ಬಿಜೆಪಿ ಗೆದ್ದರೆ ಅನುಕೂಲ: ಅಚ್ಚರಿ ಮೂಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ
ಇಸ್ಲಾಮಾಬಾದ್, ಏಪ್ರಿಲ್ 10: ಭಾರತದ ವಿರುದ್ಧ, ಅದರಲ್ಲಿಯೂ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಉತ್ತಮ ಅವಕಾಶ ಸಿಗಲಿದೆ ಎಂದು ಇಮ್ರಾನ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮುಂದಿನ ಸರ್ಕಾರವು ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾದರೆ ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ವಿವಾದ ಬಗೆಹರಿಸಲು ಅದು ತುಂಬಾ ಹೆದರುವ ಸಾಧ್ಯತೆ ಇದೆ. ಏಕೆಂದರೆ ಅವರಿಗೆ ಬಲಪಂಥೀಯರ ವಿರೋಧದ ಭಯ ಕಾಡುತ್ತದೆ.
ಬಹುಶಃ ಬಲಪಂಥೀಯ ಪಕ್ಷ ಬಿಜೆಪಿ ಗೆದ್ದರೆ ಕಾಶ್ಮೀರದಲ್ಲಿ ಒಂದು ರೀತಿಯ ಪರಿಹಾರ ಕಂಡುಕೊಳ್ಳಬಹುದು ಎಂದು ಇಮ್ರಾನ್ ಖಾನ್ ವಿದೇಶಿ ಪತ್ರಕರ್ತರೊಂದಿಗೆ ನಡೆದ ಸಂದರ್ಶನದಲ್ಲಿ ಹೇಳಿದ್ದಾರೆ.
'ಭಾರತದಲ್ಲಿ ಈಗ ಏನಾಗುತ್ತಿದೆ ಎಂಬುದನ್ನು ಎಂದೂ ಯೋಚಿಸಿರಲಿಲ್ಲ. ಮುಸ್ಲಿಮ್ನೆಸ್ ಮೇಲೆ ದಾಳಿ ಮಾಡಲಾಗುತ್ತಿದೆ. ನನಗೆ ತಿಳಿದಿರುವಂತೆ ಹಲವು ವರ್ಷಗಳ ಹಿಂದೆ ತಮ್ಮ ಸ್ಥಿತಿ ಬಗ್ಗೆ ಖುಷಿಯಿಂದ ಇದ್ದ ಭಾರತದ ಮುಸ್ಲಿಮರು ಈಗ ಮಿತಿಮೀರಿದ ಹಿಂದೂ ರಾಷ್ಟ್ರೀಯತೆಯಿಂದ ಕಳವಳಗೊಂಡಿದ್ದಾರೆ' ಎಂದು ಇಮ್ರಾನ್ ಹೇಳಿದ್ದಾರೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಂತೆಯೇ ಮೋದಿ 'ಭಯ ಮತ್ತು ರಾಷ್ಟ್ರೀಯವಾದದ ಭಾವನೆ'ಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಇಮ್ರಾನ್ ಅಭಿಪ್ರಾಯಪಟ್ಟಿದ್ದಾರೆ.
ಇಮ್ರಾನ್ ಖಾನ್ ಹೇಳಿಕೆ ಬಿಜೆಪಿ ಮತ್ತು ಮೋದಿ ವಿರೋಧಿಗಳಿಗೆ ಬೃಹತ್ ಅಸ್ತ್ರವಾಗಿ ದೊರೆತಿದೆ. ಪಾಕಿಸ್ತಾನದ ಪರ ಅನುಕಂಪ ಹೊಂದಿರುವವರು ಮತ್ತು ಪಾಕಿಸ್ತಾನ ಮಾತ್ರ ಬಿಜೆಪಿ ಸೋಲನ್ನು ಬಯಸುತ್ತಿದೆ ಎಂದು ಮೋದಿ ಇತ್ತೀಚೆಗೆ ಹೇಳಿದ್ದರು. ಈಗ ಇಮ್ರಾನ್ ಖಾನ್, ಬಿಜೆಪಿ ಮತ್ತೆ ಗೆದ್ದು ಬಂದರೆ ಅನುಕೂಲ ಎಂದಿರುವುದನ್ನು ವಿರೋಧ ಪಕ್ಷಗಳು ಮೋದಿ ಅವರ ಟೀಕೆಗೆ ಬಳಸಿಕೊಂಡಿವೆ.

ಕಾಶ್ಮೀರ ರಾಜಕೀಯ ಸಮಸ್ಯೆ
ಕಾಶ್ಮೀರವು ಒಂದು ರಾಜಕೀಯ ಸಮಸ್ಯೆ. ಅದಕ್ಕೆ ಯಾವುದೇ ಸೇನಾ ಪರಿಹಾರವಿಲ್ಲ. ಶಸ್ತ್ರಸಜ್ಜಿತ ಉಗ್ರರು ಪಾಕಿಸ್ತಾನದಿಂದ ಗಡಿದಾಟಿ ಹೋಗಿ ಭಾರತದ ಸೇನೆಗೆ ಬಲಿಯಾದರೆ ಕಾಶ್ಮೀರಿಗಳೇ ಸಂಕಷ್ಟ ಅನುಭವಿಸುತ್ತಾರೆ ಎಂದಿದ್ದಾರೆ.

ವಿರುದ್ಧವಾದರೆ ಕಾರ್ಯಾಚರಣೆ ಸಾಧ್ಯತೆ
ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಅದಕ್ಕೆ ಭಾರತದ ಸರ್ಕಾರದ ತಕ್ಷಣದ ಪ್ರತಿಕ್ರಿಯೆಯಿಂದ ಬಳಿಕ ಉಂಟಾದ ದೇಶಭಕ್ತಿಯ ಅಲೆಯಿಂದ ಮೋದಿ ಮತ್ತು ಬಿಜೆಪಿ ಮರು ಆಯ್ಕೆಯ ಅವಕಾಶವನ್ನು ವೃದ್ಧಿಸಿಕೊಂಡಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ಚುನಾವಣೆಯು ಮೋದಿ ಅವರ ವಿರುದ್ಧ ನಡೆದರೆ ಪಾಕಿಸ್ತಾನದ ವಿರುದ್ಧ ಭಾರತ ಕೆಲವು ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇನ್ನೂ ಇದೆ ಎಂದು ಇಮ್ರಾನ್ ಹೇಳಿದ್ದಾರೆ.
|
ಪಾಕ್ ಅಧಿಕೃತ ಮೈತ್ರಿ
ಪಾಕಿಸ್ತಾನವು ಮೊದಿ ಅವರೊಂದಿಗೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ. ಮೋದಿ ಅವರಿಗೆ ಒಂದು ಮತ, ಪಾಕಿಸ್ತಾನಕ್ಕೆ ಒಂದು ಮತದಂತೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಮೋದಿ ಜಿ ಮೊದಲು ನವಾಜ್ ಷರೀಫ್, ಈಗ ಇಮ್ರಾನ್ ಖಾನ್ ನಿಮ್ಮ ಸ್ನೇಹಿತ. ರಹಸ್ಯ ಬಯಲಾಯಿತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ.
|
ಭಕ್ತರು ತಲೆ ಕೆರೆದುಕೊಳ್ಳುತ್ತಿದ್ದಾರೆ
ಭಕ್ತರು ತಮ್ಮ ತಲೆಗಳನ್ನು ಕೆರೆದುಕೊಳ್ಳುತ್ತಿದ್ದಾರೆ. ತಾವು ಇಮ್ರಾನ್ ಖಾನ್ ಅವರನ್ನು ಹೊಗಳಬೇಕೋ ಅಥವಾ ಬೇಡವೋ ಎಂಬ ಸಂದಿಗ್ಧದಲ್ಲಿದ್ದಾರೆ ಎಂಬುದಾಗಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಗೇಲಿ ಮಾಡಿದ್ದಾರೆ.
|
ಮೋದಿ ಹೇಳಿದ್ದೇನು?
ಮೋದಿ ಸಾಹಿಬ್ ದೇಶಕ್ಕೆ ಹೇಳುತ್ತಿದ್ದರು, ಪಾಕಿಸ್ತಾನ ಮತ್ತು ಅದರ ಬಗ್ಗೆ ಅನುಕಂಪ ಹೊಂದಿರುವವರು ಮಾತ್ರ ಬಿಜೆಪಿ ಸೋಲಲಿ ಎಂದು ಬಯಸುತ್ತಿದ್ದಾರೆ ಎಂದು. ಈಗ ಮೋದಿ ಎರಡನೆಯ ಅವಧಿಗೆ ಬರಲಿ ಎಂದು ಇಮ್ರಾನ್ ಖಾನ್ ಅಪೇಕ್ಷಿಸಿದ್ದಾರೆ ಎಂದು ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಒಮರ್ ಅಬ್ದುಲ್ಲಾ, ಮೋದಿಯನ್ನು ಟೀಕಿಸಿದ್ದಾರೆ.












Click it and Unblock the Notifications