'ಎಲೆಕ್ಷನ್ ಮುಗಿಯೋ ತನಕ ಮಹಾದಾಯಿ ಮಾತುಕತೆ ಇಲ್ಲ'
ಪಣಜಿ, ಡಿಸೆಂಬರ್ 26: ಮಹಾದಾಯಿ, ಕಳಸಾ ಬಂಡೂರಿ ಹೋರಾಟದ ಕಿಚ್ಚು ಹೆಚ್ಚಾಗುತ್ತಿದೆ. ಆದರೆ, ಗೋವಾದಲ್ಲಿ ಮಹಾದಾಯಿ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದ್ದು, ಮನೋಹರ್ ಅವರು ಸರ್ಕಾರ ಉಳಿಸಿಕೊಳ್ಳುವ ಚಿಂತೆಯಲ್ಲಿದ್ದರೆ, ಗೋವಾ ಬಿಜೆಪಿ ಈ ತಂಟೆ ತಕರಾರು ಏನಿದ್ದರೂ ಚುನಾವಣೆ ಮುಗಿಯುವ ತನಕ ಬೇಡ ಎಂದು ಘೋಷಿಸಿದೆ.
ಮಹದಾಯಿ ನದಿ ನೀರು ಹಂಚ್ಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಹಾಗೂ ಕರ್ನಾಟಕ ಸರ್ಕಾರದ ನಡುವೆ ದ್ವಿಪಕ್ಷೀಯ ಮಾತುಕತೆಗೆ ಆತುರ ಬೇಡ, ಮಾತುಕತೆ ಏನಿದ್ದರೂ ಕರ್ನಾಟಕ ಅಸೆಂಬ್ಲಿ ಚುನಾವಣೆ ನಂತರ ನಡೆಸಿ ಎಂದು ಸಿಎಂ ಮನೋಹರ್ ಪರಿಕ್ಕಾರ್ ಅವರಿಗೆ ಗೋವಾ ಭಾರತೀಯ ಜನತಾ ಪಕ್ಷ ಕಿವಿಮಾತು ನೀಡಿದೆ.

ಕರ್ನಾಟಕದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಗೋವಾ ಸಿಎಂ ಮನೋಹರ್ ಪರಿಕ್ಕಾರ್ ಅವರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ಗೋವಾ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಮಿತ್ರಪಕ್ಷಗಳಾದ ಗೋವಾ ಫಾರ್ವಡ್ ಫ್ರಂಟ್, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿಗಳು 'ಒಂದು ಹನಿ ನೀರು ಕೊಡುವುದು ಬೇಡ' ಎನ್ನುತ್ತಿವೆ.
ಗೋವಾ ಬಿಜೆಪಿ ಅಧ್ಯಕ್ಷ, ರಾಜ್ಯಸಭಾ ಸದಸ್ಯ ವಿನಯ್ ತೆಂಡೂಲ್ಕರ್ ಮಾತನಾಡಿ, ಪರಿಕ್ಕರ್ ಅವರ ಬೆಂಬಲಕ್ಕೆ ಬಿಜೆಪಿ ಸದಾಕಾಲ ಇರುತ್ತದೆ. ಆದರೆ, ಕರ್ನಾಟಕದಲ್ಲಿ ಚುನಾವಣೆ ಮುಂದಿಟ್ಟುಕೊಂಡು ಆತುರವಾಗಿ ನಿರ್ಧಾರ ಕೈಗೊಳ್ಳುವುದು ಬೇಡ. ಸುಳ್ಳು ಆಶ್ವಾಸನೆ ನೀಡಿದ ಅಪವಾದ ಬಿಜೆಪಿಗೆ ಬರುವುದು ಬೇಡ ಎಂದಿದ್ದಾರೆ.
ಮಹಾದಾಯಿ ಬಚಾವ್ ಅಭಿಯಾನ ಸಂಸ್ಥೆ ಕೂಡಾ ಮನೋಹರ್ ಅವರ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದೆ. 'ಪಣಜಿಯಲ್ಲಿನ ತಮ್ಮ ಕ್ಷೇತ್ರಗಳಿಗೆ ಮೊದಲು ಕುಡಿಯುವ ನೀರು ಕೊಡಲಿ' ನಂತರ ಕರ್ನಾಟಕಕ್ಕೆ ನೀರು ಹರಿಸಲಿ ಎಂದು ಎಐಸಿಸಿ ಕಾರ್ಯದರ್ಶಿ ಗಿರೀಶ್ ಅವರು ಮನೋಹರ್ ಗೆ ತಾಕೀತು ಮಾಡಿದ್ದಾರೆ.
ಜಲವಿವಾದ ಟ್ರಿಬ್ಯುನಲ್ ಮುಂದಿರುವಾಗ ಈ ಪತ್ರ ಬರೆಯುವ ಪ್ರಮೇಯವೇನಿತ್ತು? ಅಮಿತ್ ಶಾ ಅವರಿಂದ ಒತ್ತಡಕ್ಕೆ ಒಳಗಾಗಿ ಗೋವಾ ಜನತೆಗೆ ದ್ರೋಹ ಬಗೆದರೆ ಸಹಿಸಲು ಸಾಧ್ಯವಿಲ್ಲ. ಕಾನೂನು ಮೂಲಕ ಸಮಸ್ಯೆಗೆ ಪರಿಹಾರ ಸಿಗಲಿ ಎಂದು ಗೋವಾ ಸುರಕ್ಷಾ ಮಂಚ್ ನ ಅಧ್ಯಕ್ಷ ಆನಂದ್ ಶಿರೋಡ್ಕರ್ ಆಗ್ರಹಿಸಿದ್ದಾರೆ.












Click it and Unblock the Notifications