ಲೋಕಸಭೆಯಲ್ಲೂ ಪಾಸಾದ ಲೋಕಪಾಲ ಮಸೂದೆ
ನವದೆಹಲಿ, ಡಿ.18: ಭ್ರಷ್ಟಾಚಾರ ವಿರೋಧಿ ಅಸ್ತ್ರ ಎನಿಸಿರುವ ಲೋಕಪಾಲ ವಿಧೇಯಕ ಲೋಕ ಸಭೆಯಲ್ಲಿ ಬುಧವಾರ ಸರ್ವಾನುಮತದ ಅಂಗಿಕಾರ ಲಭಿಸಿದೆ. ರಾಜ್ಯಸಭೆಯಲ್ಲಿ ಮಂಗಳವಾರ ಅಂಗೀಕಾರ ಪಡೆದಿತ್ತು. ಈ ಮೂಲಕ ಐದು ದಶಕಗಳ ಬೇಡಿಕೆಯಾಗಿದ್ದ ಲೋಕಪಾಲ ಮಸೂದೆ ಈಗ ಕಾನೂನಿನ ಸ್ವರೂಪ ಹೊಂದಿದೆ. ಲೋಕಪಾಲ್ ಮಸೂದೆ ಬಗ್ಗೆ ಸುಮಾರು ಐದು ಗಂಟೆಗಳಷ್ಟು ಸುದೀರ್ಘ ಚರ್ಚೆ ಬಳಿಕ ಧ್ವನಿ ಮತದ ಮೂಲಕ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿತ್ತು.
ಭ್ರಷ್ಟಚಾರಿ ಅಧಿಕಾರಿಗೆ ಯಾವುದೇ ನೋಟಿಸ್ ನೀಡದೆ ಸಿಬಿಐ ಅಥವಾ ಪೊಲೀಸರು ಹಠಾತ್ ದಾಳಿ ನಡೆಸುವ ಅಧಿಕಾರ ಒದಗಿಸುವಂತೆ ಬಿಜೆಪಿ ಮಾಡಿಕೊಂಡ ಮನವಿಯನ್ನು ಯುಪಿಎ ಪುರಸ್ಕರಿಸಿ, ವಿಧೇಯಕದಲ್ಲಿ ಸೇರ್ಪಡೆಗೊಳಿಸಿದೆ. 2011ರ ಡಿಸೆಂಬರ್ ನಲ್ಲಿ ಇದೇ ವಿಧೇಯಕ ಲೋಕಸಭೆಯಲ್ಲಿ ಪಾಸ್ ಆಗಿದ್ದರೂ ರಾಜ್ಯ ಸಭೆಯಲ್ಲಿ ನಪಾಸಾಗಿತ್ತು. ನಂತರ ಸಂಸದೀಯ ಸಮಿತಿಯ ಪರಾಮರ್ಶನೆಗೆ ಕಳಿಸಲಾಗಿತ್ತು. ಕೆಲವು ತಿದ್ದುಪಡಿಗಳೊಂದಿಗೆ ಮತ್ತೊಮ್ಮೆ ರಾಜ್ಯ ಸಭೆಯಲ್ಲಿ ಮಸೂದೆ ಮಂಡನೆಯಾಗಿದೆ. ಆದರೆ, ಲೋಕಸಭೆಯಲ್ಲಿ ಪುನಃ ವಿಧೇಯಕಕ್ಕೆ ಸಮ್ಮಿತಿ ಸಿಕ್ಕಿದೆ.

ಲೋಕಪಾಲ ಮಸೂದೆಗೆ ಸಂಸದೀಯ ಸಮಿತಿ ಮಾಡಿದ್ದ ಮೂರು ಶಿಫಾರಸುಗಳನ್ನು ಹೊರತುಪಡಿಸಿ ಉಳಿದ ತಿದ್ದುಪಡಿಗಳಿಗೆ ಸರ್ಕಾರ ಒಪ್ಪಿಗೆ ನೀಡಿತ್ತು
* ಲೋಕಪಾಲರನ್ನು ಪ್ರಧಾನಿ, ಸ್ಪೀಕರ್, ಲೋಕಸಭಾ ಪ್ರತಿಪಕ್ಷ ನಾಯಕ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ರಾಷ್ಟ್ರಪತಿಗಳ ಶಿಫಾರಸಿನಂತೆ ನೇಮಕಗೊಂಡ ಖ್ಯಾತ ನ್ಯಾಯತಜ್ಞರನ್ನೊಳಗೊಂಡ ಸಮಿತಿ ನೇಮಕ ಮಾಡಬೇಕು.
* ಲೋಕಪಾಲಕ್ಕೆ ಸಂಬಂಧಿಸಿದ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯನ್ನು ವರ್ಗಾವಣೆ ಮಾಡಬಾರದು.
ಲೋಕಪಾಲ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಲೋಕಸಭೆಯಲ್ಲಿ ವಿಧೇಯಕಕ್ಕೆ ಬಹುಮತ ಸಿಕ್ಕಿದ ಬೆನ್ನಲ್ಲೇ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಆದರೆ, ಕಾನೂನು ಜಾರಿಯಾದ ತಕ್ಷಣ ಭ್ರಷ್ಟಾಚಾರ ನಿರ್ಮೂಲನೆಯಾಗುವುದಿಲ್ಲ. ಶೇ 50 ರಷ್ಟು ಭ್ರಷ್ಟರಿಗೆ ತಕ್ಷಣಕ್ಕೆ ಚುರುಕು ಮುಟ್ಟುತ್ತದೆ. ಜನರ ಅಪೇಕ್ಷೆಯಂತೆ ಲೋಕಪಾಲ ಮಸೂದೆ ಮಂಡನೆಯಾಗಿದೆ. ಸಮಾಜವಾದಿ ಪಕ್ಷ ಹೊರತಾಗಿ ಎಲ್ಲಾ ಸಂಸದರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ನಿರಶನ ಕೂತಿದ್ದ ಸ್ಥಳದಿಂದ ಎದ್ದು ನಿಂತು ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರು. ನಂತರ ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆ ಕೂಗಿದರು.












Click it and Unblock the Notifications