ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ರಾಣೆಯಿಂದ ಹೊಸ ಪಕ್ಷ
ಮುಂಬೈ, ಅಕ್ಟೋಬರ್ 1: ಪಕ್ಷಕ್ಕೆ ಗುಡ್ ಬೈ ಹೇಳಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ.
ಸೆಪ್ಟೆಂಬರ್ 21ರಂದು ತಮ್ಮ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ರವಾನಿಸಿದ್ದ ನಾರಾಯಣ ರಾಣೆ ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬೆನ್ನಿಗೆ ರಾಣೆ ಬಿಜೆಪಿ ಸೇರಲಿದ್ದಾರೆ ಎಂಬ ಗಾಳಿ ಸುದ್ದಿಗಳು ಓಡಾಡುತ್ತಿದ್ದವು.

ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ರಾಣೆ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. 'ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷ' ಎಂಬುದು ತಮ್ಮ ನೂತನ ಪಕ್ಷದ ಹೆಸರು ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನನಗೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. 12 ವರ್ಷಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಳಿಸುವಾಗ ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು ಎಂದು ರಾಣೆ ದೂರಿದ್ದರು.
ಅಲ್ಲದೆ ನಾನು ಕಾಂಗ್ರೆಸ್ ಮತ್ತು ಶಿವಸೇನೆ ಪಕ್ಷಗಳನ್ನು ಮಗಿಸುತ್ತೇನೆ ಎಂದು ಮಾಜಿ ಶಿವಸೇನೆ ನಾಯಕ ರಾಣೆ ಅಬ್ಬರಿಸಿದ್ದರು.
1999ರಲ್ಲಿ 7 ತಿಂಗಳ ಕಾಲ ಶಿವಸೇನೆಯಿಂದ ಮುಖ್ಯಮಂತ್ರಿಯಾಗಿದ್ದ ನಾರಾಯಣ ರಾಣೆ 2005ರಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆಯವರನ್ನು ಬಹಿರಂಗವಾಗಿ ಟೀಕಿಸಿದ್ದರು. ಮರು ದಿನ ಅವರನ್ನು ಪಕ್ಷದಿಂದ ಕೈಬಿಡಲಾಗಿತ್ತು. ನಂತರ ರಾಣೆ ಕಾಂಗ್ರೆಸ್ ಸೇರಿದ್ದರು.
2008ರಲ್ಲಿ ಮುಂಬೈ ಸ್ಪೋಟದ ನಂತರ ವಿಲಾಸ್ ರಾವ್ ದೇಶ್ ಮುಖ್ ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಾಂಗ್ರೆಸ್ ಕೆಳಗಿಳಿಸಿತ್ತು. ಈ ವೇಳೆ ನೂತನ ಮುಖ್ಯಮಂತ್ರಿಯಾಗಿ ಅಶೋಕ್ ಚವಾಣ್ ರನ್ನು ನೇಮಿಸಲಾಗಿತ್ತು. ಈ ಸಂದರ್ಭದಲ್ಲೇ ನಾರಾಯಣ ರಾಣೆ ಕಾಂಗ್ರೆಸ್ ನಾಯತ್ವದ ವಿರುದ್ಧ ಅಸಮಧಾನಗೊಂಡಿದ್ದರು. ಇದೀಗ ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟುವುದಾಗಿ ರಾಣೆ ಘೋಷಿಸಿದ್ದಾರೆ.
ಈಗಾಗಲೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶರದ್ ಪವಾರ್ ಅವರ ಎನ್.ಸಿ.ಪಿ, ಬಿಜೆಪಿ ಮತ್ತು ಶಿವಸೇನೆ ನೆಲೆ ನಿಂತಿದ್ದು ಈ ನಾಲ್ಕು ಪಕ್ಷಗಳ ಮಧ್ಯೆ ರಾಣೆ ತಮ್ಮ ಅಸ್ತಿತ್ವ ತೋರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications