ತೆಲಂಗಾಣದಲ್ಲಿ ಟಿಡಿಪಿ ಜೊತೆ ಬಿಜೆಪಿ ಕೈಜೋಡಿಸಲು ಆಗಲ್ವಾ?
ನವದೆಹಲಿ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಂಡು ಮತ್ತೊಮ್ಮೆ ಸರ್ಕಾರ ರಚಿಸುವ ಗುರಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷದ್ದು. ಆದರೆ ವಿಪಕ್ಷಗಳು ಈ ಬಾರಿ ಬಿಜೆಪಿಗೆ ಸೋಲಿನ ರುಚಿ ತೋರಿಸಲು ಕಾಯ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ಸಂದರ್ಭದಲ್ಲಿ ಹೊಸ ತಂತ್ರ ಪ್ರಯೋಗಿಸಿದ್ದಾರೆ!
ಹೌದು, ಬರೋಬ್ಬರಿ 5 ವರ್ಷ ನಂತರ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನ ಕಳೆದ ಶನಿವಾರ ರಾತ್ರಿ ಅಮಿತ್ ಶಾ ಭೇಟಿಯಾಗಿದ್ದಾರೆ. ಆದ್ರೆ 2019ರ ಲೋಕಸಭೆ ಚುನಾವಣೆಗೆ ಮೊದಲು, ಆಂಧ್ರ ಮಾಜಿ ಸಿಎಂ ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿದ್ದರು. ಈಗ ಮತ್ತೊಮ್ಮೆ ಸ್ನೇಹ ಬೆಸುಗೆ ಹಾಕಲು ಎರಡೂ ಪಕ್ಷಗಳು ಪ್ರಯತ್ನ ಆರಂಭಿಸಿರುವ ಮುನ್ಸೂಚನೆ ಇದೀಗ ಸಿಗುತ್ತಿದೆ. ಆದರೆ ಈ ಹೊತ್ತಲ್ಲೇ ತೆಲಂಗಾಣದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಭಯ ಕೂಡ ಶುರುವಾಗಿದೆ.
ತೆಲಂಗಾಣ ಚುನಾವಣೆ ಮೇಲೆ ಕಣ್ಣು?
2019ರಲ್ಲಿ ಪಿಎಂ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಚಂದ್ರಬಾಬು ನಾಯ್ಡು ಸಿಡಿದು ಕೇಂದ್ರ ನಾಯಕರನ್ನು ಟೀಕಿಸುತ್ತಲೇ ಬಂದರು. ಅಲ್ಲದೆ ಎನ್ಡಿಎ ಸರ್ಕಾರದ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಿತ್ತು ಟಿಡಿಪಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆದು ವಿವಾದ ಹುಟ್ಟುಹಾಕಿದ್ದರು ಚಂದ್ರಬಾಬು ನಾಯ್ಡು. ಆದ್ರೆ ಈಗ ನೋಡಿದ್ರೆ ಮತ್ತೆ ಎನ್ಡಿಎ ಒಕ್ಕೂಟ ಸೇರುವ ಮುನ್ಸೂಚನೆ ಸಿಗುತ್ತಿದೆ. ತೆಲಂಗಾಣ ಚುನಾವಣೆಯನ್ನೇ ಮುಖ್ಯ ಗುರಿಯಾಗಿಸಿ ನಾಯ್ಡು ಅಸ್ತ್ರ ಪ್ರಯೋಗಿಸಿದಂತೆ ಕಾಣುತ್ತಿದೆ. ಇಷ್ಟೆಲ್ಲದರ ನಡುವೆ ಇದೇ ಸಂದರ್ಭದಲ್ಲಿ ಬಿಜೆಪಿ ಸ್ಥಳೀಯ ನಾಯಕರಿಗೆ ಆತಂಕ ಕಾಡುತ್ತಿದೆಯಂತೆ.
ಮೈತ್ರಿಗೆ ಬಿಜೆಪಿ ಕಾರ್ಯಕರ್ತರ ವಿರೋಧ?
ಕಳೆದ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಜೊತೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡಿತ್ತು. ಅದರೆ ಇಬ್ಬರೂ ಹೀನಾಯ ಸೋಲು ಕಾಣಬೇಕಾಗಿ ಬಂದಿತ್ತು. ಈ ಸೋಲಿಗೆ ಟಿಡಿಪಿ ನಿಲುವುಗಳೇ ಕಾರಣ ಎಂಬ ಆರೋಪವು ಇದೆ. ಹೀಗಾಗಿ ಮತ್ತೊಮ್ಮೆ ಬಿಜೆಪಿ ಕೇಂದ್ರ ನಾಯಕರು ಇಂತಹ ತಪ್ಪು ಮಾಡುವುದು ಬೇಡ ಅನ್ನೋ ಮಾತು ಕೂಡ ಕೇಳಿಬರುತ್ತಿದೆ. ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಮುಖಂಡರು ಈ ವಾದ ಮುಂದಿಟ್ಟು ಟಿಡಿಪಿ ಜೊತೆ ಮೈತ್ರಿ ಬೇಡ ಅಂತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಕರ್ನಾಟಕ ಚುನಾವಣೆ ಕಲಿಸಿದ ಪಾಠ?
ಅತ್ತ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಒಂದಾಗುತ್ತಿವೆ. ಆದ್ರೆ ಈ ಸಂದರ್ಭದಲ್ಲೇ ಬಿಜೆಪಿ ಕೂಡ ಅಲರ್ಟ್ ಆಗಿದೆ. ಅದರಲ್ಲೂ ಕರ್ನಾಟಕ ಚುನಾವಣೆ ಭೀಕರ ಸೋಲು ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದಂತೆ ಕಾಣುತ್ತಿದೆ. ಟಿಡಿಪಿ ಹಾಗೂ ಅಕಾಲಿ ದಳದ ಜೊತೆ ಮೈತ್ರಿಗೆ BJP ಮುಂದಾಗಿದೆ ಎಂಬ ಮಾತು ಕೇಳಿಬಂದಿತ್ತು. ಆದ್ರೆ ಈ ಹೊತ್ತಲ್ಲೇ ತೆಲಂಗಾಣ ಸ್ಥಳೀಯ ಬಿಜೆಪಿ ಮುಖಂಡರು ಮೈತ್ರಿ ಬಗ್ಗೆ ಅತಿಯಾದ ಒಲವು ಹೊಂದಿಲ್ಲ ಅನ್ನೋ ಮಾತು ಕೇಳಿಬಂದಿದೆ. ಹೀಗೆ ಲೋಕಸಭೆ ಚುನಾವಣೆಗೆ ಮುನ್ನ ತೀವ್ರ ಕುತೂಹಲ ಮೂಡಿದೆ.
ಚಂದ್ರಬಾಬು ನಾಯ್ಡುಗೆ ಅನಿವಾರ್ಯ ಯುದ್ಧ!
ಅಷ್ಟಕ್ಕೂ ಸಾಲು ಸಾಲು ಸೋಲಿನಿಂದ ಕಂಗೆಟ್ಟು ಹೋಗಿರುವ ಚಂದ್ರಬಾಬು ನಾಯ್ಡುಗೆ ಈ ಚುನಾವಣೆ ಅಗ್ನಿಪರೀಕ್ಷೆ. ಅದರಲ್ಲೂ ತೆಲಂಗಾಣ ಚುನಾವಣೆಯಲ್ಲಿ ಈ ಬಾರಿ ಗೆಲುವು ಸಾಧಿಸಬೇಕು ಅಂತಾ ಪಣತೊಟ್ಟು ನಿಂತಿದ್ದಾರೆ ಚಂದ್ರಬಾಬು ನಾಯ್ಡು. ಇದೇ ಕಾರಣಕ್ಕೆ ಎನ್ಡಿಎ ಜೊತೆಗೂ ಮೈತ್ರಿ ಮಾತುಗಳು ಕೇಳಿಬರುತ್ತಿವೆ ಅನ್ನೋ ಆರೋಪ ಇದೆ. ಆದರೆ ಇದ್ಯಾವುದಕ್ಕೂ ಅಧಿಕೃತ ಉತ್ತರ ಸಿಗುತ್ತಿಲ್ಲ. ಇಷ್ಟೆಲ್ಲಾ ಗೊಂದಲದ ನಡುವೆ, ಕೇಂದ್ರದ ಬಿಜೆಪಿ ನಾಯಕರು ಟಿಡಿಪಿ ಜೊತೆ ಕೈಜೋಡಿಸುತ್ತಾರಾ? ಎಂಬ ಅನುಮಾನ ಶುರುವಾಗಿದೆ.
ಒಟ್ನಲ್ಲಿ ಲೋಕಸಭೆ ಚುನಾವಣೆಗೆ ಅಧಿಕೃತವಾಗಿ ಎಲ್ಲ ಪಕ್ಷಗಳು ತಯಾರಿ ಆರಂಭಿಸಿದಂತೆ ಕಾಣುತ್ತಿದೆ. ಈ ಬಾರಿ ವಿರೋಧ ಪಕ್ಷಗಳು 1 ವರ್ಷ ಮೊದಲೇ ಸಿದ್ಧತೆ ಶುರು ಮಾಡಿವೆ. ಈ ಹಿನ್ನೆಲೆ ಆಡಳಿತ ಪಕ್ಷ ಕೂಡ ಅಲರ್ಟ್ ಆಗಿ ಹಳೇ ದೋಸ್ತಿಗಳ ಜೊತೆಗೆ ಮತ್ತೆ ಸ್ನೇಹ ಸಂಬಂಧ ಬೆಸೆಯುವ ಸೂಚನೆ ನೀಡಿದೆ. ಆದ್ರೆ ಇದಕ್ಕೆ ಸ್ಥಳೀಯ ಮಟ್ಟದಲ್ಲಿ ವಿರೋಧವು ವ್ಯಕ್ತವಾಗುತ್ತಿದೆ ಅನ್ನೋ ಆರೋಪ ಇದೆ. ಹಾಗೇ ಇದನ್ನೆಲ್ಲಾ ಎದುರುಸಿದ ನಂತರ ಮೈತ್ರಿ ಜೊತೆಗೆ ಚುನಾವಣೆಯನ್ನೂ ಎದುರಿಸಬೇಕಿದೆ.