ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಲಿದ್ದಾರೆಯೇ ನವೀನ್ ಪಟ್ನಾಯಕ್?
ನವದೆಹಲಿ, ಮೇ 20: ಒಡಿಶಾದಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಸುಮಾರು 9 ವರ್ಷ ಆಡಳಿತ ನಡೆಸಿದ್ದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ, ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯೇ?
ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಲೆಕ್ಕಾಚಾರ ಸಿಕ್ಕ ಬಳಿಕ ನವೀನ್ ಪಟ್ನಾಯಕ್, ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಡಿಶಾಕ್ಕೆ ನೆರವಾಗುವ ಯಾವುದೇ ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧರಿರುವುದಾಗಿ ಬಿಜೆಡಿ ತಿಳಿಸಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಈ ಮೂಲಕ ಬಿಜೆಡಿ, ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಎಕ್ಸಿಟ್ ಪೋಲ್ ತಿಳಿಸಿರುವಂತೆಯೇ ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಪಡೆದರೆ, ಅದಕ್ಕೆ ಬೆಂಬಲ ನೀಡಲಿದೆ. ಒಂದು ವೇಳೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ಬಿಜೆಡಿ ಆ ಸರ್ಕಾರಕ್ಕೂ ಬೆಂಬಲ ನೀಡುವ ಸಾಧ್ಯತೆ ಇದೆ.
ಒಡಿಶಾದ ಪ್ರಾದೇಶಿಕ ಪಕ್ಷವಾದ ಬಿಜು ಜನತಾ ದಳ, ಬಿಜೆಪಿಯೊಂದಿಗೆ ಒಂದು ದಶಕದ ಮೈತ್ರಿ ಹೊಂದಿತ್ತು. 2000-2009ರವರೆಗೂ ಒಡಿಶಾದಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಮೈತ್ರಿ ಸರ್ಕಾರ ನಡೆಸಿದ್ದವು. ಈ ಎರಡೂ ಪಕ್ಷಗಳ ನಡುವಿನ ಮೈತ್ರಿ ಮುರಿದುಬಿದ್ದ ಬಳಿಕ ಬಿಜೆಪಿಯನ್ನು 'ಕೋಮುವಾದಿ' ಎಂದು ನವೀನ್ ಪಟ್ನಾಯಕ್ ಟೀಕಿಸಿದ್ದರು.
ಬಿಜೆಪಿಯನ್ನು ತಡೆಯಲಾಗದಿದ್ದ ಮೇಲೆ ಕಾಂಗ್ರೆಸ್ ಸಾಯಲೇಬೇಕು: ಯೋಗೇಂದ್ರ ಯಾದವ್
ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೂ ಪಟ್ನಾಯಕ್, ಬಿಜೆಪಿಯನ್ನು ಕೋಮುವಾದಿ ಎಂದು ಟೀಕಿಸುವುದನ್ನು ಮುಂದುವರಿಸಿದ್ದರು. ಹಾಗೆಯೇ ಕಾಂಗ್ರೆಸ್ ಭ್ರಷ್ಟ ಪಕ್ಷ ಎಂದು ಆರೋಪಿಸಿದ್ದರು. ಆದರೆ, ಅವರು ಈಗ ನಿಲುವು ಬದಲಿಸಿದ್ದು, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿಯೊಂದಿಗೆ ಸೇರಿಕೊಳ್ಳಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಯಾವುದೇ ಪಕ್ಷಕ್ಕೆ ಬೆಂಬಲ
ಕೆಲವು ದಿನಗಳ ಮೊದಲು ಬಿಜೆಡಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಳ್ಳುವ ನೀತಿಯನ್ನು ಮುಂದುವರಿಸುವುದಿಲ್ಲ. ಒಡಿಶಾದ ಹಿತಾಸಕ್ತಿಯನ್ನು ಬೆಂಬಲಿಸುವ ಯಾವುದೇ ಪಕ್ಷವನ್ನು ಬಿಜೆಡಿ ಬೆಂಬಲಿಸಲಿದೆ ಎಂದು ಬಿಜೆಡಿ ಉಪಾಧ್ಯಕ್ಷ ಎಸ್ ಎನ್ ಪತ್ರೋ ಎರಡು ದಿನಗಳ ಹಿಂದೆ ಹೇಳಿದ್ದರು.
ಉ.ಪ್ರದೇಶ: ಮತದಾನದ ನಂತರ ಮಿತ್ರ ಪಕ್ಷವನ್ನು ಹೊರಹಾಕಿದ ಬಿಜೆಪಿ
ಒಡಿಶಾ ಹಿತಾಸಕ್ತಿ ಕಾಪಾಡುವವರಿಗೆ ಬೆಂಬಲ
'ಒಡಿಶಾದಲ್ಲಿ ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಒಪ್ಪಿಕೊಳ್ಳುವ ಮತ್ತು ಕೇಂದ್ರದಲ್ಲಿ ಸರ್ಕಾರ ರಚಿಸುವ ಯಾವುದೇ ಪಕ್ಷ ಅಥವಾ ಯಾವುದೇ ರೀತಿಯ ಸಂಯೋಜನೆಗೆ ನಾವು ಬಹುಶಃ ಬೆಂಬಲ ನೀಡಬಹುದು' ಎಂದು ಪಕ್ಷದ ನಾಯಕ ಅಮರ್ ಪಟ್ನಾಯಕ್ ತಿಳಿಸಿದ್ದಾರೆ.
ಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿ
ಬಿಜೆಪಿಗೆ ಹೆಚ್ಚು ಸ್ಥಾನ
ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 12ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ವಿವಿಧ ಸಮೀಕ್ಷೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಆಡಳಿತಾರೂಢ ಬಿಜೆಡಿ 6-9 ಸ್ಥಾನಗಳವರೆಗೆ ಗೆಲ್ಲಬಹುದು ಎನ್ನಲಾಗಿದೆ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.
ಪರಸ್ಪರ ಶ್ಲಾಘಿಸಿದ್ದ ಮೋದಿ-ನವೀನ್
ಫ್ಯಾನಿ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೆಗೆದುಕೊಂಡ ನಿರ್ಧಾರಗಳನ್ನು, ಪರಿಸ್ಥಿತಿಯನ್ನು ನಿಭಾಯಿಸಿದ ಬಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ತುರ್ತು ಅಗತ್ಯದ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರಕ್ಕೆ ಪಟ್ನಾಯಕ್ ಕೃತಜ್ಞತೆ ಸಲ್ಲಿಸಿದ್ದರು. ಈ ಇಬ್ಬರ ವಿಚಾರ ವಿನಿಮಯಗಳು ಚುನಾವಣೋತ್ತರ ಮೈತ್ರಿಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದವು.