ಮಣಿಪುರ ಲೈಂಗಿಕ ದೌರ್ಜನ್ಯ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಎಸ್ಐಟಿ ತನಿಖೆ ಕೋರಿದ ಮಹುವಾ ಮೊಯಿತ್ರಾ
ನವದೆಹಲಿ, ಆಗಸ್ಟ್. 01: ಮಣಿಪುರ ರಾಜ್ಯದಲ್ಲಿ ಜನಾಂಗೀಯ ಘರ್ಷಣೆಯ ನಡುವೆ ವ್ಯಾಪಕವಾಗಿ ಚರ್ಚೆಗೆ ಮತ್ತು ಆಕ್ರೋಶಕ್ಕೆ ಒಳಗಾದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅನ್ನು ಮಧ್ಯಪ್ರವೇಶಿಸಲು ಕೃಷ್ಣನಗರದಿಂದ ಲೋಕಸಭೆಯ ಸಂಸದರಾಗಿ ಸೇವೆ ಸಲ್ಲಿಸುತ್ತಿರುವ ಮಹುವಾ ಮೊಯಿತ್ರಾ ಕೋರಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮ ಅರ್ಜಿಯ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸೇವೆಯಲ್ಲಿರುವ ಹಿರಿಯ ಅಧಿಕಾರಿಗಳು ಅಥವಾ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ಸ್ವತಂತ್ರ ವಿಶೇಷ ತನಿಖಾ ತಂಡ (SIT)ದ ರಚನೆಯನ್ನು ಕೋರಿದ್ದಾರೆ. ಎಸ್ಐಟಿ ನಡೆಸುತ್ತಿರುವ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಸ್ಥಿಕೆ ಅರ್ಜಿಯನ್ನು ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ಮುಂದೆ ಇತರ ಅರ್ಜಿಗಳೊಂದಿಗೆ ವಾದಿಸಲಾಗಿದೆ. ಮಹುವಾ ಮೊಯಿತ್ರಾ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಮಹಿಳೆಯರು ಅನುಭವಿಸುತ್ತಿರುವ ಆಘಾತವನ್ನು ಒತ್ತಿ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳ ನಡುವೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಸಂತ್ರಸ್ತರೊಂದಿಗೆಸಂವಾದ ನಡೆಸುವಂತೆ ಅನುಭವ ಹೊಂದಿರುವ ಮಹಿಳೆಯರಿಗೆ ಸೂಚಿಸಿದ್ದಾರೆ. ಇದು ಅತ್ಯಾಚಾರ ಸಂತ್ರಸ್ತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಪ್ರಮುಖವಾಗಿದೆ ಎಂದು ಇಂದಿರಾ ಜೈಸಿಂಗ್ ಒತ್ತಿ ಹೇಳಿದ್ದಾರೆ. ಸಂತ್ರಸ್ತರು ತಾವು ಅನುಭವಿಸಿದ ಆಘಾತಕಾರಿ ಅನುಭವಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಹೀಗಾಗಿ ಅವರ ಜೊತೆಗೆ ವ್ಯವಹರಿಸುವಲ್ಲಿ ಇಂತಹ ಘಟನೆಗಳನ್ನು ನೋಡಿ ಅನುಭವವಿರುವ ಎನ್ಜಿಒಗಳ ಮಹಿಳೆಯರನ್ನು ಒಳಗೊಂಡ ಉನ್ನತ ಅಧಿಕಾರ ಸಮಿತಿಯ ರಚನೆ ಮಾಡಬೇಕು ಎಂದು ಪ್ರಸ್ತಾಪಿಸಿದ್ದಾರೆ.
ಅರ್ಜಿಯ ಪ್ರಕಾರ, ಜುಲೈ 14, 2023 ರ ಹೊತ್ತಿಗೆ, ಮಣಿಪುರದಲ್ಲಿ 142 ಕ್ಕೂ ಹೆಚ್ಚು ಸಾವುಗಳು ಮತ್ತು 419 ಗಾಯಾಳುಗಳು, 5,995 ಬೆಂಕಿ ಹಚ್ಚಿದ ಪ್ರಕರಣಗಳು ಮತ್ತು 50,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಆದರೆ, ಸ್ಥಳೀಯ ಕಾರ್ಯಕರ್ತರ ಗುಂಪುಗಳು ನಿಜವಾದ ಅಂಕಿಅಂಶಗಳು ಹೆಚ್ಚು ಇರಬಹುದು ಎಂದು ಸೂಚಿಸಿವೆ.

ಈ ಹಿಂಸಾತ್ಮಕ ಘರ್ಷಣೆಗಳ ಸಮಯದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಅಧಿಕೃತ ಅಂಕಿಅಂಶಗಳಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಮೇ 4 ರಂದು ಸಂಭವಿಸಿದ ಘಟನೆಯ ನಂತರ, ರಾಜ್ಯದಾದ್ಯಂತ ಇಂತಹ ನೂರಾರು ಪ್ರಕರಣಗಳು ಇವೆ ಎಂದು ಮಣಿಪುರ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಘಟನೆ ನಡೆದಿರುವುದನ್ನು ಸಿಎಂ ಒಪ್ಪಿಕೊಂಡಿದ್ದಾರೆ ಮತ್ತು ಶೂನ್ಯ ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ರಾಜ್ಯಾದ್ಯಂತ ಸುಮಾರು 6,000 ಪ್ರಕರಣಗಳು ಮತ್ತು ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಮತ್ತು ಇನ್ನೂ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿಯ ಪ್ರಕಾರ, ಮಣಿಪುರ ರಾಜ್ಯದಲ್ಲಿ ಕಾನೂನುಬಾಹಿರತೆಯ ವ್ಯಾಪಕ ಸ್ವರೂಪವನ್ನು ಗಮನಿಸಿದರೆ, ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಪ್ರಾಧಿಕಾರದಿಂದ ಪ್ರಯತ್ನ ಮಾಡಲಾಗಿದೆ. ಆದರೆ, ಕೆಲಸದ ಹೊರೆಯಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ, ಸಮಸ್ಯೆಯ ಮೂಲ ಕಾರಣವಾದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷವನ್ನು ಗಮನಿಸಿ, ದೇಶದ ವಿವಿಧ ಭಾಗಗಳಲ್ಲಿ ಇರುವ ಹಿರಿಯ ಸೇವೆಯಲ್ಲಿರುವ ಅಧಿಕಾರಿಗಳು ಅಥವಾ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ಎಸ್ಐಟಿಯಿಂದ ಅಪರಾಧದ ತನಿಖೆ ನಡೆಸಬೇಕು. ತನಿಖೆಯ ಮೇಲ್ವಿಚಾರಣೆ ಸುಪ್ರೀಂ ಕೋರ್ಟ್ ನಡೆಸಬೇಕು ಎಂದು ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications