ಬಿಜೆಪಿಯ ಸೋಲಿಸುವ ಏಕೈಕ ಉದ್ದೇಶದಿಂದ ಎಲ್ಲ ರಾಜಿಗೂ ಸಿದ್ಧವಾಯ್ತೇ ಕಾಂಗ್ರೆಸ್?
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಒಂದು ಗುರಿ ಕಾಂಗ್ರೆಸ್ ಕೈಯಲ್ಲಿ ಏನೆಲ್ಲ ಮಾಡಿಸುತ್ತಿದೆ ನೋಡಿ!
ಒಂದು ವಾರದ ಹಿಂದಷ್ಟೇ, 'ರಾಹುಲ್ ಗಾಂಧಿ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ' ಎಂದಿದ್ದ ಕಾಂಗ್ರೆಸ್ ಇದಿಗ ಯೂಟರ್ನ್ ತೆಗೆದುಕೊಂಡಿದೆ. ಕಾಂಗ್ರೆಸ್ ನಿಂದಲೇ ಪ್ರಧಾನಿಯಾಗಬೇಕೆಂದಿಲ್ಲ, ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಸೋಲಿಸುವ ಯಾರಿಗೇ ಆದರೂ ನಾವು ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿರುವುದು 2019 ರ ಲೋಕಸಭಾ ಚುನಾವಣೆಯ ಹಣೆಬರಹವನ್ನೇ ಬದಲಿಸುವ ಹೇಳಿಕೆ ಎಂದರೆ ತಪ್ಪಾಗಲಾರದು!
ಲೋಕಸಮರದಲ್ಲಿ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ 'ಉದಾರ ನೀತಿ'
ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಪಟ್ಟ ನೀಡಿತು ಕಾಂಗ್ರೆಸ್. ಈಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮಾಡುತ್ತಿರುವ ಕಸರತ್ತಿನ ಭಾಗವೇ, ಈ 'ಪ್ರಧಾನಿ ಅಭ್ಯರ್ಥಿ ಹೇಳಿಕೆ' ಎಂದರೆ ತಪ್ಪಾಗಲಾರದು!
ಬಿಜೆಪಿಯನ್ನು ದೂರವಿಡುವ ಯತ್ನ
ಕರ್ನಾಟಕದಲ್ಲಿ 'ಬೇಷರತ್ ಬೆಂಬಲ' ಎಂದು ಕಾಂಗ್ರೆಸ್ ಹೇಳಿದ್ದು ಸಹ ಬಿಜೆಪಿಯನ್ನು ದೂರವಿಡಬೇಕು ಎಂಬ ಕಾರಣಕ್ಕಾಗಿಯೇ. ಜೆಡಿಎಸ್ ಗಿಂತ ಹೆಚ್ಚು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ತರಾತುರಿಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡಿ ಮುಖ್ಯಮಂತ್ರಿ ಸ್ಥಾನವನ್ನೂ ನೀಡಿತು. ಕಾಂಗ್ರೆಸ್ಸಿನ ಈ ನಡೆಯ ಹಿಂದೆ ಅದರ ಅಸ್ತಿತ್ವದ ಪ್ರಶ್ನೆ ಇತ್ತು. ಈ ನಡೆಯಿಂದ ಅದು ತನ್ನನ್ನು ತಾನು ಮತ್ತಷ್ಟು ದುರ್ಬಲವಾಗುವಂತೆ ಮಾಡಿದ್ದು ಸತ್ಯ!
ಏಳು ದಶಕ ದೇಶ ಆಳಿದ ಪಕ್ಷಕ್ಕೆ ಯಾಕಿಂಥ ಸ್ಥಿತಿ?!
ಸ್ವಾತಂತ್ರ್ಯಾನಂತರ ಸುಮಾರು ಏಳು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ಸಿಗೆ ಯಾಕಿಂಥ ಸ್ಥಿತಿ ಬಂತು? ಕಾಂಗ್ರೆಸ್ಸಿನಲ್ಲಿ ಸಮರ್ಥ ನಾಯಕತ್ವದ ಕೊರತೆ ಇದೆಯಾ? ರಾಹುಲ್ ಗಾಂಧಿ ಅವರ ಕೆಲವು ಅಪ್ರಬುದ್ಧ ಮಾತು, ನಡೆಯೇ ಕಾಂಗ್ರೆಸ್ಸಿಗೆ ಹಿನ್ನಡೆಯನ್ನುಂಟು ಮಾಡಿದೆಯಾ? ಕಾಂಗ್ರೆಸ್ಸಿನಲ್ಲಿ ಪ್ರಣಬ್ ಮುಖರ್ಜಿ, ಮಲ್ಲಿಕಾರ್ಜುನ ಖರ್ಗೆ, ಪಿ.ಚಿದಂಬರಂರಂಥ ನಾಯಕರಿದ್ದರೂ ಅವರನ್ನೆಲ್ಲ ಮೂಲೆಗುಂಪು ಮಾಡಲಾಗುತ್ತಿದೆಯಾ? ಇದೇ ಕಾಂಗ್ರೆಸ್ಸಿಗೆ ನಷ್ಟವನ್ನುಂಟು ಮಾಡುತ್ತಿದೆಯಾ ಎಂಬಿತ್ಯಾದಿ ಪ್ರಶ್ನೆಗಳು ಈಗ ಎದ್ದಿವೆ.
ಮೂರು ರಾಜ್ಯ ಚುನಾವಣೆಯಲ್ಲೂ ಮೈತ್ರಿ?
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಗಳಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಬಿಎಸ್ಪಿ ಅಥವಾ ಸ್ಥಳೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಚಿಂತಿಸುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದರೂ ಚುನಾವಣೆಯಲ್ಲಿ ತಾನು ಗೆಲ್ಲಬಲ್ಲೆ ಎಂಬ ವಿಶ್ವಾಸ ಕಾಂಗ್ರೆಸ್ ಗೆ ಇದ್ದಂತಿಲ್ಲ!
ಪ್ರಧಾನಿ ಅಭ್ಯರ್ಥಿಯಾಗಿ ಮಾಯಾವತಿ
ಕಾಂಗ್ರೆಸ್ ನವರೇ ಪ್ರಧಾನಿ ಅಭ್ಯರ್ಥಿಯಾಗಬೇಕಿಲ್ಲ ಎಂದು ಸ್ವತಃ ಕಾಂಗ್ರೆಸ್ಸೇ ಹೇಳಿದೆ. ಹಾಗಾದರೆ ಕಾಂಗ್ರೆಸ್ ಅನ್ನು ಬೆಂಬಲಿಸುವ ಉಳಿದ ಪಕ್ಷಗಳಲ್ಲಿ ಪ್ರಧಾನಿ ಪಟ್ಟಕ್ಕೇರುವಷ್ಟು ಸಾಮರ್ಥ್ಯ ಯಾರಿಗಿದೆ? ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂ ಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಹೆಸರು ಪ್ರಧಾನಿ ಅಭ್ಯರ್ಥಿಯ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಆದರೆ ಮೋದಿಯವರಿಗೆ ಮುಖಾಮುಖಿಯಾಗುವ ಸಾಮರ್ಥ್ಯ ಈ ಇಬ್ಬರು ನಾಯಕಿಯರಿಗಿದೆಯಾ? ಎಂಬುದು ಈಗಿರುವ ಪ್ರಶ್ನೆ.