ಹಿಮಾಚಲ ಪ್ರದೇಶದಲ್ಲಿ ಮಲಯಾಳಂ ನಟಿ ಮಂಜು ವಾರಿಯರ್ ರಕ್ಷಣೆ
ಶಿಮ್ಲಾ, ಆಗಸ್ಟ್ 20: ಮಲಯಾಳಂ ಚಿತ್ರರಂಗದ ಹೆಸರಾಂತ ನಟಿ ಮಂಜು ವಾರಿಯರ್ ಹಾಗೂ ಸಿನಿಮಾಗಾಗಿ ಕಾರ್ಯ ನಿರ್ವಹಿಸುವ ಇತರ ಸಿಬ್ಬಂದಿಯನ್ನು ಪ್ರವಾಹ ಪೀಡಿತ ಹಿಮಾಚಲ ಪ್ರದೇಶದಲ್ಲಿ ರಕ್ಷಣೆ ಮಾಡಲಾಗಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ತಿಳಿಸಿದ್ದಾರೆ. ಮಂಜು ವಾರಿಯರ್ ಮತ್ತು ಇತರರು ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದರು. ನಟಿ ಹಾಗೂ ಸಿಬ್ಬಂದಿಯ ರಕ್ಷಣೆಗಾಗಿ ಕೇಂದ್ರ ಸಚಿವರನ್ನು ಮನವಿ ಮಾಡಲಾಗಿತ್ತು.
ಮನಾಲಿಯಿಂದ ನೂರು ಕಿ.ಮೀ. ದೂರದಲ್ಲಿ ಇರುವ ಛತ್ರು ಎಂಬಲ್ಲಿ ಮೂವತ್ತಕ್ಕೂ ಮಂದಿ ಸಿಕ್ಕಿಬಿದ್ದಿದ್ದರು. ಅವರನ್ನು ರಕ್ಷಣೆ ಮಾಡಲಾಗಿದೆ. ಈ ಹಿಂದೆಯೇ ಅವರಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕಳೆದ ಮೂರು ವಾರದಿಂದ ಇದೇ ಸ್ಥಳದಲ್ಲಿ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರ ಸಿನಿಮಾ ಶೂಟಿಂಗ್ ಗಾಗಿ ಇದ್ದರು. ಈ ಬಗ್ಗೆ ಮಾತೃಭೂಮಿ.ಕಾಮ್ ವರದಿ ಮಾಡಿದೆ.
ನಟಿ ಮಂಜು ವಾರಿಯರ್ ಅವರ ಸೋದರ ಮಧು ವಾರಿಯರ್ ಅವರು ಕೇಂದ್ರ ಸಚಿವ ವಿ. ಮುರಳೀಧರನ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿದ್ದು, ಸಹಾಯವನ್ನು ಕೋರಿದ್ದರು. ಹಿಮಾಚಲಪ್ರದೇಶದ ಮುಖ್ಯಮಂತ್ರಿ ಜತೆಗೆ ಮಾತನಾಡಿದ್ದ ಕೇಂದ್ರ ಸಚಿವರು, ನೆರವು ನೀಡುವಂತೆ ತಿಳಿಸಿದ್ದರು. ಚಿತ್ರ ತಂಡವನ್ನು ಮನಾಲಿಗೆ ವಾಪಸ್ ಕರೆತರುವ ಪ್ರಯತ್ನ ನಡೆದಿದೆ ಎಂದು ಮುರಳೀಧರನ್ ಹೇಳಿದ್ದರು.

ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ವಾರಗಳಿಂದ ಭಾರೀ ಮಳೆಯಾಗುತ್ತಿದ್ದು, ಮೂವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸೇತುವೆಗಳು ಕುಸಿದು ಹಲವು ಪ್ರದೇಶಗಳ ಜತೆಗಿನ ಸಂಪರ್ಕವೇ ಕಡಿತಗೊಂಡಿದೆ. ಭಾರೀ ಹಿಮಪಾತ ಸಹ ಆಗುತ್ತಿದ್ದು, ಲಹೌಲ್ ಮತ್ತು ಸ್ಪಿಟಿ ಜಿಲ್ಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ಮಿಯಾರ್ ಕಣಿವೆಯಲ್ಲಿ ಮಳೆಯ ಪರಿಣಾಮ ಭೀಕರವಾಗಿದೆ. ಹಲವೆಡೆ ಭೂ ಕುಸಿತ ಸಂಭವಿಸಿ, ರಸ್ತೆ ಸಂಪರ್ಕ ಕಡಿತವಾಗಿದೆ. ಸ್ಪಿಟಿ- ಲೇಹ್ ರಸ್ತೆಯಲ್ಲಿ ಮುನ್ನೂರಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿವೆ.












Click it and Unblock the Notifications