ಭಾನುವಾರ ನಡೆಯುವ ಚುನಾವಣೆ ಮೋದಿಗೆ ಅತಿ ಮಹತ್ವದ್ದು ಏಕೆ?
ನವದೆಹಲಿ, ಮೇ 8: ಲೋಕಸಭೆಯ 545 ಸೀಟುಗಳ ಪೈಕಿ 118 ಸೀಟುಗಳಿಗೆ ಚುನಾವಣೆ ಬಾಕಿ ಉಳಿದಿದೆ. ಮೇ 19ರಂದು ಏಳನೇ ಮತ್ತು ಕೊನೆಯ ಹಂತದ ಚುನಾವಣೆ ಅಂತ್ಯಗೊಳ್ಳಲಿದೆ. ಅದಕ್ಕೂ ಮೊದಲು ಮೇ 12ರ ಭಾನುವಾರ ನಡೆಯಲಿರುವ 59 ಕ್ಷೇತ್ರಗಳಲ್ಲಿನ ಚುನಾವಣೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯಂತ ಮಹತ್ವದ್ದೆನಿಸಿದೆ.
ಏಕೆಂದರೆ, ಈ 59 ಕ್ಷೇತ್ರಗಳ ಪೈಕಿ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 44ರಲ್ಲಿ ಜಯಭೇರಿ ಭಾರಿಸಿತ್ತು. ಈ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಸವಾಲು ಬಿಜೆಪಿ ಮುಂದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇದರಲ್ಲಿ ಉತ್ತರ ಪ್ರದೇಶದ 14 ಕ್ಷೇತ್ರಗಳಿದ್ದು, 12 ಬಿಜೆಪಿ ಪಾಲಾಗಿದ್ದವು. 12ರಲ್ಲಿ ಒಂದು ಸ್ಥಾನ ಬಿಜೆಪಿಯ ಮಿತ್ರ ಪಕ್ಷ ಅಪ್ನಾದಳದ್ದಾಗಿದ್ದರೆ, ಇನ್ನೊಂದು ಸಮಾಜವಾದಿ ಪಕ್ಷಕ್ಕೆ ಒಲಿದಿತ್ತು. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಭರ್ಜರಿ ಜಯಭೇರಿ ಭಾರಿಸಿತ್ತು.
ಬೆಟ್ಟಿಂಗ್ ಬಜಾರ್ ಭವಿಷ್ಯ: ಮ್ಯಾಜಿಕ್ ನಂಬರ್ ಎನ್ಡಿಎಗೂ ಮರೀಚಿಕೆ!
ಹರಿಯಾಣದ ಎಲ್ಲ 12 ಕ್ಷೇತ್ರಗಳಿಗೂ ಮೇ 12ರಂದು ಚುನಾವಣೆ ನಡೆಯಲಿದೆ. 2014ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಏಳು ಸೀಟುಗಳಲ್ಲಿ ಗೆದ್ದಿದ್ದರೆ, ಇಂಡಿಯನ್ ನ್ಯಾಷನಲ್ ಲೋಕದಳ ಎರಡು ಮತ್ತು ಕಾಂಗ್ರೆಸ್ ಕೇವಲ ಒಂದು ಸೀಟುಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಅವರ ಎದುರು ಜಿಂದ್ ವಿಧಾನಸಭೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಉತ್ಸಾಹದಲ್ಲಿರುವ ಬಿಜೆಪಿಗೆ, ಜಾಟ್ ಕೋಟಾ ಹೋರಾಟ ಸಂಕಷ್ಟ ತಂದೊಡ್ಡಿದೆ.
ಬಿಹಾರ
ಬಿಹಾರದಲ್ಲಿ ಭಾನುವಾರ ಎಂಟು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಏಳರಲ್ಲಿ ಗೆದ್ದು ಬೀಗಿದ್ದರೆ, ಇನ್ನೊಂದು ಕ್ಷೇತ್ರ ಅದರ ಮಿತ್ರ ಪಕ್ಷ ಲೋಕ ಜನಶಕ್ತಿ ಪಕ್ಷಕ್ಕೆ ದೊರಕಿತ್ತು. ವಿರೋಧಪಕ್ಷಗಳು ಇಲ್ಲಿ ಸಂಪೂರ್ಣ ಧೂಳೀಪಟವಾಗಿದ್ದವು. ಆರ್ಜೆಡಿ ಮತ್ತು ಕಾಂಗ್ರೆಸ್ ಜತೆಗೂಡಿ ಈ ಚುನಾವಣೆಯನ್ನು ಎದುರಿಸಿದ್ದವು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಒಂದು ವರ್ಷದ ಬಳಿಕ ಈ ಮೂರೂ ಪಕ್ಷಗಳು ವಿಧಾನಸಭೆ ಚುನಾವಣೆಯನ್ನು ಒಂದಾಗಿ ಎದುರಿಸಿದ್ದವು. ಮಹಾ ಮೈತ್ರಿಕೂಟ ಬಿಜೆಪಿಗೆ ಭಾರಿ ಅಘಾತ ನೀಡಿದ್ದವು.
ಆರ್ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ನಿತೀಶ್ ಕುಮಾರ್ ಮಹಾಮೈತ್ರಿಕೂಟದಿಂದ ಹೊರಬಂದು 2017ರಲ್ಲಿ ಎನ್ಡಿಎಗೆ ಮರಳಿ ಸರ್ಕಾರ ರಚಿಸಿದರು. ಈಗ ಜೆಡಿಯು, ಬಿಜೆಪಿ ಮತ್ತು ಎಲ್ಜೆಪಿ ಮೈತ್ರಿಕೂಟ ಚುನಾವಣೆ ಎದುರಿಸುತ್ತಿದೆ. ಆರ್ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆಗೆಳಿದಿವೆ.
ಮೋದಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ಮಾಡಬೇಕು: ಮಮತಾ
ಪಶ್ಚಿಮ ಬಂಗಾಳ
ಭಾನುವಾರ ಪಶ್ಚಿಮ ಬಂಗಾಳದಲ್ಲಿ ಎಂಟು ಕ್ಷೇತ್ರಗಳ ಚುನಾವಣೆ ತೃಣಮೂಲ ಕಾಂಗ್ರೆಸ್ನ ಭದ್ರಕೋಟೆಯಲ್ಲಿ ನಡೆಯಲಿದೆ. ಈ ಎಲ್ಲ ಕ್ಷೇತ್ರಗಳೂ ಟಿಎಂಸಿ ಹಿಡಿತದಲ್ಲಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಕಾದಾಟದ ಪ್ರತಿಷ್ಠೆಯ ಕಣಗಳಿವು. ಈ ಎಂಟೂ ಕ್ಷೇತ್ರಗಳನ್ನು ದೀದಿ ಉಳಿಸಿಕೊಳ್ಳಲಿದ್ದಾರೆಯೇ ಅಥವಾ ಬಿಜೆಪಿ ಇಲ್ಲಿಯೂ ಕೋಟೆಯನ್ನು ಭೇದಿಸಲಿದೆಯೇ ನೋಡಬೇಕು.
'ಬಿಜೆಪಿಯಲ್ಲೇ ಕಿಂಗ್ ಇದ್ದಾರೆ, ಕಿಂಗ್ ಮೇಕರ್ ಬೇಕಾಗಿಲ್ಲ'
ಮಧ್ಯಪ್ರದೇಶ
ಬಿಜೆಪಿಗೆ ಸವಾಲು ಹಾಕಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು. ಏಕೆಂದರೆ ಸತತ 15 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ 2018ರಲ್ಲಿ ಅಧಿಕಾರ ಕಳೆದುಕೊಂಡಿತ್ತು. ಇದರಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವು ಸುಲಭವಲ್ಲ. 2014ರ ಚುನಾವಣೆಯಲ್ಲಿ ಇಲ್ಲಿ ಎಂಟು ಸೀಟುಗಳಲ್ಲಿ ಏಳರಲ್ಲಿ ಬಿಜೆಪಿ ವಿಜಯಮಾಲೆ ತೊಟ್ಟಿತ್ತು. ಒಂದು ಕ್ಷೇತ್ರ ಮಾತ್ರ ಕಾಂಗ್ರೆಸ್ಗೆ ದೊರಕಿತ್ತು. ಭೋಪಾಲ್ ಮತ್ತು ಗುನಾ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರಗಳು. ಭೋಪಾಲ್ನಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ವಿವಾದಿತ ಅಭ್ಯರ್ಥಿ ಬಿಜೆಪಿಯ ಸಾಧ್ವಿ ಪ್ರಗ್ಯಾ ಸಿಂಗ್ ನಡುವೆ ಪೈಪೋಟಿ ನಡೆಯುತ್ತಿದೆ. ಗುನಾದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಬಿಜೆಪಿಯ ಕೆ.ಪಿ. ಯಾದವ್ ನಡುವೆ ಸ್ಪರ್ಧೆ ಇದೆ.
ದೆಹಲಿ
ದೆಹಲಿಯಲ್ಲಿ ರಾಜಕೀಯ ಚಿತ್ರಗಳ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ಇಲ್ಲಿನ ಎಲ್ಲ ಏಳು ಲೋಕಸಭೆ ಕ್ಷೇತ್ರಗಳಲ್ಲಿಯೂ ಬಿಜೆಪಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಆದರೆ, 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 70 ಸೀಟುಗಳ ಪೈಕಿ 67ರಲ್ಲಿ ಎಎಪಿ ಗೆದ್ದಿದ್ದರೆ, ಬಿಜೆಪಿ ಕೇವಲ ಮೂರು ಸ್ಥಾನ ಗಳಿಸಿತ್ತು. ಕಾಂಗ್ರೆಸ್ ಮತ್ತು ಎಎಪಿ ನಡುವಿನ ಮೈತ್ರಿ ಗೊಂದಲ ಬಗೆಹರಿಯದೆ ಎರಡೂ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಈ ಮತವಿಭಜನೆಯ ಲಾಭ ಬಿಜೆಪಿಗೆ ದೊರಕಿದರೆ ಅಚ್ಚರಿಯಿಲ್ಲ.
ಜಾರ್ಖಂಡ್
ಭಾನುವಾರ ನಡೆಯಲಿರುವ ಜಾರ್ಖಂಡ್ನ ನಾಲ್ಕು ಕ್ಷೇತ್ರಗಳ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು. ಇಲ್ಲಿ ಬಿಜೆಪಿಯದೇ ಸರ್ಕಾರವಿದೆ. ಆದರೆ, ಕಾಂಗ್ರೆಸ್, ಜೆಎಂಎಂ, ಜೆವಿಎಂಪಿ ಮತ್ತು ಆರ್ಜೆಡಿ ಪಕ್ಷಗಳು ಮಹಾಮೈತ್ರಿಕೂಟ ಮಾಡಿಕೊಂಡು ಬಿಜೆಪಿಯನ್ನು ಎದುರಿಸುತ್ತಿವೆ. ಅಲ್ಲದೆ, ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.