ಹಳ್ಳಿಯ ಮಹಿಳೆಯರ ಸಂಕಷ್ಟ ದೂರ ಮಾಡಿದ ನಿಜವಾದ ಹೀರೋ
ಲಕ್ನೋ, ಆ.3 : ಋತುಸ್ರಾವದ ಬಗ್ಗೆ ಮಾತನಾಡುವುದು ತಪ್ಪು ಎಂದು ಹಳ್ಳಿಗಳಲ್ಲಿ ಈಗಲೂ ಭಾವಿಸಲಾಗುತ್ತದೆ. ಉತ್ತರ ಪ್ರದೇಶದ ಮಹೇಶ್ ಖಂಡಲ್ ವಾಲ್ ಹಳ್ಳಿಯ ಬಡ ಮಹಿಳೆಯರಿಗಾಗಿ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ತಯಾರಿಸಿದರು ಮತ್ತು ಕಡಿಮೆ ಬೆಲೆಯಲ್ಲಿ ಅದು ಲಭ್ಯವಾಗುವಂತೆ ನೋಡಿಕೊಂಡರು.
ಮಹೇಶ್ ಖಂಡಲ್ ವಾಲ್ ಸಂಶೋಧಕ ಮತ್ತು ಉದ್ಯಮಿ. ಸಮಾಜದಲ್ಲಿ ಋತು ಸ್ರಾವದ ಬಗ್ಗೆ ಮಾತನಾಡಲು ಇದ್ದ ಹಿಂಜರಿಕೆಯನ್ನು ಮುರಿದವರು ಅವರು. ಮಹಿಳೆಯರಿಗೆ ಕಡಿಮೆ ಬೆಲೆಯಲ್ಲಿ ನ್ಯಾಪ್ ಕಿನ್ ಗಳನ್ನು ಒದಗಿಸಿ, ದೇಶದ ಅಭಿವೃದ್ಧಿಗೆ ಸಹಕಾರ ನೀಡಿದವರು.

ಮಥುರಾ ಮೂಲದ ಐಎಎಸ್ ಅಧಿಕಾರಿ ಚಂದ್ರಲೇಖ ಅವರು ಮಹೇಶ್ ಅವರಿಗೆ ಮಹಿಳೆಯರ ಸಮಸ್ಯೆ ಬಗ್ಗೆ ವಿವರ ನೀಡಿದ್ದರು. ಗ್ರಾಮೀಣ ಭಾಗದ ಮಹಿಳೆಯರು ಅನುಭವಿಸುವ ಸಂಕಷ್ಟವನ್ನು ತಿಳಿಸಿದ್ದರು. ಆಗ ಮಹೇಶ್ ಈ ಸಮಸ್ಯೆಯನ್ನು ಪರಿಹಾರ ಮಾಡಬೇಕು ಎಂದು ನಿರ್ಧರಿಸಿದರು.
ಮಹೇಶ್ 'ವಿ ಸ್ಯಾನಿಟರಿ ನ್ಯಾಪ್ ಕಿನ್' ಗಳನ್ನು ಸಿದ್ಧಪಡಿಸಿದರು. ಮಾರುಕಟ್ಟೆಯಲ್ಲಿ ಸಿಗುವ ಇತರ ನ್ಯಾಪ್ ಕಿನ್ ಗಳಿಗೆ ಹೋಲಿಸಿದರೆ ಇದರ ದರ ಕಡಿಮೆ. ಈ ನ್ಯಾಪ್ ಕಿನ್ ಗಳನ್ನು ಹನ್ನೆರಡು ಗಂಟೆಗಳ ಕಾಲ ಬಳಸಬಹುದಿತ್ತು. ಉಳಿದ ನ್ಯಾಪ್ ಕಿನ್ ಕೇವಲ ಆರು ಗಂಟೆಗಳ ಕಾಲ ಮಾತ್ರ ಬಳಸಲು ಸಾಧ್ಯವಿತ್ತು.
ಆರು ನ್ಯಾಪ್ ಕಿನ್ ಗಳನ್ನು ಒಳಗೊಂಡ ಪ್ಯಾಕ್ ಗೆ ಹತ್ತು ರೂಪಾಯಿ ದರ ನಿಗದಿ ಮಾಡಿದರು. ಪರಿಸರ ಸ್ನೇಹಿ ಆಗಿದ್ದ ಈ ನ್ಯಾಪ್ ಕಿನ್ ಗಳನ್ನು ಹಳ್ಳಿಗಳಲ್ಲಿನ ಮಹಿಳಾ ಸಂಘದ ಸದಸ್ಯರೇ ತಯಾರಿಸಿದ್ದರು. ಹೆಚ್ಚು ನ್ಯಾಪ್ ಕಿನ್ ತಯಾರಿಸಲು ಮತ್ತು ಗುಣಮಟ್ಟ ಕಾಪಾಡಲು ಅವರು ಯಂತ್ರವನ್ನು ಕಂಡು ಹಿಡಿದರು.
ಸುಮಾರು ಒಂದು ಲಕ್ಷ ರೂ. ಮೊತ್ತದ ಈ ಯಂತ್ರದ ಸಹಾಯದಿಂದ ಹತ್ತು ಮಹಿಳೆಯರು ದಿನಕ್ಕೆ 2000 ಪ್ಯಾಕೆಟ್ ನ್ಯಾಪ್ ಕಿನ್ ತಯಾರು ಮಾಡಬಹುದಾಗಿತ್ತು. ಇದರಿಂದ ಮಹಿಳೆಯರು ತಿಂಗಳಿಗೆ ಐದರಿಂದ ಆರು ಸಾವಿರ ರೂ ಸಂಪಾದನೆ ಮಾಡುತ್ತಿದ್ದರು.
ಮಹೇಶ್ ಖಂಡಲ್ ವಾಲ್ ತಮ್ಮ ಈ ಕಾರ್ಯದಿಂದ ಮಹಿಳೆಯರಿಗೆ ಉದ್ಯೋಗ ನೀಡಿದರು ಮತ್ತು ಹಳ್ಳಿಗಳಲ್ಲಿನ ಮಹಿಳೆಯರ ಸಂಕಷ್ಟವನ್ನು ದೂರ ಮಾಡಿದರು.












Click it and Unblock the Notifications