ಮಹಾರಾಷ್ಟ್ರ ಬಿಕ್ಕಟ್ಟಿನ ಕುರಿತು ಅಮಿತ್ ಶಾ ಮಹತ್ವದ ಹೇಳಿಕೆ
ನವದೆಹಲಿ, ನವೆಂಬರ್ 13: ಮಹಾರಾಷ್ಟ್ರದಲ್ಲಿ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಸುಮಾರು 18 ದಿನಗಳ ಬಳಿಕ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನಾ-ಬಿಜೆಪಿ ಅಗತ್ಯ ಬಹುಮತದ ಸಂಖ್ಯೆ ಹೊಂದಿದ್ದರೂ, ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕುರಿತು ಉಂಟಾದ ವಿವಾದ ಹೊಸ ತಿರುವು ಪಡೆದುಕೊಂಡಿತ್ತು. ಬಳಿಕ ಶಿವಸೇನಾ, ತನ್ನ ವಿರೋಧಿಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸುವ ಪ್ರಯತ್ನ ಮಾಡಿದರೂ ಕೈಗೂಡಿಲ್ಲ. ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದರೂ ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಯತ್ನಗಳು ಮುಂದುವರಿದಿವೆ.
ಶಿವಸೇನಾ ನಾಯಕರಾದ ಉದ್ಧವ್ ಠಾಕ್ರೆ, ಸಂಜಯ್ ರಾವತ್ ಸೇರಿದಂತೆ ಅನೇಕರು ಬಿಜೆಪಿ ತಮಗೆ ಮೋಸ ಮಾಡಿದೆ ಎಂದು ನಿರಂತರ ಆರೋಪಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಹುದ್ದೆಯನ್ನು ತಲಾ ಎರಡೂವರೆ ವರ್ಷ ಹಂಚಿಕೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿಯೇ ಚರ್ಚಿಸಿ ಒಪ್ಪಿಗೆ ನೀಡಲಾಗಿತ್ತು. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ಅದಕ್ಕೆ ಒಪ್ಪಿಕೊಳ್ಳದೆ ವಂಚಿಸಿದೆ ಎಂದು ಶಿವಸೇನಾ ಆರೋಪಿಸಿದೆ. ಜತೆಗೆ ಬಿಜೆಪಿ ಸುಳ್ಳುಗಾರರ ಪಕ್ಷ ಎಂದು ಅಮಿತ್ ಶಾ ವಿರುದ್ಧವೂ ನೇರ ವಾಗ್ದಾಳಿ ನಡೆಸಿದ್ದಾರೆ.
ಇಷ್ಟೆಲ್ಲಾ ಆರೋಪಗಳನ್ನು ಮಾಡುತ್ತಿದ್ದರೂ ಮಹಾರಾಷ್ಟ್ರ ರಾಜಕೀಯದ ಬಗ್ಗೆ ಅಮಿತ್ ಶಾ ಯಾವ ಹೇಳಿಕೆಯನ್ನೂ ನೀಡಿರಲಿಲ್ಲ. ಬುಧವಾರ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿರುವ ಅವರು ಈ ಗೊಂದಲದ ಕುರಿತು ಮೌನಮುರಿದಿದ್ದಾರೆ. ಅವರ ಮಾತುಗಳಲ್ಲಿ ಆಯ್ದ ವಿವರಗಳು ಇಲ್ಲಿವೆ.

ಸುದೀರ್ಘ ಸಮಯ ನೀಡಲಾಗಿತ್ತು
ಮಹಾರಾಷ್ಟ್ರದ ಈ ಪ್ರಕರಣಕ್ಕೂ ಮುನ್ನ ಬೇರೆ ಯಾವ ರಾಜ್ಯದಲ್ಲಿಯೂ ಇಷ್ಟು ಸುದೀರ್ಘ ಸಮಯ ನೀಡಿರಲಿಲ್ಲ. ಸರ್ಕಾರ ರಚನೆಗೆ 18 ದಿನಗಳನ್ನು ನೀಡಲಾಗಿತ್ತು. ವಿಧಾನಸಭೆಯ ಅವಧಿ ಮುಗಿದ ಬಳಿಕವಷ್ಟೇ ರಾಜ್ಯಪಾಲರು ಪಕ್ಷಗಳಿಗೆ ಸರ್ಕಾರ ರಚನೆಯ ಆಹ್ವಾನ ನೀಡಿದ್ದರು. ಶಿವಸೇನಾ ಆಗಲೀ, ಎನ್ಸಿಪಿಯಾಗಲೀ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿಲ್ಲ. ನಾವೂ ಕೂಡ ಮುಂದಾಗಲಿಲ್ಲ.

ಕಪಿಲ್ ಸಿಬಲ್ ಬಾಲಿಶ ಹೇಳಿಕೆ
ಇಂದು ಕೂಡ ಬಹುಮತ ಹೊಂದಿರುವ ಯಾವುದೇ ಪಕ್ಷ ಸರ್ಕಾರ ರಚನೆಗಾಗಿ ರಾಜ್ಯಪಾಲರನ್ನು ಭೇಟಿಯಾಗಬಹುದು. ರಾಜ್ಯಪಾಲರು ಯಾವುದೇ ಪಕ್ಷಕ್ಕೆ ಅವಕಾಶವನ್ನು ನಿರಾಕರಿಸಿಲ್ಲ. 'ನಾವು ಸರ್ಕಾರ ರಚನೆಗೆ ಅವಕಾಶ ನಿರಾಕರಿಸಿದೆವು' ಎಂಬಂತಹ ಬಾಲಿಶ ಹೇಳಿಕೆಗಳನ್ನು ಕಪಿಲ್ ಸಿಬಲ್ ಅವರಂತಹ ತಿಳಿವಳಿಕೆಯುಳ್ಳ ವಕೀಲರು ನೀಡುತ್ತಾರೆ.

ನಾನು ಮತ್ತು ಮೋದಿ ಇಬ್ಬರೂ ಹೇಳಿದ್ದೆವು
ನಮ್ಮ ಮೈತ್ರಿಕೂಟ ಜಯಗಳಿಸಿದರೆ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಚುನಾವಣೆಗೂ ಮುನ್ನ ನಾನು ಮತ್ತು ಪ್ರಧಾನಿ ಇಬ್ಬರೂ ಅನೇಕ ಬಾರಿ ಸಾರ್ವಜನಿಕವಾಗಿ ಹೇಳಿದ್ದೇವೆ. ಆಗ ಶಿವಸೇನಾದಿಂದ ಯಾವುದೇ ವಿರೋಧ ಬಂದಿರಲಿಲ್ಲ. ಈಗ ಅವರು ಹೊಸ ಬೇಡಿಕೆಯೊಂದಿಗೆ ಬಂದಿದ್ದಾರೆ. ಅದನ್ನು ನಾವು ಒಪ್ಪಲಾಗದು.

ಹಕ್ಕು ಇದೆ, ಆದರೆ ಸಂಖ್ಯೆ ಇಲ್ಲ
ಮುಂದಿನ ಸರ್ಕಾರ ರಚಿಸುವುದು ತಮ್ಮ ಹಕ್ಕು ಎನ್ನುವ ಮೂಲಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಿದ ರಾಜ್ಯಪಾಲರ ನಿರ್ಧಾರವನ್ನು ಟೀಕಿಸುತ್ತಿರುವವರಿಗೆ ನಾನು ಹೇಳಲು ಬಯಸುವುದಿಷ್ಟೇ, ನಿಮಗೆ ಹಕ್ಕು ಇದೆ ನಿಜ. ಆದರೆ ನಿಮ್ಮ ಬಳಿ ಸಂಖ್ಯೆಯಿಲ್ಲ.

ಮಧ್ಯಂತರ ಚುನಾವಣೆ ಬಯಸಿಲ್ಲ
ಮುಚ್ಚಿದ ಬಾಗಿಲ ಹಿಂದೆ ಏನೇನು ಚರ್ಚೆಗಳು ನಡೆದಿವೆ ಎಂಬುದನ್ನು ಬಹಿರಂಗಪಡಿಸುವುದು ನಮ್ಮ ಪಕ್ಷದ ಸಂಪ್ರದಾಯದಲ್ಲಿ ಇಲ್ಲ. ಶಿವಸೇನಾ ದಂಗೆ ಎದ್ದು ಜನರ ಅನುಕಂಪ ಗಿಟ್ಟಿಸಿಕೊಳ್ಳಬಹುದು ಎಂದು ಯೋಚಿಸಿದ್ದರೆ ಅವರಿಗೆ ಜನರ ಬಗ್ಗೆ ತಿಳಿದೇ ಇಲ್ಲ ಎಂದರ್ಥ. ನಾವು ಶಿವಸೇನಾಕ್ಕೆ ಮೋಸ ಮಾಡಿಲ್ಲ. ತನ್ನ ಮೈತ್ರಿಪಕ್ಷದೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚಿಸಲು ಬಯಸಿತ್ತು. ನಾವು ಮಧ್ಯಂತರ ಚುನಾವಣೆಯನ್ನು ಬಯಸುತ್ತಿಲ್ಲ. 50:50ರ ಸರ್ಕಾರಕ್ಕೆ ಚುನಾವಣೆಗೂ ಮುನ್ನ ಬಿಜೆಪಿ ಒಪ್ಪಿಕೊಂಡಿತ್ತು ಎಂದು ಶಿವಸೇನಾ ಹೇಳಿದೆ. ಬಿಜೆಪಿ ನೀಡದೆಯೇ ಇರುವ ಭರವಸೆಯಿದು ಎಂದು ಶಾ ಹೇಳಿದರು.
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications