಸತ್ತಿನಲ್ಲಿ ಸಂಸದರು ಮೋಜು ಮಾಡುತ್ತಾರೆ. ಮಹಿಳೆಯರು ಮತ್ತು ಮಾರ್ಷಲ್ಗಳ ಮೇಲೆ ಹಲ್ಲೆ ಮಾಡುತ್ತಾರೆ ಎಂಬ ಭಾವನೆ ಜನರಿಗೆ ಬರಬಾರದು. ನಿಮ್ಮ ಪ್ರತಿಭಟನೆ ನ್ಯಾಯಸಮ್ಮತವಾಗಿದೆಯೇ?. ನೀವು ಜನರ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪ ಮಾಡಿ," ಎಂದರು.
ವಿಧಾನಸಭಾ ಚುನಾವಣೆ ಜೊತೆಗೆ 2024ರ ಸಾರ್ವತ್ರಿಕ ಚುನಾವಣೆಗೆ ದೀದಿ ಸಜ್ಜು
ದೇಶದಲ್ಲಿ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ, ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ತಯಾರಿಯನ್ನು ನಡೆಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರವನ್ನು ಪಡೆದುಕೊಂಡಿರುವ ಮಮತಾ ಬ್ಯಾನರ್ಜಿ ಈಗ ವಿಧಾನಸಭೆ ಚುನಾವಣೆಯ ತಯಾರಿಯನ್ನು ನಡೆಸುತ್ತಿದ್ದಾರೆ. ಜೊತೆಗೆಯೇ 2024 ರ ಸಾರ್ವತ್ರಿಕ ಚುನಾವಣೆಯ ಮೇಲೂ ಮಮತಾ ಬ್ಯಾನರ್ಜಿ ಕಣ್ಣಿರಿಸಿದ್ದಾರೆ. ತನ್ನ ಪಕ್ಷವನ್ನು ದೇಶದಲ್ಲಿ ಪ್ರಮುಖ ವಿರೋಧ ಪಕ್ಷವನ್ನಾಗಿಸುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಈಗಲೇ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications